ಜಾರಕಿಹೊಳಿ ಪ್ರಕರಣ: 'ರಾಸಲೀಲೆ'ಗಿಂತಲೂ ಹೆಚ್ಚು ಚರ್ಚೆಯಾಗುತ್ತಿರುವ ಸಂಗತಿಗಳೇನು ಗೊತ್ತೇ?
ಬೆಂಗಳೂರು, ಮಾರ್ಚ್ 3: ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡು ಮುಜಗರಕ್ಕೆ ಒಳಗಾಗಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡು ದಿನಗಳಿಂದ ಈ ಪ್ರಕರಣ ತೀವ್ರ ಚರ್ಚೆ ಹುಟ್ಟುಹಾಕಿದೆ. ರಮೇಶ್ ಜಾರಕಿಹೊಳಿ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದರೆ, ಕೆಲವರು ಇದು ನಕಲಿ ಸಿ.ಡಿ ಎಂದು ಅವರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ಆರೋಪ ಗಂಭೀರವಾಗಿದೆ. ಯುವತಿಗೆ ಸರ್ಕಾರಿ ಕೆಲಸ ನೀಡುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ್ದಾರೆ. ಬಳಿಕ ಆಕೆಗೆ ಬೆದರಿಕೆ ಹಾಕಿದ್ದಾರೆ ಎನ್ನುವುದು ಪ್ರಮುಖವಾಗಿ ಚರ್ಚೆಯಲ್ಲಿರುವ ಸಂಗತಿ. ಆದರೆ ಒಬ್ಬ ರಾಜಕೀಯ ವ್ಯಕ್ತಿ ವಿವಾಹೇತರ ಸಂಬಂಧ ಹೊಂದುವುದಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಅನೇಕ ಗಂಭೀರ ವಿಚಾರಗಳು ಈ ಪ್ರಕರಣದಲ್ಲಿವೆ.
ಅಬ್ಬಬ್ಬಾ ಸಚಿವರೇ..! ಮಹಿಳೆ ಜೊತೆ ರಮೇಶ್ ಜಾರಕಿಹೊಳಿ ಮಾತಿನ ವೈಖರಿ
ಇದು ಸಹಮತದ ಸಂಬಂಧವಾಗಿದ್ದಲ್ಲಿ, ಅದರಲ್ಲಿ ತಪ್ಪು ಇಲ್ಲ. ಆದರೆ ಮುಖ್ಯವಾಗಿ ರಮೇಶ್ ಜಾರಕಿಹೊಳಿ ಅವರು ಯುವತಿ ಜತೆ ನಡೆಸಿದ ಸಂಭಾಷಣೆಯಲ್ಲಿ ಪ್ರಸ್ತಾಪವಾಗುವ ವಿಚಾರಗಳು ಗಮನಿಸಬೇಕಾದ ಅಂಶ. ಇದರಲ್ಲಿನ ಸಂಭಾಷಣೆಗಳನ್ನು ಮುಂದಿರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.
ಮರಾಠಿಗರು ಒಳ್ಳೆಯವರು, ಕನ್ನಡಿಗರು....!
ಯುವತಿಯೊಂದಿಗಿನ ಮಾತುಕತೆಯ ವೇಳೆ ರಮೇಶ್ ಜಾರಕಿಹೊಳಿ ಅವರು ಕನ್ನಡಿಗರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ತುಂಬಾ ಜಗಳ ನಡೆಯುತ್ತಲ್ಲಾ ಎಂದು ಯುವತಿ ಕೇಳಿದಾಗ, 'ಮರಾಠಿಯವರು ಒಳ್ಳೆಯ ಜನ. ಕನ್ನಡದ ಮಂದಿಗೆ ಬೇರೆ ಕೆಲಸ ಇಲ್ಲ, ಬೋ... ಮಕ್ಕಳಿಗೆ' ಎಂದು ಅಸಭ್ಯವಾಗಿ ನಿಂದಿಸಿರುವುದು ದಾಖಲಾಗಿದೆ. ಅಷ್ಟೇ ಅಲ್ಲ, ಬೆಳಗಾವಿಯನ್ನು ಒಂದು ರಾಜ್ಯ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಹಾಗೂ ಕನ್ನಡಿಗರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
'ಯಡಿಯೂರಪ್ಪ ಭ್ರಷ್ಟಾಚಾರಿ'
ರಮೇಶ್ ಜಾರಕಿಹೊಳಿ ಅವರ ಸಿಡಿಯಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವ ವಿಷಯವೆಂದರೆ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುರಿತು ನೀಡಿರುವ ಹೇಳಿಕೆ. 'ಸಿದ್ದರಾಮಯ್ಯ ಒಳ್ಳೆಯ ವ್ಯಕ್ತಿ. ಯಡಿಯೂರಪ್ಪ ಬಹಳ ಭ್ರಷ್ಟಾಚಾರ ಮಾಡಿದ್ದಾರೆ' ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿಯ ಬಗ್ಗೆ ಅವರದೇ ಸಂಪುಟದ ವ್ಯಕ್ತಿಯೊಬ್ಬರು ಮಾಡಿರುವ ಭ್ರಷ್ಟಾಚಾರದ ಆರೋಪ ಸಾಮಾನ್ಯವಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಈ ಬಗ್ಗೆ ವಿಚಾರಣೆಗೆ ಒಳಪಡಿಸಬೇಕು. ಯಡಿಯೂರಪ್ಪ ವಿರುದ್ಧದ ಆರೋಪದ ತನಿಖೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಾಹುಕಾರ್ ಬೆನ್ನಿಗೆ ನಿಂತ ಬಿಜೆಪಿ ಸಚಿವ, ಶಾಸಕರು
ನನ್ನದು ಆರೆಸ್ಸೆಸ್ ಸಂಸ್ಕೃತಿ ಎಂದಿದ್ದ ಜಾರಕಿಹೊಳಿ
ಕಳೆದ ವರ್ಷ ರಮೇಶ್ ಜಾರಕಿಹೊಳಿ ಅವರು ತಮ್ಮದು ಆರೆಸ್ಸೆಸ್ ಸಂಸ್ಕೃತಿ ಎಂದು ಹೇಳಿಕೊಂಡಿದ್ದರು. ಕಾಂಗ್ರೆಸ್ನಿಂದ ಸಚಿವರಾಗಿದ್ದ ಅವರು ಜೆಡಿಎಸ್-ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಲು ನೆರವಾದ ತಂಡದಲ್ಲಿ ಮುಂಚೂಣಿಯಲ್ಲಿದ್ದವರು. 'ನಾನು ಕೂಡ ಬಾಲ್ಯದಿಂದಲೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಲ್ಲಿನ ಶಿಸ್ತು ಮತ್ತು ತತ್ವಬದ್ಧ ಸಿದ್ಧಾಂತ, ನೀತಿಗಳನ್ನು ಅರಿತಿದ್ದರಿಂದಲೇ ಇಂದು ಬಿಜೆಪಿಯಲ್ಲಿ ಕೆಲಸ ಮಾಡುವುದು ಸಲೀಸಾಗುತ್ತಿದೆ' ಎಂದು ಗೋಕಾಕದಲ್ಲಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯೂ ಈಗ ವೈರಲ್ ಆಗಿದೆ. ಆರೆಸ್ಸೆಸ್ ಸಂಸ್ಕೃತಿ ಎಂದರೆ ಇದೇ ಏನು? ನಿಮಗೆ ಕಲಿಸಿದ ಶಿಸ್ತು ಯಾವುದು ಎನ್ನುವುದು ಬಹಿರಂಗವಾಗಿದೆ' ಎಂದು ಲೇವಡಿ ಮಾಡಲು ಇದು ಅಸ್ತ್ರವಾಗಿ ಸಿಕ್ಕಿದೆ.
ಕರ್ನಾಟಕ ಭವನ ದುರ್ಬಳಕೆ
ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದಾಗ ಯುವತಿ ಜತೆ ವಿಡಿಯೋ ಕಾಲ್ನಲ್ಲಿ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ. ಕರ್ನಾಟಕ ಭವನ ಸರ್ಕಾರದ ಕಟ್ಟಡ. ಅಂತಹ ಜಾಗವನ್ನು ಅವರು ತಮ್ಮ ಅಸಭ್ಯ ವರ್ತನೆಗೆ ಬಳಸಿಕೊಂಡಿದ್ದಾರೆ. ಕರ್ನಾಟಕ ಭವನ ಬಿಜೆಪಿ ಕರ್ನಾಟಕದ ಮಲಗುವ ಕೋಣೆಯಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕರ್ನಾಟಕ ಭವನವನ್ನು ರಮೇಶ್ ಜಾರಕಿಹೊಳಿ ಇಂತಹ ಕೆಲಸಕ್ಕೆ ಬಳಸಿಕೊಳ್ಳಬಾರದಿತ್ತು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.