ಬೆಂಗಳೂರಿಗೆ ಆಗಮಿಸಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ
ಬೆಂಗಳೂರು, ಜುಲೈ 30 : ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿದರು. ಗೋಕಾಕ್ ಕ್ಷೇತ್ರದ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.
ಮಂಗಳವಾರ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ಮುಂಬೈನಲ್ಲಿದ್ದರು. ಶ್ರೀಮಂತ್ ಪಾಟೀಲ್ ಅನಾರೋಗ್ಯದ ಕಾರಣ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!
ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, "ಅನರ್ಹತೆ ಕುರಿತು ಸುಪ್ರೀಂಕೋರ್ಟ್ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಯಾವಾಗ ವಾದ ಮಾಡಬೇಕು ಎಂಬುದನ್ನು ನಮ್ಮ ವಕೀಲರು ತೀರ್ಮಾನ ಮಾಡುತ್ತಾರೆ" ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆಯಲ್ಲಿ ಆಶ್ಚರ್ಯವೇನಿಲ್ಲ!
"ಪ್ರಕರಣದ ನ್ಯಾಯಾಲಯದಲ್ಲಿ ಇರುವ ಕಾರಣ ಜಾಸ್ತಿ ಮಾತನಾಡುವುದು ಬೇಡ. ಅವರು ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ" ಎಂದು ರಮೇಶ್ ಜಾರಕಿಹೊಳಿ ಹೇಳಿದರು. "ಎಸ್. ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದರು.
ನ್ಯಾಯಾಲಯದ ಮೇಲೆ ಭರವಸೆ ಇದೆ
"ಶಾಸಕರ ಅನರ್ಹತೆಯ ಹಿಂದಿನ ಪ್ರಕರಣಗಳು ಮತ್ತು ನಮ್ಮ ಪ್ರಕರಣಗಳಿಗೆ ತಾಳೆ ಮಾಡುವುದು ಬೇಡ. ನಾವು ಮೊದಲೇ ರಾಜೀನಾಮೆ ನೀಡಿದ್ದೆವು. ಬಳಿಕ ಅನರ್ಹತೆ ಮಾಡಲಾಗಿದೆ. ನಮಗೆ ನ್ಯಾಯಾಂಗದ ಮೇಲೆ ಭರವಸೆ ಇದೆ" ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ದೇವರು ಒಳ್ಳೆಯದು ಮಾಡಲಿ
"ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಮಾತನಾಡುವುದು ಬೇಡ. ಆತ ಒಳ್ಳೆಯ ಮನುಷ್ಯ. ಸ್ಪೀಕರ್ ಯಾಕೆ ಹಾಗೆ ಮಾಡಿದ್ದಾರೋ ಗೊತ್ತಿಲ್ಲ. ಸ್ಪೀಕರ್ಗೆ ದೇವರು ಒಳ್ಳೆಯದನ್ನು ಮಾಡಲಿ" ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಶೀಘ್ರದಲ್ಲೇ ಪತ್ರಿಕಾಗೋಷ್ಠಿ
"ಶಾಸಕರ ರಾಜೀನಾಮೆ ಬಗ್ಗೆ ನಾವು ಎಲ್ಲರೂ ಸೇರಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ. ಮತ್ತೊಂದು ಕಡೆ ಕಾನೂನು ಹೋರಾಟವೂ ಮುಂದುವರೆಯಲಿದೆ" ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಶಾಸಕ ಸ್ಥಾನದಿಂದ ಅನರ್ಹ
ಜುಲೈ 6ರಂದು ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪೀಕರ್ಗೆ ದೂರು ನೀಡಲಾಗಿತ್ತು. ಜುಲೈ 25ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ರಮೇಶ್ ಜಾರಕಿಹೊಳಿ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅವರು ಚುನಾವಣಾ ಕಣಕ್ಕಿಳಿಯುವಂತಿಲ್ಲ.