ರಾಮನಗರದಲ್ಲಿ ಮರ್ಯಾದಾ ಹತ್ಯೆ, ಪೋಷಕರ ಬಂಧನ
ರಾಮನಗರ, ಸೆ.14 : ರಾಮನಗರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ನಂತರ ಮನೆಗೆ ಮರಳಿದ್ದ ಮಗಳಿಗೆ ವಿಷಹಾಕಿ ಕೊಲೆ ಮಾಡಲಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವತಿಯನ್ನು ರಾಮನಗರದ ಕೈಲಾಂಚ ಹೋಬಳಿಯ ಕೆ.ಜಿ.ಹೊಸಳ್ಳಿ ನಿವಾಸಿ ರಂಜಿತಾ (15) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ರಂಜಿತಾ ಶವ ಮನೆಯಲ್ಲಿ ಪತ್ತೆಯಾಗಿದೆ. ರಂಜಿತಾ ತಂದೆ ಗೋವಿಂದರಾಜು ಮತ್ತು ತಾಯಿ ಜಯಲಕ್ಷ್ಮೀಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. [ಚಂದ್ರಕಲಾ ಕೊಲೆ ಮರ್ಯದಾ ಹತ್ಯೆ]

ಘಟನೆಯ ವಿವರ : ಕೆ.ಜಿ.ಹೊಸಳ್ಳಿ ನಿವಾಸಿಯಾದ ಗೋವಿಂದರಾಜು ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದಾರೆ. ಜಯಲಕ್ಷ್ಮೀ ಅವರು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಾರೆ. ಮಗಳು ಚೆನ್ನಾಗಿ ಓದಲಿ ಎಂದು ರಂಜಿತಾಳನ್ನು ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ ಮೊದಲ ಮಗಳ ಮನೆಯಲ್ಲಿ ಬಿಟ್ಟಿದ್ದರು. [ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ]
7ನೇ ತರಗತಿ ಫೇಲ್ ಆಗಿದ್ದ ರಂಜಿತಾ ನಂತರ ಓದು ನಿಲ್ಲಿಸಿದ್ದಳು. ರಂಜಿತಾಗೆ ಬೆಂಗಳೂರಿನಲ್ಲಿ ಪೇಂಟರ್ ಆಗಿದ್ದ ಹುಬ್ಬಳ್ಳಿ ಮೂಲದ ಮಂಜುನಾಥ್ ಪರಿಚಯವಾಗಿತ್ತು, ಪರಿಚಯ ಪ್ರೇಮಕ್ಕೆ ತಿರುಗುತ್ತು. ಇದನ್ನು ತಿಳಿದ ರಂಜಿತಾ ಕುಟುಂಬದವರು ಆಕೆಯನ್ನು ವಾಪಸ್ ಕರೆಸಿಕೊಂಡಿದ್ದರು.
ಆದರೆ, ರಂಜಿತಾ ಮತ್ತು ಮಂಜುನಾಥ್ ನಿರಂತರವಾಗಿ ಸಂಪರ್ಕದಲ್ಲಿದ್ದರು. ಸೆ.6ರಂದು ಪ್ರೇಮಿಗಳು ಓಡಿ ಹೋಗಿದ್ದರು. ಸೆ.8ರಂದು ರಂಜಿತಾ ತಾಯಿ ಜಯಲಕ್ಷ್ಮೀ ಈ ಕುರಿತು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಹುಬ್ಬಳ್ಳಿಯಲ್ಲಿ ರಂಜಿತಾ ಮತ್ತು ಮಂಜುನಾಥ್ ಪೊಲೀಸರಿಗೆ ಸಿಕ್ಕಿದ್ದರು. ಸೆ.12ರಂದು ಇಬ್ಬರನ್ನು ರಾಮನಗರಕ್ಕೆ ಕರೆತಂದ ಪೊಲೀಸರು ಮಂಜುನಾಥನನ್ನು ಬಂಧಿಸಿ, ರಂಜಿತಾಳನ್ನು ಮನೆಗೆ ಕಳುಹಿಸಿ ಕೊಟ್ಟಿದ್ದರು. ಸೆ.13ರ ಭಾನುವಾರ ರಂಜಿತಾ ಶವ ಮನೆಯಲ್ಲಿ ಪತ್ತೆಯಾಗಿತ್ತು.
ಆತ್ಮಹತ್ಯೆ ಎಂದರು : ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ರಂಜಿತಾ ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ಮಂಜುನಾಥನಿಂದ ಬೇರ್ಪಡಿಸಿದ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಸ್ಥಳೀಯರಿಗೆ ಹೇಳಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತಂದೆ-ತಾಯಿಯನ್ನು ವಿಚಾರಣೆ ನಡೆಸಿದಾಗ ಪ್ರೀತಿಸಿ ಓಡಿ ಹೋದ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ರಂಜಿತಾ ತಂದೆ-ತಾಯಿಯನ್ನು ಬಂಧಿಸಿದ್ದಾರೆ.












Click it and Unblock the Notifications