ರಾಜ್ಯಸಭೆ ಕದನ ಕುತೂಹಲಕ್ಕೆ ಖರ್ಗೆ ಎಂಟ್ರಿ: ಕವಲುದಾರಿಯಲ್ಲಿ ಕೈಪಡೆ
ರಾಜ್ಯದ ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಮೂರು ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಮುಂದುವರಿದಿದೆ. ಅದರಲ್ಲೂ, ಜೆಡಿಎಸ್-ಕಾಂಗ್ರೆಸ್ ನಡುವೆ ಗೊಂದಲವಿರುವುದರಿಂದ ಮುಖಂಡರುಗಳ ನಡುವೆ ಸರಣಿ ಸಭೆಗಳು ನಡೆಯುತ್ತಿವೆ.
ನಾಮಪತ್ರ ಹಿಂದಕ್ಕೆ ಪಡೆಯಲು ಇಂದು (ಜೂನ್ 3) ಕೊನೆಯ ದಿನವಾಗಿದ್ದು, ಮಧ್ಯಾಹ್ನ ಮೂರು ಗಂಟೆಗೆ ಕಣದಲ್ಲಿ ಯಾರ್ಯಾರು ಉಳಿದುಕೊಳ್ಳಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತಿದೆ.
ತಮ್ಮ ಪಕ್ಷದ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯಲು ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರೇ ಒತ್ತಡ ಹೇರುತ್ತಿರುವುದರಿಂದ, ಈ ವಿಚಾರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರ ಕೆಲಸ ಸ್ವಲ್ಪಮಟ್ಟಿಗೆ ಕಮ್ಮಿಯಾಗುತ್ತಿದೆ. ಆದರೆ, ಕಾಂಗ್ರೆಸ್ಸಿನ ಇನ್ನೊಂದು ಗುಂಪು ಇದಕ್ಕೆ ವಿರುದ್ದವಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಿನ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ ಎಂದು ದೇವೇಗೌಡ್ರು, ಕಾಂಗ್ರೆಸ್ ಹೈಕಮಾಂಡ್ ಮನವರಿಕೆ ಮಾಡುತ್ತಿದ್ದಾರೆ. ಜೊತೆಗೆ, ಕಣದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳಿದ್ದರೆ ಅದು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಂತೆ ಎನ್ನುವ ಅಂಶವನ್ನೂ ವಿವರಿಸಿದ್ದಾರೆಂದು ವರದಿಯಾಗಿದೆ.

ಕುಪೇಂದ್ರ ರೆಡ್ಡಿಯವರ ಪರವಾಗಿ ಹಿರಿಯ ಮುಖಂಡ ಮಲ್ಲಿಕಾರ್ಜನ ಖರ್ಗೆ
ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳಾಗಿವೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರ ಪರವಾಗಿ ಹಿರಿಯ ಮುಖಂಡ ಮಲ್ಲಿಕಾರ್ಜನ ಖರ್ಗೆ ಆಖಾಡಕ್ಕೆ ಇಳಿದಿರುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಖರ್ಗೆಗೆ ಅತ್ಯಂತ ಆಪ್ತರಾಗಿರುವ ಕುಪೇಂದ್ರ ರೆಡ್ಡಿ ಪರವಾಗಿ ನಿಲ್ಲುವುದೋ ಅಥವಾ ತಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಯದಂತೆ ನೋಡಿಕೊಳ್ಳುವುದೋ ಎನ್ನುವ ಗೊಂದಲದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಿದ್ದಾರೆ.

ಗೌಡ್ರು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಖರ್ಗೆ ಮೂಲಕ ಹೈಕಮಾಂಡಿಗೆ ಒತ್ತಡ
ದೇವೇಗೌಡ್ರು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಖರ್ಗೆ ಮೂಲಕ ಹೈಕಮಾಂಡಿಗೆ ಒತ್ತಡವನ್ನು ಹೇರುತ್ತಿದ್ದಾರೆ. ನಮ್ಮಿಬ್ಬರ ಒಡಕನ್ನು ಬಿಜೆಪಿ ಹೇಗೆ ಎನ್ಕ್ಯಾಶ್ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಹೈಕಮಾಂಡಿಗೆ ಆಪ್ತರಾಗಿರುವವರಿಗೆ ಗೌಡ್ರು ವಿವರಿಸಿದ್ದಾರೆಂದು ತಿಳಿದು ಬಂದಿದೆ. ಆದರೆ, ರಾಜ್ಯ ನಾಯಕರಲ್ಲಿ ಈ ಬಗ್ಗೆ ಒಮ್ಮತ ಮೂಡಿಸುವುದು ಖರ್ಗೆಗೆ ಕಷ್ಟವಾಗುತ್ತಿದೆ ಎನ್ನುವ ಮಾತಿದೆ.

ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು
ಈ ಹಿಂದೆ ಸಮ್ಮಿಶ್ರ ಸರಕಾರ ಬಂದಾಗ ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು. ಈಗ, ನಮ್ಮ ಅಭ್ಯರ್ಥಿ ಮನ್ಸೂರ್ ಖಾನ್ ಅವರನ್ನು ಜೆಡಿಎಸ್ ಬೆಂಬಲಿಸಬೇಕು ಎನ್ನುವ ಹೊಸ ಸೂತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಟ್ಟಿರುವುದು ಹೈಕಮಾಂಡಿಗೆ ನುಂಗಲಾರದ ತುತ್ತಾಗುತ್ತಿದೆ. ಬೇರೆ ಬೇರೆ ಬಣ ಎಂದು ಗುರುತಿಸಿಕೊಂಡಿದ್ದ ಡಿಕೆಶಿ ಮತ್ತು ಸಿದ್ದು ಈ ವಿಚಾರದಲ್ಲಿ ಒಂದಾದಂತೆ ಕಾಣಿಸುತ್ತಿದೆ.

ಮನ್ಸೂರ್ ಖಾನ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ ವಿಚಾರ
ಮನ್ಸೂರ್ ಖಾನ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ ವಿಚಾರದಲ್ಲಿ ರಾಜ್ಯ ಅಲ್ಪಸಂಖ್ಯಾತ ಸಮುದಾಯದ ನಾಯಕರಲ್ಲೂ ಅಸಮಾಧಾನವಿದೆ. ಯಾರ ಬಳಿಯೂ ಚರ್ಚಿಸದೇ ಏಕಾಏಕಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಒಂದು ವೇಳೆ ಅಭ್ಯರ್ಥಿ ಸೋತರೆ ಅದಕ್ಕೆ ಹಿಂದಕ್ಕೆ ಪಡೆಯುವಂತಾದರೆ, ಇಡೀ ಸಮುದಾಯಕ್ಕೆ ಕಾಂಗ್ರೆಸ್ ಮೇಲೆ ಅಸಮಾಧಾನ ಹೆಚ್ಚಾಗುವಂತೆ ಮಾಡುತ್ತದೆ ಎನ್ನುವುದು ಈ ಗುಂಪಿನ ವಾದ. ಒಟ್ಟಿನಲ್ಲಿ, ಜೂನ್ ಮೂರು ಮಧ್ಯಾಹ್ನದ ಹೊತ್ತಿಗೆ ಆರೂ ಜನ ಕಣದಲ್ಲಿ ಇರುತ್ತಾರೋ, ಅಥವಾ ಯಾರಾದರೂ ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರಾ ಎನ್ನುವುದು ಗೊತ್ತಾಗಲಿದೆ.












Click it and Unblock the Notifications