ರಾಜ್ಯಸಭೆ ಚುನಾವಣೆ: ಕುಪೇಂದ್ರರೆಡ್ಡಿ ಆಯ್ಕೆ ಸ್ವತಃ ದೇವೇಗೌಡ, ಕುಮಾರಸ್ವಾಮಿಗೂ ಬೇಕಿರಲಿಲ್ಲ..
ಬೆಂಗಳೂರು, ಜೂ.3: ರಾಜ್ಯಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಜೆಡಿಎಸ್ ನಾಯಕರು ಭಾರಿ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಸ್ವತಃ ಜೆಡಿಎಸ್ನ ಇಬ್ಬರು ಪರಮ ನಾಯಕರಿಗೆ ಇಷ್ಟ ಇರಲಿಲ್ಲ. ಆದರೂ ಅವರು ಅಭ್ಯರ್ಥಿಯಾಗಿದ್ದಾರೆ. ಇದು ಜೆಡಿಎಸ್ನೊಳಗೆ ಆಂತರಿಕ ಬಿರುಕಿಗೆ ಕಾರಣವಾಗಿದೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಶಾಸನ ಸಭೆಯಲ್ಲಿ 32 ಶಾಸಕರ ಬಲ ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಕುಪೇಂದ್ರ ರೆಡ್ಡಿ ಅವರ ನಾಮಪತ್ರ ಸಹ ಅಂಗೀಕಾರವಾಗಿದೆ. ನಾಮಪತ್ರ ವಾಪಸ್ ಪಡೆಯಲು ಜೂ.3 ಕೊನೆಯ ದಿನ. ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದು ಜೆಡಿಎಸ್ ನಾಯಕರು ಈಗಾಗಲೇ ಕಾಂಗ್ರೆಸ್ ಕದ ತಟ್ಟಿ ಬಂದಿದ್ದಾರೆ. ಆದರೆ, ಕುಪೇಂದ್ರ ರೆಡ್ಡಿ ಜೆಡಿಎಸ್ನ ಒಮ್ಮತದ ನಾಯಕ ಅಲ್ಲ. ಕುಪೇಂದ್ರ ರೆಡ್ಡಿ ಅವರನ್ನು ಆಯ್ಕೆ ಮಾಡುವುದು ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೇಕಿರಲಿಲ್ಲ ಎಂಬುದು ಜೆಡಿಎಸ್ನೊಳಗೆ ಬಹಿರಂಗವಾಗುತ್ತಿದೆ.
ಕಾಂಗ್ರೆಸ್ ಸೋಲುವುದು ಗೊತ್ತಿದ್ದರೂ ಅಲ್ಪಸಂಖ್ಯಾತರ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಬಲಿಪೀಠದ ಮುಂದೆ ನಿಲ್ಲಿಸುವ ಹಕೀಕತ್ತು ಏನಿತ್ತು? ಎಂದು ಕುಮಾರಸ್ವಾಮಿ ಕಠಿಣ ಶಬ್ಧಗಳಲ್ಲಿಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. ಆದರೆ, ತಮ್ಮ ಪಕ್ಷದೊಗೆ ಸ್ವತಃ ತಾವೇ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸುವ ಅವಕಾಶ ಇದ್ದರೂ ಸಹೋದರನ ಒತ್ತಾಯಕ್ಕೆ ಮಣಿದು ಹಿಂದೆ ಸರಿದಿದ್ದರು ಎಂಬುದು ಈಗ ಬಯಲಾಗುತ್ತಿದೆ.

ಯಾರ ಮೇಲೆ ಒಲವಿತ್ತು ದೊಡ್ಡಗೌಡರಿಗೆ?
ಮೂಲಗಳ ಪ್ರಕಾರ ಎಚ್ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಮಾಡುವ ಒಲವು ಇತ್ತು. ಚುನಾವಣೆಗೂ ಮುನ್ನ ದೇವೇಗೌಡ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೆ ಕಾಂಗ್ರೆಸ್ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕುಪೇಂದ್ರ ರೆಡ್ಡಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು. ಕುಪೇಂದ್ರ ರೆಡ್ಡಿ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಹಾಕದಂತೆ ಅವರ ಮನವೊಲಿಸುವುದಾಗಿ ಪಟ್ಟು ಹಿಡಿದು ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಇದ್ದವರು ಯಾರು ಯಾರು?
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಗಂಭೀರ ಸಭೆಯೊಂದು ನಡೆಯಿತು. ಅದರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ಇತರೆ ನಾಲ್ವರು ಶಾಸಕರು ಮಾತ್ರ ಇದ್ದರು. ಸಭೆಯಲ್ಲಿ ರೇವಣ್ಣ ಅವರು, ಕುಪೇಂದ್ರ ರೆಡ್ಡಿಯೇ ರಾಜ್ಯಸಭಾ ಅಭ್ಯರ್ಥಿ ಆಗಬೇಕು. ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಗಟ್ಟಿ ದನಿಯಲ್ಲಿ ಹೇಳಿದರು. ಕೆಲವು ಆಂತರಿಕ ಕಾರಣಗಳಿಂದಾಗಿ ಸಿ.ಎಂ. ಇಬ್ರಾಹಿಂ ಸಹ ಇದಕ್ಕೆ ದನಿಗೂಡಿಸಿದರು. ಆದರೆ, ಇದಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕುತ್ತೇವೆ ಎಂಬ ಭರವಸೆಯ ಮೇರೆಗೆ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಹೀಗಾಗಿ ನಾವು ಕುಪೇಂದ್ರ ರೆಡ್ಡಿ ಅವರನ್ನು ನಿಲ್ಲಿಸುವುದು ಸಮಂಜಸ ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಎಂ. ಇಬ್ರಾಹಿಂ, "ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶರವಣ ಅವರನ್ನು ಈಗಾಗಲೇ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ, ಬಿಎಂ ಫಾರೂಕ್ ಈಗಾಗಲೇ ವಿಧಾನ ಪರಿಷತ್ ಸದಸ್ಯ ಇದ್ದಾರೆ. ಅವರನ್ನು ಮತ್ತೆ ರಾಜೀನಾಮೆ ಕೊಡಿಸಿ ಈಗ ರಾಜ್ಯಸಭೆಗೆ ಕಳುಹಿಸುವುದರಲ್ಲಿ ಅರ್ಥವೇನಿದೆ,"? ಎಂದು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಅಂತಿಮವಾಗಿ ರೇವಣ್ಣ ಮೇಲುಗೈ ಸಾಧಿಸಿದರು. ಕುಪೇಂದ್ರ ರೆಡ್ಡಿ ಅವರಿಗೇ ಪಟ್ಟು ಹಿಡಿದು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.

ಕಾಂಗ್ರೆಸ್ ಜೊತೆ ಮಾತನಾಡಿದ ದೇವೇಗೌಡ
ಈ ಮಧ್ಯೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಅವರನ್ನು ಕಣಕ್ಕೆ ಇಳಿಸಿದೆ. ರೇವಣ್ಣ ಅವರ ಒತ್ತಡಕ್ಕೆ ಮಣಿದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಎರಡನೇ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ, ಕಾಂಗ್ರೆಸ್ ಗೌಡರ ಈ ಮನವಿಗೆ ಒಪ್ಪಿಲ್ಲ.

ಲೆಹರ್ಸಿಂಗ್ ಕಣಕ್ಕೆ
ಕಾಂಗ್ರೆಸ್ ಮತ್ತು ಬಿಜೆಪಿಮನವೊಲಿಸುವುದಾಗಿ ಭರವಸೆ ನೀಡಿದ್ದ ರೇವಣ್ಣ ಸಹ ತಮ್ಮ ಮಾತಿನಲ್ಲಿ ಸೋತಿದ್ದಾರೆ. ಕಾಂಗ್ರೆಸ್ ತನ್ನ ಎರಡನೇ ಅರ್ಭರ್ಥಿಗೆ ಬಿ-ಫಾರಂ ನೀಡುತ್ತಿದ್ದಂತೆ, ಬಿಜೆಪಿಯೂ ತನ್ನ ಮೂರನೇ ಅಭ್ಯರ್ಥಿಯನ್ನಾಗಿ ಲೆಹರ್ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ. ಯಾರ ಬೆಂಬಲವೂ ಇಲ್ಲದೆ ತನ್ನ ಸ್ವಂತ ಬಲದಿಂದಲೇ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಾಗಿ ಹೇಳುತ್ತಿದೆ.












Click it and Unblock the Notifications