ರಾಜ್ಯಸಭೆ ಚುನಾವಣೆ; ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ?
ಬೆಂಗಳೂರು, ಜೂನ್ 07 : ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 19ರಂದು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗುತ್ತಿದ್ದು, ನಾಲ್ವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
Recommended Video
ಕಾಂಗ್ರೆಸ್ನ ಬಿ. ಕೆ. ಹರಿಪ್ರಸಾದ್, ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್ನ ಕುಪೇಂದ್ರ ರೆಡ್ಡಿ ಅವರಿಂದ ತೆರವಾಗುವ ಸ್ಥಾನಕ್ಕೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಿದೆ.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಒಬ್ಬ ಸದಸ್ಯ ಆಯ್ಕೆಯಾಗಲು 48 ಮತಗಳು ಬೇಕು. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ. ಬಿಜೆಪಿ ಸುಲಭವಾಗಿ ಎರಡು ಸ್ಥಾನ ಗೆಲ್ಲಲಿದೆ. ಮೂರು ಸ್ಥಾನ ಭರ್ತಿ ಆಯಿತು. ನಾಲ್ಕನೇ ಸ್ಥಾನ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದುಗಳು ಹಬ್ಬಿದೆ. ಒಂದು ವೇಳೆ ದೇವೇಗೌಡರು ಕಣಕ್ಕಿಳಿದರೆ ಜೆಡಿಎಸ್ನ 36 ಮತಗಳ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಉಳಿಯುವ ಮತಗಳು ಅವರಿಗೆ ಸಿಗುವ ನಿರೀಕ್ಷೆ ಇದೆ.

ಬಿಜೆಪಿಗೆ 2 ಸ್ಥಾನದಲ್ಲಿ ಸುಲಭ ಜಯ
ವಿಧಾನಸಭೆಯಲ್ಲಿ 116 ಶಾಸಕರ ಬಲ ಹೊಂದಿರುವ ಬಿಜೆಪಿ 2 ಸ್ಥಾನದಲ್ಲಿ ಸುಲಭವಾಗಿ ಜಯಗಳಿಸಲಿದೆ. ಪಕ್ಷ ಈಗಾಗಲೇ ಪ್ರಭಾಕರ ಕೋರೆ, ರಮೇಶ್ ಕತ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ಎಂ. ನಾಗರಾಜ್ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಟ್ಟಿದೆ. ಇವರಲ್ಲಿ ಇಬ್ಬರ ಹೆಸರನ್ನು ಅಂತಿಮಗೊಳಿಸುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ಇದೆ.

ಕಾಂಗ್ರೆಸ್ಗೆ ಒಂದು ಸ್ಥಾನ ಖಚಿತ
ಕಾಂಗ್ರೆಸ್ ವಿಧಾನಸಭೆಯಲ್ಲಿ 68 ಶಾಸಕರ ಬಲ ಹೊಂದಿದೆ. ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಭ್ಯರ್ಥಿ. 48 ಮತಗಳಿಂದ ಅವರು ಸುಲಭವಾಗಿ ಜಯಗಳಿಸಲಿದ್ದಾರೆ. ಉಳಿದ ಮತಗಳು ಏನಾಗಲಿವೆ? ಎಂಬುದು ಕುತೂಹಲ. ಎಚ್. ಡಿ. ದೇವೇಗೌಡರು ಕಣಕ್ಕಿಳಿದು ಬೆಂಬಲ ಕೇಳಿದರೆ ಉಳಿದ ಮತಗಳನ್ನು ಪಕ್ಷಕ್ಕೆ ನೀಡಲು ಕಾಂಗ್ರೆಸ್ ಆಲೋಚನೆ ನಡೆಸಿದೆ.

ಜೆಡಿಎಸ್ಗೆ ಬೆಂಬಲ ಅಗತ್ಯ
ಕರ್ನಾಟಕ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ 34. ಪಕ್ಷ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಿದರೆ ಬೇರೆ ಪಕ್ಷದ ಬೆಂಬಲ ಅಗತ್ಯವಾಗಿ ಬೇಕು. ಹರಿದಾಡುತ್ತಿರುವ ಸುದ್ದಿಯಂತೆ ಎಚ್. ಡಿ. ದೇವೇಗೌಡರು ಕಣಕ್ಕಿಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ.

4ನೇ ಅಭ್ಯರ್ಥಿ ಯಾರು?
ಕಾಂಗ್ರೆಸ್ನ ಒಂದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಆದರೆ, 4ನೇ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಎಚ್. ಡಿ. ದೇವೇಗೌಡರು ರಾಜ್ಯಸಭೆ ಚುನಾವಣಾ ಕಣಕ್ಕಿಳಿಯುವ ಕುರಿತು ಇನ್ನೂ ಅಂತಿಮ ತೀರ್ಮಾನ ಪ್ರಕಟಿಸಿಲ್ಲ.












Click it and Unblock the Notifications