ನಿರೀಕ್ಷಿತ ಮಳೆಯಾಗದೆ ಬರದ ಛಾಯೆ ಆವರಿಸಿದ : ಜಯಚಂದ್ರ
ಬೆಂಗಳೂರು, ಆ.07 : 'ರಾಜ್ಯದಲ್ಲಿ ಸಕಾಲಕ್ಕೆ ನಿರೀಕ್ಷಿತ ಮಳೆ ಬೀಳದ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ' ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಸೋಮವಾರ ವಿಧಾನಸೌಧದ ತಮ್ಮ ಕಛೇರಿಯಲ್ಲಿ ಮಾತನಾಡಿದ ಸಚಿವರು, 'ಕಳೆದ 16 ವರ್ಷಗಳಲ್ಲಿ 13 ವರ್ಷ ರಾಜ್ಯ ಬರಗಾಲದಿಂದ ತತ್ತರಿಸಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೂ ತೊಂದರೆಯಾಗುತ್ತಿದೆ. ಸರ್ಕಾರ ಜನರಿಗೆ ಉತ್ತಮ ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಂಡಿದೆ' ಎಂದರು.

'ರಾಜ್ಯದಲ್ಲಿ ಈ ವರ್ಷ ತುಮಕೂರು, ಚಿಕ್ಕಮಗಳೂರು ಹಾಸನ ಜಿಲ್ಲೆಗಳು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ 5.06 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆಸಲಾಗಿತ್ತು. ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಸಲಾಗಿತ್ತು' ಎಂದು ಹೇಳಿದರು.
'ಬರಗಾಲದ ಪರಿಣಾಮ 1.91 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆ ನಷ್ಟವಾಗಿದ್ದು 0.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆ ನಷ್ಟವಾಗಿವೆ. ಇತಿಹಾಸದಲ್ಲಿಯೇ ಈ ತರಹದ ಅಡಿಕೆ ಹಾಗೂ ತೆಂಗು ಬೆಳೆ ನಾಶ ಆಗಿರಲಿಲ್ಲ' ಎಂದು ವಿವರಣೆ ನೀಡಿದರು.
'ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ನೀರಾವರಿ ಸಚಿವರು ದೆಹಲಿಯಲ್ಲಿ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಚರ್ಚಿಸಿದ್ದಾರೆ. ಆಗಸ್ಟ್ 9 ರಂದು ಕಾವೇರಿ ನದಿ ವಿಚಾರವಾಗಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ' ಎಂದರು..
'ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ತರುವ ಸಂಬಂಧ ಚಿಂತನೆ ನಡೆಸಲಾಗಿದ್ದು, ಮುಂಬರುವ ಸಚಿವ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.












Click it and Unblock the Notifications