100ರ ಹೊಸ್ತಿಲಲ್ಲಿ ಟೊಮೆಟೊ, ಉಳಿದ ತರಕಾರಿಗಳು ದುಬಾರಿ!
ಬೆಂಗಳೂರು, ಜೂನ್ 26; ಜೂನ್ ಅಂತ್ಯ ಸಮೀಪಿಸಿದರೂ ರಾಜ್ಯದಲ್ಲಿ ಉಂಟಾಗಿರುವ ಮಳೆಯ ಕೊರತೆ ಬೆಲೆ ಏರಿಕೆಗೆ ಕಾರಣವಾಗಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ತರಕಾರಿ ಬೆಳೆಗಳು ಒಣಗಿದ್ದು, ಮಾರುಕಟ್ಟೆಗೆ ಸರಬರಾಜು ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.
ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತರಕಾರಿಗಳ ಬೆಲೆ ಗಗನಮುಖಿಯಾಗುತ್ತಿದೆ. ಟೊಮೆಟೊ ಬೆಲೆ 100ರ ಗಡಿಗೆ ತಲುಪಿದೆ. ಮಾರುಕಟ್ಟೆಯಲ್ಲಿನ ತರಕಾರಿಗಳ ಬೆಲೆ ಕೇಳಿ ಜನರು ಒಂದು ಕ್ಷಣ ಗಾಬರಿಯಾಗಿದ್ದಾರೆ.

ಸಾಮಾನ್ಯವಾಗಿ ಜೂನ್ನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾದ ಬಳಿಕ ಸಹಜವಾಗಿ ಟೊಮೆಟೊ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈ ಸಲ ಮಳೆ ಕೊರತೆಯಾದರೂ ಸಹ ಬೆಲೆ ಏರಿಕೆ ಕಂಡಿದೆ. ಮಳೆಯ ಕೊರತೆ ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ಎಷ್ಟು ಏರಿಕೆಯಾಗಿದೆ ಬೆಲೆ?; ಕೋಲಾರ ಮಾರುಕಟ್ಟೆಯಲ್ಲಿ ಬಾಕ್ಸ್ ಟೊಮೆಟೊ ಬೆಲೆ 1 ಸಾವಿರ ರೂ. ಆಗಿರುವ ವಿಡಿಯೋವೊಂದು ಫೇಸ್ಬುಕ್ನಲ್ಲಿ ವೈರಲ್ ಆಗಿದೆ. ಸದ್ಯದ ಮಾಹಿತಿ ಪ್ರಕಾರ 15 ಕೆಜಿ ತೂಕದ ಟೊಮೆಟೊ ಬಾಕ್ಸ್ ಬೆಲೆ 1 ಸಾವಿರ ರೂ.ಗಳಿಗೆ ತಲುಪಿದೆ. ಮಳೆ ಆರಂಭವಾದರೆ ದರ ಇನ್ನೂ ಹೆಚ್ಚಾಗಲಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಕರ್ನಾಟಕದಲ್ಲಿ ಬೆಳೆದ ಟೊಮೆಟೊ ಈಗ ಹೊರ ರಾಜ್ಯಗಳನ್ನು ಮಾತ್ರ ತಲುಪುತ್ತಿಲ್ಲ. ನೆರೆಯ ದೇಶಕ್ಕೂ ಸರಬರಾಜು ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಟೊಮೆಟೊಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಆದ್ದರಿಂದ ರಫ್ತಾಗುವ ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ ವ್ಯಾಪಾರಿಗಳು ಅಲ್ಲಿಗೆ ಟೊಮೆಟೊ ಕಳಿಸುತ್ತಿದ್ದಾರೆ.
ಟೊಮೆಟೊ ಬೆಳೆಗೆ ಕರ್ನಾಟಕದಲ್ಲಿಯೇ ದೊಡ್ಡ ಮಾರುಕಟ್ಟೆ ಕೋಲಾರವಾಗಿದೆ. ಇಲ್ಲಿನ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಹೆಚ್ಚಿನ ಸಾಗಾಟ ನಡೆಯುತ್ತಿದೆ. ಇದರಿಂದಾಗಿ ಬೇಡಿಕೆಯೂ ಸಹ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಸರಿಯಾಗಿ ಎರಡು ಮಳೆ ಬಂದರೆ ದರ ಇನ್ನಷ್ಟು ಏರಿಕೆ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಎನ್. ಆರ್. ಕಾಲೋನಿ ತಳ್ಳುಗಾಡಿ ಮಾರುಕಟ್ಟೆಯಲ್ಲಿ ಜನರು ಟೊಮೆಟೊ ದರ ಹೇಳಿ ಕೊಳ್ಳಲು ಹಿಂದೇಟು ಹಾಕಿದರು. ಹಲವಾರು ಗಾಡಿ ವಿಚಾರಿಸಿ, ಪಕ್ಕದಲ್ಲಿರುವ ಹಾಪ್ಕಾಮ್ಸ್ನಲ್ಲೂ ವಿಚಾರಿಸಿದ ಮೇಲೆ ದರ ಏರಿಕೆಯಾಗಿರುವುದು ಖಾತ್ರಿ ಪಡಿಸಿಕೊಂಡು ಕಡಿಮೆ ಕೊಳ್ಳಲು ಮುಂದಾದರು.
ಸಾಧಾರಣ ಟೊಮೆಟೊ ಬೆಲೆ ಕೆಜಿಗೆ 30 ರಿಂದ 40 ರೂ. ಇತ್ತು. ಭಾನುವಾರ ಸಂಜೆಯ ವೇಳೆಗೆ ಕೆಜಿಗೆ 50 ರಿಂದ 60 ರೂಪಾಯಿಗೆ ಏರಿಕೆ ಕಂಡಿದೆ. ಉತ್ತಮ ಗುಣಮಟ್ಟದ ಟೊಮೆಟೊ ಬೆಲೆ 80 ರಿಂದ 90 ರೂ. ತನಕ ಏರಿಕೆಯಾಗಿದೆ. ಸರಿಯಾದ ಪೂರೈಕೆಯಾಗದ ಕಾರಣ ಅನೇಕ ಜಿಲ್ಲೆಗಳಲ್ಲಿ ಟೊಮೆಟೊ ಮತ್ತು ತರಕಾರಿಗಳ ಅಭಾವ ಎದುರಾಗಿದ್ದು, ಎಲ್ಲಾ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿವೆ.
ತರಕಾರಿ ಬೆಲೆ ಹೆಚ್ಚಳ; ಟೊಮೆಟೊ ಬೆಲೆ ಶತಕದ ಅಂಚಿಗೆ ಬಂದಿದೆ. ಇತರ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರಗಳು ಸಹ ಏರಿಕೆ ಕಂಡಿವೆ.
ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣ ತರಕಾರಿ ಬೆಳೆಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದಾಗಿ ಕೆ. ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಗೆ ತೊಂದರೆಯಾಗಿ, ದರ ಹೆಚ್ಚಾಗಿದೆ.
ಕಳೆದ ವಾರ ಒಂದು ಕೆಜಿಗೆ 40 ರೂ. ಇದ್ದ ಬದನೇಕಾಯಿ ದರ 80 ರೂ.ಗೆ ತಲುಪಿದೆ. ಕ್ಯಾರೆಟ್ 80 ರೂ. ಆಗಿದೆ. ನುಗ್ಗೆಕಾಯಿ 100 ರಿಂದ 120 ರೂ. ದರದಲ್ಲಿಯೇ ಮುಂದುವರೆದಿದೆ. ಬಿಟ್ರೊಟ್, ಹಾಗಲಕಾಯಿ, ಆಲೂಗೆಡ್ಡೆ ದರಗಳು ಸಹ ಏರುತ್ತಲಿವೆ. ಬಟಾಣಿ, ಹುರುಳಿ ಕಾಯಿ ದರವೂ ಹೆಚ್ಚಾಗಿದ್ದು, ನಿಂಬೆಹಣ್ಣಿನ ದರ ಇಳಿಕೆ ಕಂಡಿದೆ.












Click it and Unblock the Notifications