ಮಳೆ ಆತಂಕದ ನಡುವೆ ನಡೆಯುತ್ತಿದೆ ಸುಗಮ ಮತದಾನ!
ಬೆಂಗಳೂರು, ಮೇ 12: ರಾಜ್ಯ ವಿಧಾನಸಭೆ ಚುನಾವಣೆಗೆ ಮಳೆರಾಯ ಅಡ್ಡಿಯಾಗುತ್ತಾನೆ ಎಂಬ ಆತಂಕ ಕೊನೆಗೂ ದೂರವಾಗಿದ್ದು, ಯಾವುದೇ ಮಳೆಗಾಳಿಯ ತೊಂದರೆ ಇಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಶನಿವಾರ ಸುಗಮ ಮತದಾನ ನಡೆಯುತ್ತಿದೆ..
ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಆರಂಭವಾಗಿದೆ, ಮತದಾನಕ್ಕೆ ಬರುವವರಿಗೆ ಅಡ್ಡಿ ಉಂಟಾಗಿದೆ. ಹಾಗಾಗಿ ಮತದಾನ ನಿಧಾನವಾಗಿ ಸಾಗಿದೆ. ಶುಕ್ರವಾರ ರಾತ್ರಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಗದಗ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿತ್ತು. ಇದರಿಂದ ಶನಿವಾರವೂ ಮಳೆ ಮುಂದುವರಿದರೆ ಮತದಾನದ ಪ್ರಮಾಣ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.
ವಾರದ ಆರಂಭದಲ್ಲೇ ಹವಾಮಾನ ಇಲಾಖೆ ತಮಿಳುನಾಡಿನಲ್ಲಿ ಉಂಟಾದ ಟ್ರಫ್ನಿಂದ ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಮೇ 14ರವರೆಗೆ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಿತ್ತು. ಅದರಂತೆ ಗುರುವಾರ ಹಾಗೂ ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆ ಮಳೆ ಸುರಿದಿತ್ತು.

ಮತದಾನದ ದಿನವಾದ ಶನಿವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿತ್ತು. ಶನಿವಾರ 4 ಗಂಟೆವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತೊಂದರೆ ಉಂಟಾಗಲಿಲ್ಲ.
ಹಾಗೆ ನೋಡಿದರೆ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯು ಶನಿವಾರದ ಮತದಾನಕ್ಕೆ ಹಲವು ರೀತಿಯಲ್ಲಿ ಅನುಕೂಲವನ್ನೇ ಮಾಡಿತು. ಒಂದೆಡೆ ಭಾರಿ ಮಳೆಯಿಂದ ಶನಿವಾರ ಮಧ್ಯಾಹ್ನದವರೆಗೂ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಬಿಸಿಲಿನ ತಾಪ ಮತದಾರರಿಗೆ ಹೆಚ್ಚು ತಾಕಲಿಲ್ಲ.

ಮತ್ತೊಂದೆಡೆ ಸಂಜೆ ವೇಳೆಗೆ ಮಳೆ ಆರಂಭವಾಗಬಹುದು ಎಂಬ ಲೆಕ್ಕಾಚಾರದಿಂದ ಬೆಳಗ್ಗೆಯಿಂದ ಮತದಾರರು ಮತಗಟ್ಟೆಗಳ ಕಡೆಗೆ ಮುಖ ಮಾಡಿದರು. ನಾಲ್ಕು ಗಂಟೆ ನಂತರ ಕೆಲವೆಡೆ ಮಳೆ ಆರಂಭವಾಗಿದೆ, ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications