Karnataka Rains: ವೀಕೆಂಡ್ನಲ್ಲಿ ತಂಪೆರೆದ ವರುಣ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 22: ಈ ವೀಕೆಂಡ್ನಲ್ಲಿ ಹೊರಗಡೆ ಸುತ್ತಾಟಕ್ಕೆ ಹೊರಟ ಸಿಲಿಕಾನ್ ಸಿಟಿ ಜನರೇ ನೀವು ಆದಷ್ಟು ಬೇಗ ಮನೆ ಸೇರಿಕೊಳ್ಳುವುದು ಉತ್ತಮ. ಯಾಕೆಂದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಶನಿವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ವರುಣ ತಂಪೆರದಿದ್ದು, ಶುಕ್ರವಾರ ಸಂಜೆ ಕೂಡ ಬೆಂಗಳೂರಿನ ವಿವಿದೆಢೆ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿ, ರಾಯಚೂರು, ಯಾದಗಿರಿಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ವಿಜಯಪುರದಲ್ಲಿ ಒಣಹವೆಯ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಏಪ್ರಿಲ್ 25ರವರೆಗೆ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.
ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಇಂದು ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಕೋಲಾರ, ಮಂಡ್ಯ, ರಾಮನಗರ, ಮೈಸೂರಿನಲ್ಲಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಭಾರೀ ಮಳೆ
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು, ಬಳಿಕ ಗುಡುಗು ಮಿಂಚು ಸಹಿತ ಹಲವು ಬಡಾವಣೆಗಳಲ್ಲಿ ವ್ಯಾಪಕ ಮಳೆ ಸುರಿಯಿತು. ಇದರಲ್ಲಿ ಸಂಪಂಗಿರಾಮನಗರದಲ್ಲಿ 13.5 ಮಿಲಿ ಮೀಟರ್ ಹಾಗೂ ಕೃಷ್ಣ ರಾಜಪುರ (ಕೆಆರ್ಪುರ) ದಲ್ಲಿ 13.5 ಮಿಲಿ ಮೀಟರ್ ಮಳೆ ಬಿದ್ದ ಬಗ್ಗೆ ವರದಿಯಾಗಿತ್ತು.

ನಿನ್ನೆ ಸಂಜೆ ಸುರಿದ ಏಕಾಏಕಿ ಮಳೆಗೆ ಲಾಲ್ ಬಾಗ್ ರಸ್ತೆ, ಕೆ.ಆರ್ ಮಾರುಕಟ್ಟೆ, ಟೌನ್ ಹಾಲ್ ಮುಂಭಾಗ, ಚಾಲುಕ್ಯ ವೃತ್ತ, ಓಕಳಿಪುರಂ ಅಂಡರ್ಪಾಸ್, ಮೆಜೆಸ್ಟಿಕ್, ಬಾಲಗಂಗಾಧರ್ನಾಥ ಸ್ವಾಮೀಜಿ ಮೇಲ್ಸೇತುವೆ ಸೇರಿದಂತೆ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಈ ವರ್ಷದ ಏಪ್ರಿಲ್ ಬಿಸಿಲಿಗೆ ಬೆಂಗಳೂರಿನ ಜನ ಕಂಗೆಟ್ಟು ಹೋಗಿದ್ದಾರೆ. ನಗರದಲ್ಲಿ ದಾಖಲೆಯ ಉಷ್ಣಾಂಶ ವರದಿಯಾಗಿದ್ದು ಜೊತೆಗೆ ಬಿಸಿ ಗಾಳಿಯಿಂದ ಕೂಡ ಜನರು ಬಸವಳಿದಿದ್ದಾರೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಸರಿ ಸುಮಾರು 6 ಸೆಂಟಿ ಮೀಟರ್ ಮಳೆ ಆಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಈವರೆಗೆ ಕೇವಲ 1 ಸೆಂಟಿ ಮೀಟರ್ ಮಾತ್ರ ಮಳೆಯಾಗಿದೆ ಎನ್ನಲಾಗಿದೆ.












Click it and Unblock the Notifications