ಮುಂಗಾರು ಮಳೆ: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಚೇತರಿಕೆ
ಬೆಂಗಳೂರು, ಜೂನ್ 5: ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯ ಅಬ್ಬರದಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.
ಮುಂಗಾರು ಆರಂಭದಿಂದಾಗಿ ರೈತರ ಮೊಗದಲ್ಲಿ ನಗು ಬಂದಿದೆ. ದೇಶದ ಬೆನ್ನೆಲುಬು ರೈತ.. ಆ ರೈತನ ಬೆನ್ನೆಲುಬು ಮುಂಗಾರು ಮಳೆ ಎಂದರೆ ಖಂಡಿತ ತಪ್ಪಾಗಲಾರದು.. ಹೌದು, ಅನ್ನದಾತನ ಬೆನ್ನೆಲುಬಾದ ಮುಂಗಾರು ಎರಡು ದಿನ ಮುಂಚಿತವಾಗಿ ದೇಶವನ್ನು ಪ್ರವೇಶಿಸಿದ್ದು, ರೈತನ ಮೊಗದಲ್ಲಿ ಹರ್ಷದ ಹೊನಲನ್ನು ಹೊಮ್ಮಿಸಿದೆ.
ರಾಜ್ಯದ ಜಲಾಶಯಗಳ ನೀರು ಕುಡಿಯಲು ಮಾತ್ರ ಸಾಕಾಗುತ್ತೆ!
ಕೇರಳದ ವೈನಾಡಿನ ಸುತ್ತಮುತ್ತ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಜಲಾಶಯದಲ್ಲಿ ಕಳೆದ 4 ದಿನಗಳಲ್ಲಿ 6000 ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬಂದಿದೆ.
ಜಲಾಶಯದಲ್ಲಿ ನೀರಿನ ಮಟ್ಟ 72.25 ಅಡಿಗೆ ತಲುಪಿದೆ. 1,047ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 5.8 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹವಿದೆ ಎಂದು ತಿಳಿದು ಬಂದಿದೆ. 350ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಈಗ ಏರಿಕೆಯಾಗಿದ್ದು, 11,968 ಕ್ಯೂಸೆಕ್ ಒಳಹರಿವು ಕಂಡುಬಂದಿದೆ.
ಕರ್ನಾಟಕ , ತಮಿಳುನಾಡಿಗೆ ನೈರುತ್ಯ ಮುಂಗಾರು ಲಗ್ಗೆ: ಬೆಂಗಳೂರಲ್ಲಿ ಮಳೆ ಸಂಭವ
ಹೆಗ್ಗಡೆದೇವನ ಕೋಟೆಯ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ 24 ಗಂಟೆಗಳಲ್ಲಿ 5 ಅಡಿಗಳಷ್ಟು ಏರಿಕೆಯಾಗಿದೆ. ಸುಮಾರು 15 ಸಾವಿರ ನೀರು ಹರಿದುಬರುತ್ತಿದೆ. ಕುಡಿಯುವ ನೀರಿಗಾಗಿ 100ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿಯೂ ಒಳ ಹರಿವು ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ನೀರಿನ ಮಟ್ಟ 2 ಅಡಿಗಳಷ್ಟು ಏರಿಕೆಯಾಗಿದೆ. ಒಳಹರಿವು 2266, ಕ್ಯೂಸೆಕ್ ಹಾಗೂ ನೀರಿನ ಮಟ್ಟ 2869 ಅಡಿಗೆ ಏರಿಕೆಯಾಗಿದೆ. ಆದರೆ ಬೇಲೂರಿನ ಸುತ್ತಮುತ್ತ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಯಗಚಿ ಜಲಾಶಯದ ನೀರಿನಮಟ್ಟ ಕಡಿಮೆಯಾಗಿದೆ. ಈ ಜಲಾಶಯದ ಒಳ ಹರಿವು ಕೇವಲ 20ಕ್ಯೂಸೆಕ್ ಇದೆ.
ಭಾರತ, ಮೊರಾಕ್ಕೊ,ಇರಾಕ್ ರಾಷ್ಟ್ರಗಳಲ್ಲಿ ಉಂಟಾಗಲಿದೆ ನೀರಿನ ಹಾಹಾಕಾರ!
ಶಿವಮೊಗ್ಗದಾದ್ಯಂತ ಸಾಧಾರಣ ಮಳೆ ಇದ್ದು, ತುಂಗಾ ಜಲಾಶಯಕ್ಕೆ 9,000 ಕ್ಯೂಸೆಕ್ ನೀರು ಹರಿದುಬಂದಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಅಡಿ. ಭದ್ರ ಜಲಾಶಯದ ನೀರಿನ ಮಟ್ಟ 121.2 ಅಡಿ ಇದ್ದು, 6,708 ಕ್ಯೂಸೆಕ್ ಗೆ ಏರಿಕೆಯಾಗಿದೆ. ಗರಿಷ್ಠ ಮಟ್ಟ 186 ಅಡಿ.
ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯದ ಒಳಹರಿವು 17,334 ಕ್ಯೂಸೆಕ್ ಗೆ ಏರಿಕೆಯಾಗಿದೆ. ಹಾರಂಗಿ ಜಲಾಶಯದಲ್ಲಿ 3,920 ಕ್ಯೂಸೆಕ್ ಒಳಹರಿವು ಹೆಚ್ಚಿದ್ದು, ಜಲಾಶಯದಲ್ಲಿ 2,821.05 ಅಡಿಗಳಷ್ಟು ನೀರಿನ ಸಂಗ್ರಹವಾಗಿದೆ.
ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ: ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ
ಇನ್ನು ಲಿಂಗನಮಕ್ಕಿ ಜಲಾಶಯದಲ್ಲಿ 1819 ಕ್ಯೂಸೆಕ್ ನೀರು ಹರಿದು ಬರುತ್ತಿದೆ.151.75 ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ 1752.05 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ಒಟ್ಟಾರೆ, ನೀರಿನ ಅಭಾವದಿಂದಾಗಿ ಬಣಗುಡುತ್ತಿದ್ದ ಭೂಮಿ ಮಳೆಯಿಂದ ತೊಯ್ದಂತಾಗಿದೆ. ಮಳೆಯಿಲ್ಲದೇ, ಕುಡಿಯುವ ನೀರಿಲ್ಲದೇ ಆಗಸದತ್ತ ಮುಖಮಾಡಿದ್ದ ರೈತನ ಮೊಗದಲ್ಲಿ ಈಗ ಉತ್ತು ಬಿತ್ತುವ ಆಶಾಕಿರಣ ಮೂಡಿದೆ. ಹಾಗಾಗಿ ಹೊಲದತ್ತ ನೇಗಿಲು ಹಿಡಿದು ಅನ್ನದಾತ ಸಾಗುತ್ತಿದ್ದಾನೆ.