ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ, ಬೆಳಗಾವಿಗೆ ಪ್ರವಾಹ ಭೀತಿ
ಬೆಂಗಳೂರು, ಬೆಳಗಾವಿ, ಜುಲೈ, 12: ಕರ್ನಾಟದ ಉಳಿದೆಡೆ ಮಳೆ ಅಬ್ಬರ ಕಡಿಮೆಯಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ವೇದಗಂಗಾ, ದೂದಗಂಗಾ ಮತ್ತು ಕೃಷ್ಣಾನದಿಯಲ್ಲಿ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದೆ. ಪಕ್ಕದ ಮಹಾರಾಷ್ಟ್ರದಲ್ಲೂ ವರುಣ ಅಬ್ಬರಿಸುತ್ತಿದ್ದಾನೆ.
ಚಿಕ್ಕೋಡಿಯಲ್ಲಿ ಮಳೆ ಅಬ್ಬರ ಜೋರಾಗಿದ್ದು 6 ಸೇತುವೆಗಳು ಮುಳುಗಡೆಯಾಗಿವೆ. ಗ್ರಾಮಗಳ ನಡುವಿನ ಸಂಪರ್ಕಕ್ಕೆ ಮಳೆ ಅಡ್ಡಿಯಾಗಿದೆ. ಚಿಕ್ಕೋಡಿ ತಾಲೂಕಿನ ಶಾಲೆಗಳಿಗೆ ಬುಧವಾರವೂ ರಜೆ ನೀಡಲಾಗಿದೆ. ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಕೂಡ ಬಂದ್ ಆಗಿದ್ದು, ವಾಹನಗಳು ನಿಂತಲ್ಲೇ ನಿಂತಿದ್ದವು.[ಹುಕ್ಕೇರಿ: ಅರಳಬೇಕಿದ್ದ ಜೀವಗಳ ಬಲಿ ಪಡೆದ ಶಾಲೆಯ ಗೋಡೆ]
ಚಿಕ್ಕೋಡಿಯಲ್ಲಿ ಅತಿಹೆಚ್ಚು 11 ಸೆಂ ಮೀ ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕದ್ರಾ, ಲೋಂಡಾದಲ್ಲಿ 7 ಸೆಂ ಮೀ ಮಳೆ ಸುರಿದಿದೆ. ಉಳಿದಂತೆ ಬೆಳಗಾವಿ ಜಿಲ್ಲೆ ಸಂಕೇಶ್ವರ, ಶಿವಮೊಗ್ಗ ಜಿಲ್ಲೆ ಹುಲಿಕಲ್, ಆಗುಂಬೆ, ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಮಳೆಯಾಗಿದೆ.
ಬಾಗಲಕೋಟೆ, ಧರ್ಮಸ್ಥಳ, ಶೃಂಗೇರಿ, ಕಳಸ, ಮಂಗಳೂರು, ಸುಬ್ರಹ್ಮಣ್ಯ, ಕುಮಟ, ಬೆಳ್ತಂಗಡಿ, ಬಂಟ್ವಾಳ, ರಬಕವಿ, ಕೊಪ್ಪ, ಬನವಾಸಿಯಲ್ಲೂ ಮಳೆಯಾಗಿದೆ.[ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?]
ಮುನ್ಸೂಚನೆ: ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಕರಾವಳಿ, ಮತ್ತು ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.