ಭ್ರಷ್ಟ ಬಿಜೆಪಿಗೆ ಮತ ನೀಡಬೇಡಿ : ರಾಯಚೂರಿನಲ್ಲಿ ರಾಹುಲ್
ರಾಯಚೂರು, ಏ.7 : ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಶಿರಸಿ, ರಾಯಚೂರು ಮತ್ತು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಸದ್ಯ ರಾಯಚೂರಿನಲ್ಲಿ ಸಮಾವೇಶ ನಡೆಯುತ್ತಿದೆ.
ಸೋಮವಾರ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿರಸಿಗೆ ತೆರಳಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮಧ್ಯಾಹ್ನ ರಾಹುಲ್ ಗಾಂಧಿ ರಾಯಚೂರಿಗೆ ಆಗಮಿಸಿದ್ದು, ಕ್ಷೇತ್ರದ ಅಭ್ಯರ್ಥಿ ಬಿ.ವಿ.ನಾಯಕ್ ಪರವಾಗಿ ಮತಯಾಚನೆ ಮಾಡಿದರು.
ತಮ್ಮ ಭಾಷಣದಲ್ಲಿ ಯಡಿಯೂರಪ್ಪ, ಜರ್ನಾರ್ದನ ರೆಡ್ಡಿ, ಶ್ರೀರಾಮುಲು, ಆನಂದ್ ಸಿಂಗ್ ಅವರ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್ ಗಾಂಧಿ, ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುರಿದಿದೆ. ಇವರೆಲ್ಲರೂ ಜೈಲಿನಲ್ಲೇ ಇರಬೇಕು ಎಂದು ಹೇಳಿದರು. ಜನರ ಹಣವನ್ನು ಲೂಟಿ ಹೊಡೆದ ಇವರಿಗೆ ಮತ ನೀಡುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು.

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು
* ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಕರ್ನಾಟಕ ಬಿಜೆಪಿ ಸರ್ಕಾರ ಮುರಿದಿದೆ. ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಸುರೇಶ್ ಬಾಬು ಅವರು ಜನರಿಗೆ ವಂಚಿಸಿದ್ದಕ್ಕಾಗಿ ಜೈಲು ಸೇರಿದ್ದಾರೆ.
* ರೈತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಕಾಳಜಿ ಇದೆ. ಆದ್ದರಿಂದ ಭೂ ಪರಿವರ್ತನಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಬಿಜೆಪಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ.
* ಗುಜರಾತ್ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರಗಳು ದೇಶಕ್ಕೆ ಮಾದರಿ ಆಗಬೇಕಿಲ್ಲ. ಅವು ಭ್ರಷ್ಟಾಚಾರದಲ್ಲಿ ತೊಲಗಿವೆ.
* ಬಡವರನ್ನು ಕನಿಷ್ಠ ಮಧ್ಯಮ ವರ್ಗದವರಾಗಿ ಪರಿವರ್ತಿಸುವುದು ಕಾಂಗ್ರೆಸ್ ಪಕ್ಷದ ಗುರಿ. ಅವರಿಗೆ ಅಗತ್ಯವಾದ ಸೌಲಭ್ಯವನ್ನು ನೀಡಲು ನಾವು ಸಿದ್ಧರಿದ್ದೇವೆ.
* ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ.
* ಕಳೆದ ಹತ್ತು ವರ್ಷಗಳಲ್ಲಿ ನಾವು 15 ಕೋಟಿ ಬಿಪಿಎಲ್ ಕುಟುಂಬದವರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ.
* ಗುಜರಾತ್ ಮಾದರಿ ಸರ್ಕಾರದಲ್ಲಿ ಮಹಿಳೆಯರಿಗೆ ಅಗತ್ಯ ಭದ್ರತೆ ಸಿಗುತ್ತಿಲ್ಲ. ಏಕೆಂದರೆ ಸ್ವತಃ ಬಿಜೆಪಿ ಮಹಿಳೆಯರಿಗೆ ಗೌರವ ನೀಡುವುದಿಲ್ಲ.
ರಾಹುಲ್ ಗಾಂಧಿ ಸಂಜೆ 5.30ರ ಸುಮಾರಿಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications