ಶ್ರೀರಾಘವೇಶ್ವರ ಭಾರತೀ ಶ್ರೀಗಳ ಚಾತುರ್ಮಾಸ ಸೀಮೋಲ್ಲಂಘನ
ಬೆಂಗಳೂರು, ಸೆ 28: ವಿಘ್ನಗಳಿಂದ ಭಗವಂತನ ಮಹತ್ವ ತಿಳಿಸುವ ಕಾರ್ಯವಾಗುತ್ತದೆ, ಹಾಗಾಗಿಯೇ ವಿಘ್ನಗಳ ಕುರಿತು ಚಿಂತಿಸಬೇಕಿಲ್ಲ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಮನ್ಮಥ ನಾಮ ಸಂವತ್ಸರದ ಛಾತ್ರ ಚಾತುರ್ಮಾಸದ ಸೀಮೋಲ್ಲಂಘನದ ಅಂಗವಾಗಿ ಸೋಮವಾರ (ಸೆ 28) ಗಿರಿನಗರದ ರಾಮೋತ್ಸಂಗ ವೇದಿಕೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆ ಮತ್ತು ಚಾತುರ್ಮಾಸ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು.
ಸಂಕಟಗಳು ಬಂದಾಗ ಮಾತ್ರ ವ್ಯಕ್ತಿ ದೇವರಲ್ಲಿ ನಂಬಿಕೆ ಇಟ್ಟು ಒಳ್ಳೆಯ ಫಲ ಪಡೆಯುತ್ತಾನೆ, ಸುಖ ಇದ್ದರೆ ದೇವರನ್ನು ಮರೆಯುತ್ತಾನೆ. ಹಾಗಾಗಿಯೇ ವಿಘ್ನಗಳು ನಿರಂತರ ದೇವರ ಪ್ರಾರ್ಥನೆಗೆ ಕಾರಣವಾಗುತ್ತದೆ. (ಮಹಿಳಾ ಆಯೋಗಕ್ಕೆ ರಾಮಚಂದ್ರಾಪುರ ಮಠದ 12 ಪ್ರಶ್ನೆಗಳು)
ಕಠಿಣವಾದ ಪರೀಕ್ಷೆಗಳು ಹಿನ್ನೆಡೆಯಲ್ಲ ಅದು ಉತ್ತಮ ಬಹುಮಾನಗಳನ್ನು ಪಡೆಯುವ ಅರ್ಹತೆಯ ಬೆಳಕು. ಲೋಕ ಕಲ್ಯಾಣದ ಕಾರ್ಯ ಮಾಡುವಾಗ ಸವಾಲುಗಳು ಎದುರಾಗುತ್ತದೆ ಒಳ್ಳೆಯವರ ಒಳ್ಳೆಯತನಕ್ಕೆ ಪರೀಕ್ಷೆ ಕೂಡ ಬರುತ್ತದೆ. ಆದರೆ ಒಳ್ಳೆಯತನವನ್ನು ಉಳಿಸಿಕೊಳ್ಳುವ ಸಂಕಲ್ಪದಿಂದ ಮುಂದೆ ಹೆಜ್ಜೆ ಇಟ್ಟರೆ ಸತ್ಯ ಗೆಲ್ಲುತ್ತದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಅಂಗವೈಕಲ್ಯ ನಿಜವಾದ ವೈಕಲ್ಯವಲ್ಲ ಆದರೆ ವ್ಯಕ್ತಿಯ ಅಂತರಂಗ ಸರಿ ಇಲ್ಲದಿದ್ದರೆ ಅದು ಖಂಡಿತಾ ದೊಡ್ಡ ವೈಕಲ್ಯವೇ ಸರಿ. ಹಾಗಾಗಿಯೇ ಅಂಗ ವೈಕಲ್ಯಕ್ಕಿಂತ ಅಂತರಂಗದ ವೈಕಲ್ಯ ದೊಡ್ಡದು. ಇದರಿಂದ ಖಂಡಿತಾ ಜಗತ್ತಿಗೆ ಹಾನಿ.
ಪುರಾಣ ಮತ್ತು ಇತಿಹಾಸಗಳನ್ನು ಒಳಗೊಂಡು ಧರ್ಮ ಯುದ್ಧಗಳು ಕ್ಲಿಷ್ಟ. ಕಾರಣ ಧರ್ಮ ಸತ್ಯಗಳನ್ನು ಬಿಟ್ಟು ಕೆಡುಕನ್ನು ಎದುರಿಸಬೇಕು. ಕೆಡಕಿನಿಂದ ಯುದ್ಧ ಗೆಲ್ಲಬಾರದು ಎಂದು ಚಾತುರ್ಮಾಸ ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಭವಿಷ್ಯ ನಿರ್ಮಾಣದ ಚಾತುರ್ಮಾಸ್ಯ, ಮಠ ಕೇವಲ ಗುರುಗಳ ಸ್ವತ್ತು ಮಾತ್ರವಲ್ಲ ಅದು ಯಾರೋ ಬಲ್ಲವರ ಸ್ವತ್ತೂ ಕೂಡ ಅಲ್ಲ, ಇದು ಇಡೀ ಸಮಾಜದ ಸ್ವತ್ತು ಎನ್ನುವುದನ್ನು ಇಲ್ಲಿ ಸೇರಿದ ಲಕ್ಷ ಲಕ್ಷ ಜನ ಜಗತ್ತಿಗೆ ಸಾಕ್ಷೀಭೂತವಾಗಿ ತೋರಿಸಿದ್ದಾರೆ. ಎತ್ತರ ಹೋದವನು ಹತ್ತಿರವಾಗಿರಬೇಕು ಅದು ಮಾತ್ರ ಸಮಾಜಕ್ಕೆ ಲಾಭ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇಸ್ರೋ ನಿವೃತ್ತ ವಿಜ್ಞಾನಿ ಪಿ ಜೆ ಭಟ್ ರವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ವಿಶೇಷ ಪೂಜೆ ಸಂಪನ್ನಗೊಂಡ ನಂತರ ಶ್ರೀಗಳು ತಿಗಳರಪಾಳ್ಯಾದ ಮುನೇಶ್ವರ ದೇವಾಲಯಕ್ಕೆ ತೆರಳುವ ಮೂಲಕ ಸೀಮೋಲ್ಲಂಘನ ನೆರವೇರಿಸಿದರು.