"Yuva Nidhi: ಬಿಡಿಗಾಸಿನ "ಯುವನಿಧಿ' ಬೇಕಿಲ್ಲ: ಶಾಶ್ವತ ಉದ್ಯೋಗದ ಗ್ಯಾರೆಂಟಿ ಕೊಡಿ''
ಬೆಂಗಳೂರು, ಅಕ್ಟೋಬರ್ 14: ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೇಮಕಾತಿ ನಡೆದಿಲ್ಲ ಎಂದು ಆರೋಪಿಗಿರುವ ಉದ್ಯೋಗಾಕಾಂಕ್ಷಿಗಳು ಕಲಬುರಗಿ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಲಾಖಾವಾರು ಹುದ್ದೆಗಳ ನೇಮಕಾತಿಗೆ ಆಗ್ರಹ ಜೋರಾಗಿದೆ. ಈ ಮಧ್ಯೆ ಅರ್ಹ ನಿರುದ್ಯೋಗಿಗಳಿಗೆ ಯುನಿಧಿ ನೀಡುವುದಾಗಿ ತಿಳಿಸಿದ್ದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ರಾಜ್ಯದ ಯುವಜನರಿಗೆ "ಬಿಡಿಗಾಸಿನ ಯುವನಿಧಿ ಅಲ್ಲ ಸ್ವಾಮಿ; ಶಾಶ್ವತವಾಗಿ ಅನ್ನ ಹಾಕುವ ಉದ್ಯೋಗದ ಗ್ಯಾರೆಂಟಿ ಕೊಡಿ' ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3,00,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಿಕೊಂಡು ನಮ್ಮ ಯುವಕರಿಗೆ ಉದ್ಯೋಗದ ಗ್ಯಾರೆಂಟಿ ಕೊಡಿ ಎಂದು ಉದ್ಯೋಗಾಕಾಂಕ್ಷಿಗಳ ಪರ ಒತ್ತಾಯಿಸಿದ್ದಾರೆ.

ಯುವನಿಧಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಯುವಕರ ಮೂಗಿಗೆ ತುಪ್ಪ ಸವರುವ ನಾಟಕ ಸಾಕು ಎಂದು ಅವರು ಕಿರಿ ಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ನಮ್ಮ ನಾಡಿನ ಯುವಕರ ಭವಿಷ್ಯದ ಬಗ್ಗೆ ಬದ್ಧತೆ ಇದ್ದರೆ, ನೀವು ಹೇಳಿಕೊಳ್ಳುವಂತೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಖಾಲಿ ಇರುವ ಎಲ್ಲಾ 3 ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕು. ಮುಂದಿನ ಆರು ತಿಂಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಿಕೊಂಡು ಯುವಕರಿಗೆ ಉದ್ಯೋಗದ ಗ್ಯಾರೆಂಟಿ ನೀಡಿ ಎಂದು ಹೇಳಿದರು.
ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ
ನಮ್ಮ ತಂದೆ ತಾಯಿಗೆ ವಯಸ್ಸಾಗಿದೆ. ಅವರಿನ್ನು ಎಷ್ಟು ವರ್ಷ ಅಂತಾ ದುಡಿಯಬೇಕು. ನಮಗೆ ಉದ್ಯೋಗ ಕೊಡಿ. ಸರ್ಕಾರದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಿ. ನಮಗೊಂದು ಕೆಲಸ ಬೇಕಲ್ಲವೇ? ಅಕ್ಕಿ, ಬಸ್ ಉಚಿತ ಕೊಟ್ಟರೆ ಜೀವನ ಸಾಗದು ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ಗ್ರಂಥಾಲಯಗಳಲ್ಲಿ ಗಂಟೆಗಟ್ಟಲೇ ಕೂತು ಅಭ್ಯಾಸ ಮಾಡುತ್ತೇವೆ. ಆದರೆ ಅದು ಪ್ರಯೋಜನವಾಗಬೇಕಾದರೆ ನೇಮಕಾತಿ ಆಗಲೇಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡು ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ನೇಮಕಾತಿಗಳು ಆಗಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳ ವಯೋಮಿತಿ ಸಹ ಮೀರುತ್ತಿದೆ. ಈ ಬಗ್ಗೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿತು. ಇದೆಲ್ಲ ಬೆಳವಣಿಗೆ ಮಧ್ಯ ಆರ್.ಅಶೋಕ್ ಅವರು, ಯುವನಿಧಿ ಹಣ ನಿಗದಿತ ಅವಧಿಗೆ ಮಾತ್ರ ಕೊಡಲಾಗುತ್ತದೆ. ಈ ಹಣ ನೀಡಿದರೆ ಯುವಕರ ಭವಿಷ್ಯ ಕಟ್ಟಲಾಗುವುದಿಲ್ಲ. ಶೀಘ್ರವೇ ನೇಮಕಾತಿ ಮಾಡಿಕೊಳ್ಳುವಂತೆ ಸಿಎಂ, ಡಿಸಿಎಂಗೆ ಮನವಿ ಮಾಡಿದರು.
RSS ನಿಷೇಧ ಗೀಳು ಬಿಡಿ, ಪರಿಹಾರ ಕೊಡಿ
ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಗೋಳು ಹೇಳತೀರದ್ದಾಗಿದೆ. ಬಗ್ಗೆ ಗಮನ ಹರಿಸದ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ಅವರಿಗೆ RSS ನಿಷೇಧ ಮಾಡುವ ಗೀಳು ಹೆಚ್ಚಾಗಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ, ಬಂದ್ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ನೀಡುವತ್ತ ಗಮನ ಹರಿಸುಂತೆ ಮತ್ತೊಂದು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.












Click it and Unblock the Notifications