Monsoon Rain: ರಾಜ್ಯದಲ್ಲಿ ಶೇ 21 ಮಳೆ ಕೊರತೆ ನಡುವೆ ಕೃಷಿ ಇಲಾಖೆ ಅನಾಥ: ಡಿಕೆಶಿ ತಾಕತ್ತು ಪ್ರಶ್ನಿಸಿದ ಆರ್.ಅಶೋಕ್
ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಒಂದು ವಾರದಲ್ಲಿ ಮುಂಗಾರು ಮಳೆ ಕ್ಷೀಣಿಸಲಿದೆ ಎಂಬ ಮುನ್ಸೂಚನೆ ಇದೆ. ಈಗಾಗಲೇ ಕಳೆದ ಹದಿನೈದು ದಿನಗಳಲ್ಲಿ ನಿರೀಕ್ಷಿತ ಮಳೆ ಆಗದ ಕೊರತೆ ಉಂಟಾಗಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಈ ಹೊತ್ತಿನಲ್ಲಿ ಕೃಷಿ ಇಲಾಖೆ ನಿರ್ವಹಣೆಗೆ ಈವರೆಗೆ ಖಾತೆ ಹಂಚಿಕೆ ಮಾಡಲಾಗಿಲ್ಲ. ಸಂಪುಟ ಭರ್ತಿ ಮಾಡುವ ಧೈರ್ಯ, ಯೋಗ್ಯತೆ, ತಾಕತ್ತು ಇಲ್ಲದ ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಶೇ. 21ರಷ್ಟು ಮಳೆ ಕೊರತೆ ಆಗಿದೆ. ಈ ಹಿನ್ನೆಲೆಯಲ್ಲಿ 'ಮುಂಗಾರು ಕ್ಷೀಣ ಭೀತಿ ಒಂದೆಡೆ, ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲದ ಅನಾಥ ಪರಿಸ್ಥಿತಿ ಇನ್ನೊಂದೆಡೆ!' ಶಿರ್ಷಿಕೆಯಡಿ ಆರ್.ಅಶೋಕ್ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಮುಂಗಾತು ಬಿತ್ತನೆ, ಅಗತ್ಯ ಬೀಜ, ರಸಗೊಬ್ಬರ ಪೂರೈಕೆ ನಿರ್ವಹಣೆಯಂತಹ ಅಗತ್ಯ ಸಂದರ್ಭದಲ್ಲಿ ಸಚಿವರಿಲ್ಲದೇ ಕೃಷಿ ಇಲಾಖೆ ಖಾಲಿ ಹೊಡೆಯುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ, ಅನ್ನದಾತ ಮುಂದೇನು ಎಂಬ ಭೀತಿಯಲ್ಲಿ ಆಕಾಶದ ಕಡೆ ಮುಖ ಮಾಡಿ ಕೂತಿದ್ದಾನೆ. ಆದರೆ ಇಂತಹ ಭೀಕರ ಪರಿಸ್ಥಿತಿಯಲ್ಲೂ ರಾಜ್ಯದ ಅತ್ಯಂತ ಪ್ರಮುಖವಾದ ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರನ್ನು ನೇಮಿಸಲು ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.
'ರಬ್ಬರ್ ಸ್ಟಾಂಪ್' ಆಡಳಿತ
ಕಮಿಷನ್ ಮಾಸ್ಟರ್ (ಸಿಎಂ) ಡಿಕೆ ಶಿವಕುಮಾರ್ ನಿಮ್ಮ ಈ ಸಹಾಯಕ 'ರಬ್ಬರ್ ಸ್ಟಾಂಪ್' ಆಡಳಿತಕ್ಕೆ ನಾಡಿನ ರೈತರು ಬಲಿಯಾಗಬೇಕೇ?. ಸಂಪುಟ ವಿಸ್ತರಣೆಗೆ ಕೈಹಾಕಿದರೆ ಶಾಸಕರು ಮುನಿಸಿಕೊಂಡು ತಾವು ಸುರಿದು ಧಕ್ಕಿಸಿಕೊಂಡ ಕುರ್ಚಿಯೇ ಅಲ್ಲಾಡಿ, ಸರ್ಕಾರವೇ ಬಿದ್ದು ಹೋಗುತ್ತದೆ ಎಂಬ ಭಯ ನಿಮ್ಮನ್ನು ಅಷ್ಟೊಂದು ಕಾಡುತ್ತಿದೆಯೇ? ಎಂದು ಸಚಿವರ ಆಯ್ಕೆ ವಿಳಂಬವನ್ನು ಕಟುವಾಗಿ ಪ್ರಶ್ನಿಸಿದರು.
ಸಂಪುಟ ಭರ್ತಿ ತಾಕತ್ತು, ಯೋಗ್ಯತೆ ಇಲ್ಲವೇ?
ಒಂದು ಸಚಿವ ಸಂಪುಟವನ್ನು ಭರ್ತಿ ಮಾಡುವ ಧೈರ್ಯ, ಯೋಗ್ಯತೆ, ತಾಕತ್ತು ಇಲ್ಲದ ನೀವು, ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸ್ವಾಭಿಮಾನಿ ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹ ಎಂದು ಆರೋಪಿಸಿದರು. ಒಂದು ಕಡೆ ಹೈಕಮಾಂಡ್ ಗುಲಾಮಗಿರಿಯ ಸಹಾಯಕತೆ, ಮತ್ತೊಂದು ಕಡೆ ಆಂತರಿಕ ಬಂಡಾಯದ ನಡುಕ, ಅಧಿಕಾರದ ಮೇಲಿನ ನಿಮ್ಮ ಹಿಡಿತವನ್ನು ಸಂಪೂರ್ಣವಾಗಿ ಸಡಿಲಗೊಳಿಸಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ಕಿಡಿ ಕಾರಿದರು.
ಅನ್ನದಾತರ ನಿರ್ಲಕ್ಷ್ಯದ ಶಾಪ ತಟ್ಟುತ್ತೆ
ನೆನಪಿಡಿ ರೈತರನ್ನು ನಿರ್ಲಕ್ಷ್ಯ ಮಾಡಿದ ಯಾವ ಸರ್ಕಾರವೂ ಉಳಿದ ಇತಿಹಾಸವಿಲ್ಲ, ಅನ್ನದಾತನ ಶಾಪ ಸುಮ್ಮನೆ ಬಿಡುವುದಿಲ್ಲ! ಈ ಕೊಡಲೇ ದೆಹಲಿಗೆ ಹೊರಟು ಹೈಕಮಾಂಡ್ ಕಾಲಿಗೆ ಬಿದ್ದು ಪರಿಸ್ಥಿತಿಯನ್ನು ವಿವರಿಸಿ, ತಕ್ಷಣವೇ ಒಬ್ಬ ಸಮರ್ಥ ಕೃಷಿ ಸಚಿವರನ್ನು ನೇಮಿಸಿ. ನಿಮ್ಮ ಕುರ್ಚಿಯನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್ ಅನ್ನು ನಿರ್ಲಕ್ಷಿಸಿದ ತಕ್ಷಣ ರೈತರ ಆಡಳಿತಕ್ಕೆ ತೊಂದರೆಯಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಶೇ. 21ರಷ್ಟು ಮಳೆ ಕೊರತೆ
ಜೂನ್ 1ರಿಂದ ಜೂನ್ 15ರವರೆಗೆ ನಿರೀಕ್ಷಿತ ಮಳೆ ಆಗದೇ ಕರ್ನಾಟಕದಲ್ಲಿ ಶೇ. 21ರಷ್ಟು ಮಳೆ ಕೊರತೆ ಆಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಕೊರತೆ ಎದುರಾಲಿದ್ದು, ರೈತರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಐಎಂಡಿ ಮುನ್ಸೂಚನೆ ನೀಡಿದೆ. ಜೂನ್ 20ರ ನಂತರ ಮಳೆ ಪ್ರಮಾಣ ಕ್ಷೀಣಿಸಲಿದೆ. ಇದಕ್ಕೆ ಎಲ್ನಿನೋ ಪ್ರಭಾವ ಎಂದು ಹೇಳಲಾಗುತ್ತಿದೆ. ಪೆಸಿಫಿಕ್ ಮಹಾಸಾಗರದ ಮೇಲ್ಮೈನಲ್ಲಿ ತಾಪಮಾನ ಹೆಚ್ಚಿರುವ ವಾತಾವರಣ (ಎಲ್ನಿನೋ) ಪರಿಣಾಮವಾಗಿ ಈ ಬಾರಿ ಮುಂಗಾರಿಗೆ ಹಿನ್ನಡೆ ಆಗಲಿದೆ ಎಂದು ತಿಳಿಸಲಾಗಿದೆ.
ದುರ್ಬಲ ಮುಂಗಾರು
ಜೂನ್ 4ರಂದು ಆಗಮಿಸಿರುವ ಮುಂಗಾರು ಮಳೆ ಎರಡೇ ದಿನಕ್ಕೆ ರಾಜ್ಯದ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಸುರಿಯಲಾರಂಭಿಸಿತು. ಬಳಿಕ ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಕೊಂಚ ಚುರುಕು ಪಡೆಯಿತಾದರೂ ನಿರೀಕ್ಷಿತ ಮಳೆ ಆಗಲಿಲ್ಲ. ಆರಂಭದಲ್ಲೇ ಮುಂಗಾರು ದುರ್ಬಲವಾಗಿದ್ದರಿಂದ ಮಳೆ ಕೊರತೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಹವಾಮಾನ ಮುನ್ಸೂಚನೆ
ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳು, ಉತ್ತರ ಕರ್ನಾಟಕ, ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡು ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ನಿರೀಕ್ಷೆ ಇದೆ. ಅತ್ಯಧಿಕ ಮಳೆ ನಿರೀಕ್ಷೆ ಸದ್ಯಕ್ಕೆ ಇಲ್ಲ. ಬಹುತೇಕ ಕಡೆಗಳಲ್ಲಿ ಬಿಸಿಲಿನ ಜೊತೆಗೆ ಅಲಲ್ಲಿ ಮಬ್ಬು ಕವಿದ ವಾತಾವರಣ ಕಂಡು ಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.














Click it and Unblock the Notifications