Ration Rice: ಅನ್ನಭಾಗ್ಯದ ಅಕ್ಕಿಗೆ ಕನ್ನ! ಸರ್ಕಾರದಿಂದಲೇ ನಡಿತಿದ್ಯಾ ಅಕ್ರಮ ಅಕ್ಕಿ ಮಾರಾಟ?
Anna Bhagya Scheme: ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅಕ್ರಮ, ನಿಯಮ ಬದಲಾವಣೆ ಹಾಗೂ ಭ್ರಷ್ಟಾಚಾರ ವಿಚಾರವಾಗಿ ಮುನ್ನೆಲೆಗೆ ಬರುತ್ತಿವೆ. ಬಡವರಿಗೆ ಅನುಕೂಲ ಆಗುವಂತೆ ಮಾಡಿದ ಯೋಜನೆಗಳ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲವೇನೋ ಎಂಬಂ ಅನುಮಾನ ಮೂಡಿದೆ. ಬೆಂಗಳೂರಿನ ವಿವಿಧಡೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಬಳಿಕ ಟನ್ಗಟ್ಟಲೇ ಪಡಿತರ ಅಕ್ಕಿ ಮತ್ತು ರಾಗಿಯ ಅಕ್ರಮ ಮಾರಾಟ ಬಯಲಾಗಿದೆ. ಇದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ.
ಸಿಎಂ ಡಿಕೆ ಶಿವಕುಮಾರ್ ಆಡಳಿತದಲ್ಲಿ, 'ಬಡವರ ಹೊಟ್ಟೆ ತುಂಬಿಸಬೇಕಾದ ಪಡಿತರ ಅಕ್ಕಿ, ಕಳ್ಳ ಸಂತೆಕೋರರ ಪಾಲಾಗುತ್ತಿದೆ' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಕ್ಸ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. 'ಅನ್ನಭಾಗ್ಯಕ್ಕೂ ಕಾಂಗ್ರೆಸ್ 'ಕೈ'ಗಳ ಕನ್ನ'! ಎಂದು ಶಿರ್ಷಿಕೆ ಹೆಸರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಬಡವರ ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೋಟಿ ಕೋಟಿ ಲೂಟಿಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಅನ್ನಭಾಗ್ಯ: ಕೋಟಿ ಕೋಟಿ ಲೂಟಿ ಆರೋಪ
ಬಡವರ ಮನೆ ತಲುಪಬೇಕಾದ ಪಡಿತರ ಅಕ್ಕಿ ಖಾಸಗಿಯವರ ಪಾಲಾಗುತ್ತಿದೆ. ಜನರ ಹಸಿವಿನ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ನಾಯಕರು, ಬಡವರ ತಟ್ಟೆಗೆ ಸೇರಬೇಕಾದ "ಅನ್ನಭಾಗ್ಯ"ದ ಅಕ್ಕಿಯನ್ನು ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸಾಗಿಸಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಹೇಳಿದರು.
ಲೋಕಾಯುಕ್ತ ದಾಳಿಯಿಂದ ರಾಜ್ಯ ಕರ್ನಾಟಕ ಸರ್ಕಾರದ ಮತ್ತೊಂದು ಮಹಾ ಹಗರಣ ಈಗ ಜಗಜ್ಜಾಹೀರಾಗಿದೆ. ಟನ್ ಗಟ್ಟಲೇ ಅಕ್ಕಿ ಕಳ್ಳತನವಾಗಿದೆ. ಬೆಂಗಳೂರಿನ ವಿವಿಧೆಡೆ ಆಹಾರ ನಿಗಮದ ಗೋದಾಮುಗಳಿಂದಲೇ ನೂರಾರು ಕ್ವಿಂಟಲ್ ಅನ್ನಭಾಗ್ಯದ ಅಕ್ಕಿ, ರಾಗಿ ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸರಬರಾಜು ಆಗಿದ್ದು ಪತ್ತೆ ಆಗಿದೆ ಎಂದರು.
ಸರ್ಕಾರಿ ವ್ಯಾಪ್ತಿಯ ಗೋದಾಮುಗಳಲ್ಲಿ ಭದ್ರತೆ ಇಲ್ಲದೇ, ಸಿಸಿಟಿವಿ ಇಲ್ಲದೇ ದಾಸ್ತಾನು ಮಾಡಲಾಗಿದೆ ಎಂದರೆ ಇದರಲ್ಲಿ ಸರ್ಕಾರದ ಅಧಿಕಾರಿಗಳು ನಾಯಕರು ಶಾಮೀಲಾಗಿದ್ದಾರಾ? ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ.
ಮುಂದುವರಿದು ಆರ್.ಅಶೋಕ್, ಶಾಂತಿನಗರದ ನಿಗಮದ ಗೋದಾಮಿನಲ್ಲೇ ದಾಖಲೆ ಇಲ್ಲದ ನೂರಾರು (ಒಟ್ಟು 860 ಚೀಲಗಳು) ಚೀಲ ಅಕ್ಕಿ ಪತ್ತೆಯಾಗಿದೆ. ಗೋದಾಮುಗಳಲ್ಲಿ ಸಿಸಿಟಿವಿ ಇಲ್ಲ, ಸುರಕ್ಷತೆಯೂ ಇಲ್ಲ. ಇದೆಲ್ಲವೂ ವ್ಯವಸ್ಥಿತ ಲೂಟಿಗೆ ಸರ್ಕಾರವೇ ಮಾಡಿಕೊಟ್ಟ ದಾರಿಯಲ್ಲವೇ? ಎಂದು ಪ್ರಶ್ನಿಸಿದರು.
ಪಡಿತರ ವಿತರಣೆಗೆ ಬರುವ ಅಕ್ಕಿಗಳನ್ನು ರೀ-ಪ್ಯಾಕೇಜಿಂಗ್ ದಂಧೆಯಲ್ಲಿ ತೊಡಗಿಸಲಾಗುತ್ತದೆ. ಅಂದರೆ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ, ಬೇರೆ ಚೀಲಗಳಿಗೆ ತುಂಬಿಸಿ ಮುಕ್ತ ಮಾರಿ ಲೂಟಿ ಹೊಡೆಯುತ್ತಿರುವ ಮಾಫಿಯಾಕ್ಕೆ ಸರ್ಕಾರದ ಶ್ರೀರಕ್ಷೆ ಇದೆ. ಸರ್ಕಾರದ ಸಹಕಾರ ಇಲ್ಲದೆ ನಡೆಸಲು ಸಾಧ್ಯವೇ? ಎಂದು ಆಪಾದಿಸಿದರು.
ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ "ಲೂಟಿ ಸರ್ಕಾರ"ದ ವಿರುದ್ಧ ಜನ ದಂಗೆ ಏಳುವ ದಿನ ಬಹಳ ದೂರವಿಲ್ಲ. ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ಕೆಳಗೆ ನಡೆಯುತ್ತಿರುವ ಈ ಹಗರಣಕ್ಕೆ ನಿಮ್ಮ ಉತ್ತರವೇನು ಸ್ವಾಮಿ? ಇದೇನಾ ನಿಮ್ಮ ಪಾರದರ್ಶಕತೆ? ಇದೇನಾ ನಿಮ್ಮ ಕಾರ್ಯವೈಖರಿ? ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ತಕ್ಷಣವೇ ಈ ಅಕ್ಕಿ ಮಾಫಿಯಾದ ಸೂತ್ರಧಾರರನ್ನು ಜೈಲಿಗಟ್ಟುವಂತೆ ಅವರು ಆಗ್ರಹಿಸಿದ್ದಾರೆ.
ಕಸ ಟೆಂಡರ್: ಸಿಬಿಐ ತನಿಖೆಗೆ ಆಗ್ರಹ
ರಾಜ್ಯ ಸರ್ಕಾರ ಕಸದ ಟೆಂಡರ್ ನೀಡಿ ಮಹಾಲೋಟಿಗೆ ಮುಂದಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರು, ಇದೀಗ ತನಿಖೆಗೆ ಸಿದ್ಧ ಎಂದಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸವಾಲೆಸೆದಿದ್ದಾರೆ. 'ಮಾಧ್ಯಮಗಳ ಮುಂದೆ ಹಾರಿಕೆ ಉತ್ತರ ನೀಡುವ ಕಮಿಷನ್ ಸಚಿವ ಡಿಕೆ ಶಿವಕುಮಾರ್ ಅವರೇ, ಕ್ಯಾಮೆರಾಗಳ ಮುಂದೆ ನಿಮ್ಮ ಈ 'ಉತ್ತರಕುಮಾರನ ಪೌರುಷ' ಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್ನ ಈ ಮಹಾ ಲೂಟಿಯಲ್ಲಿ ನಿಮ್ಮ ಪಾತ್ರವಿಲ್ಲ ಎನ್ನುವುದಾದರೆ ಪ್ರಕರಣವನ್ನು ಈ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸುವಂತೆ ಅಶೋಕ್ ಆಗ್ರಹಿಸಿದ್ದಾರೆ.
"ಕಮಿಷನ್ ಏಜೆಂಟ್" ಹೇಳಿಕೆ: ಡಿಕೆಶಿಗೆ ತಿರುಗೇಟು
ಘನತ್ಯಾಜ್ಯ ವಿಲೇವಾರಿ ಟೆಂಡರ್ ಹೆಸರಿನಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನಾನೇ ಖುದ್ದಾಗಿ ದೂರು ಕೊಡುತ್ತೇನೆ!. ಮಾಧ್ಯಮಗಳ ಮುಂದೆ ಕ್ಯಾಮೆರಾ ನೋಡಿ ಬಿಲ್ಡಪ್ ಕೊಡುವುದನ್ನು ಬಿಟ್ಟು, ತನಿಖೆಗೆ ನಿರ್ದೇಶಿಸುವ ತಾಕತ್ತು ಪ್ರದರ್ಶಿಸಿ. ಕಸದಲ್ಲೂ ಕಮಿಷನ್ ಹೊಡೆದ ಆ ಮಹಾ "ಕಮಿಷನ್ ಏಜೆಂಟ್" ಯಾರು ಎಂಬ ಸತ್ಯ ಹೊರ ಬರಲಿ. ಕರ್ನಾಟಕದ ಜನತೆಗೆ ಈ ಸರ್ಕಾರದ ಅಸಲಿ ಮುಖ ಏನೆಂದು ತಿಳಿಯಲಿ, ಎಂದು ತಮಗೆ ಕಮಿಷನ್ ಏಜೆಂಟ್ ಎಂದಿದ್ದ ಡಿಕೆ ಶಿವಕುಮಾರ್ಗೆ ಅಶೋಕ್ ತಿರುಗೇಟು ನೀಡಿದರು.













Click it and Unblock the Notifications