ಶನಿವಾರ ಸಂಜೆಯೇ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ!
ಬೆಂಗಳೂರು, ಅ 30: ನಟ ಪುನೀತ್ ರಾಜ್ಕುಮಾರ್ ಪುತ್ರಿ ಧೃತಿ ಶನಿವಾರ ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಇಂದು ಸಂಜೆಯೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನೆರವೇರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
"ಅಮೆರಿಕಾದ ನ್ಯೂಯಾರ್ಕ್ನಿಂದ ಶುಕ್ರವಾರ ಹೊರಟಿರುವ ಧೃತಿ ಮಧ್ಯಾಹ್ನ 12.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ. ಅಲ್ಲಿಂದ ಅವರು ಇಂಡಿಗೋ ವಿಮಾನ ನಿಲ್ದಾಣ ಮೂಲಕ ಬೆಂಗಳೂರು ತಲುಪುತ್ತಾರೆ. ಒಂದು ವೇಳೆ ದೆಹಲಿಯಲ್ಲಿ ವಿಳಂಬವಾರೆ ರಾಜ್ಯ ಸರ್ಕಾರದಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗುವುದು" ಎಂದು ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಅಂತ್ಯಕ್ರಿಯೆ ಕುರಿತು ವಿವರ ನೀಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, "ಡಾ.ರಾಜ್ಕುಮಾರ್ ಸಮಾಧಿ ಪಕ್ಕ ಪಾರ್ವತಮ್ಮ ರಾಜ್ಕುಮಾರ್ ಸಮಾಧಿ ಇದೆ. ಅಮ್ಮನವರ ಸಮಾಧಿ ಪಕ್ಕ 55 ಅಡಿ ಬಿಟ್ಟು ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ" ಎಂದು ಹೇಳಿದರು.
ಪುನೀತ್ ಪುತ್ರಿ ಧೃತಿ ಮಧ್ಯಾಹ್ನ ದೆಹಲಿ ತಲುಪುತ್ತಾರೆ. ಅವರನ್ನು ಸಂಜೆ 5ರೊಳಗೆ ಬೆಂಗಳೂರಿಗೆ ಕರೆತರಲಾಗುವುದು. ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ಬರುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸದಸ್ಯರೊಂದಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದಲ್ಲಿ ಸ್ಥಳಾವಕಾಶ ಒದಗಿಸಿದ್ದಾರೆ. ವೀಸಾ ತೊಂದರೆಯಾದಾಗ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಿದ್ದಾರೆ ಎಂದು ರಾಕ್ಲೈನ್ ವಿವರಿಸಿದರು.
ಸ್ಥಳ ಪರಿಶೀಲನೆ:
ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಎಲ್ಲ ಅಂತಿಮ ಸಿದ್ದತೆಗಳು ನಡೆಯುತ್ತಿವೆ. ಶುಕ್ರವಾರವೇ ಸ್ಥಳ ನಿಗದಿ ಮಾಡಲಾಗಿದ್ದು, ಬಿಬಿಎಂಪಿ ಅಧಿಕಾರಿ ಮತ್ತು ಸಿಬ್ಬಂದಿ ಇಡೀ ರಾತ್ರಿ ಎಲ್ಲ ಸಿದ್ದತೆಗಳನ್ನು ಮಾಡಿದ್ದಾರೆ.
ಸಚಿವ ಕೆ. ಗೋಪಾಲಯ್ಯ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅಂತಿಮ ವಿಧಿವಿಧಾನ ನಡೆಯುವ ಸ್ಥಳದ ಸಿದ್ಧತೆಗಳನ್ನ ಪರಿಶೀಲನೆ ನಡೆಸಿದರು.
ಸ್ಕ್ರೀನ್ ಗಳ ವ್ಯವಸ್ಥೆ:
ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಜನರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ವೀಕ್ಷಿಸಲು ಸ್ಕ್ರೀನ್ಗಳ ವ್ಯವಸ್ಥೆ ಮಾಡಲಾಗಿದೆ.
ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಚಿತ್ರರಂಗ ಮತ್ತು ರಾಜಕೀಯ ಪ್ರಮುಖರಿಗೆ ಮಾತ್ರ ಅವಕಾಶ ಇದೆ. ಇಲ್ಲಿ ಸ್ಥಳಾವಕಾಶ ಚಿಕ್ಕದಾಗಿ ಇರುವುದರಿಂದ ಹೆಚ್ಚಿನ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ರೂಟ್ ಮ್ಯಾಪ್:
ಪುನೀತ್ ರಾಜ್ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.
ಮಧ್ಯಾಹ್ನ 3ಕ್ಕೆ ಕಂಠೀರವ ಕ್ರೀಡಾಂಗಣದಿಂಧ ಮೆರವಣಿಗೆ ಹೊರಡಲಿದೆ. ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ರ, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಆರ್.ಎಂ.ಸಿ. ಯಾರ್ಡ್, ಗೊರಗುಂಟೆ ಪಾಳ್ಯ, ರಿಂಗ್ ರಸ್ತೆ ಮೂಲಕ ಕಂಠೀರವ ಸ್ಟುಡಿಯೋ ತಲುಪಲಾಗುತ್ತದೆ. ಈ ಮಾರ್ಗ ಮಧ್ಯದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ರಾಜ್ಯಪಾಲರಿಂದ ಅಂತಿಮ ದರ್ಶನ:
ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಗೆಹ್ಲೋಟ್ ಸಾಂತ್ವನ ಹೇಳಿದರು. ಗೆಹ್ಲೋಟ್ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, 'ಇದು ದೊಡ್ಡ ನಷ್ಟ. ಈ ನಷ್ಟ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ' ಎಂದು ಹೇಳಿದರು.