Breaking: ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಭಾನುವಾರಕ್ಕೆ ಮುಂದೂಡಿಕೆ
ಬೆಂಗಳೂರು, ಅ. 30 : ಪುನೀತ್ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಜನ ಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಶನಿವಾರ ಸಂಜೆ ನಡೆಸಲು ತೀರ್ಮಾನಿಸಿದ್ದ ಅಂತ್ಯ ಸಂಸ್ಕಾರವನ್ನು ಭಾನುವಾರ ನೆರವೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೇ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಪುನೀತ್ ಗೆ ಅಂತಿಮ ನಮನ ಪಡೆಯಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ಅವರ ಕುಟುಂಬದ ಜತೆ ಚರ್ಚೆ ನಡೆಸಿ ಭಾನುವಾರ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಿದ್ದೇವೆ. ಅಭಿಮಾನಿಗಳು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ಕಾಪಾಡಿಕೊಳ್ಳಬೇಕು. ಶಾಂತ ರೀತಿಯಲ್ಲಿ ವರ್ತಿಸಬೇಕು. ಇಡೀ ದಿನ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅಂತ್ಯಕ್ರಿಯೆ ನಾಳೆ ನಡೆಯಲು ತೀರ್ಮಾನಿಸಿದ್ದೇವೆ. ಎಲ್ಲರೂ ಸಂಯಮ ಕಳೆದುಕೊಳ್ಳಬಾರದು. ಅಪ್ಪಾಜಿ ಅಂತ್ರಕ್ರಿಯೆ ವೇಳೆ ನಡೆದ ಘಟನೆ ನಡೆಯಬಾರದು. ಅಭಿಮಾನಿಗಳು ಸಂಯಮದಿಂದ ಇದೇ ರೀತಿ ಇರಬೇಕು. ಅಂತ್ಯಕ್ರಿಯೆ ಎಲ್ಲಿ ನಡೆಯುತ್ತದೆ, ಹೇಗೆ ಮೆರವಣಿಗೆ ಹೋಗುತ್ತದೆ ಎಂಬ ವಿವರಗಳನ್ನು ಶನಿವಾರ ಸಂಜೆ ವೇಳೆಗೆ ಪ್ರಕಟಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

"ದೊಡ್ಡ ಮಗಳು ಬರುತ್ತಿದ್ದಾಳೆ. ಅವಳು ಬರುವುದು ತಡವಾಗುತ್ತಿದೆ. ಭಾನುವಾರ ಎಷ್ಟೊತ್ತಿಗೆ ನಡೆಯುತ್ತಿದೆ ಎಂಬುದನ್ನು ಇಂದು ರಾತ್ರಿ ತಿಳಿಸುತ್ತೇವೆ. ಮಗಳು ಬರುವುದರೊಳಗೆ ರಾತ್ರಿ 8 ಆಗಬಹುದು. ಅವಳನ್ನು ಸಮಾಧಾನ ಪಡಿಸಬೇಕಿದೆ" ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲರೂ ದರ್ಶನ ಪಡೆಯಲು ಅನುಕೂಲ ಆಗುವಂತೆ ಭಾನುವಾರ ಅಂತ್ಯಕ್ರಿಯೆಗೆ ನಿರ್ಧರಿಸಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಅಭಿಮಾನಿಗಳು ಸಹಕಾರ ನೀಡಬೇಕು" ಎಂದು ಅವರು ಮನವಿ ಮಾಡಿದರು.












Click it and Unblock the Notifications