ಸೇನಾ ಕಾರ್ಯಾಚರಣೆಯಲ್ಲಿ ಪುತ್ತೂರಿನ ಹೆಮ್ಮೆಯ ಯೋಧ ಜುಬೈರ್
ಬೆಂಗಳೂರು, ಫೆಬ್ರವರಿ 20: ಯೋಧರು ನಮ್ಮ ನಾಡಿನ ಹೆಮ್ಮೆ. ಅವರಿಗೆ ರಾಜ್ಯ, ಭಾಷೆ, ಜಾತಿ, ಧರ್ಮಗಳ ಹಂಗು ಇಲ್ಲ. ಎಲ್ಲರೂ ದೇಶಸೇವೆಗೆ ನಿಂತವರು. ದೇಶದ ಭದ್ರತೆ, ನಾಗರಿಕರಿಗೆ ಹಾನಿ ಮಾಡುವ ವೈರಿಯನ್ನು ನಾಶಪಡಿಸಿ ತಾಯ್ನಾಡನ್ನು ರಕ್ಷಿಸುವುದೇ ಅವರ ಗುರಿ. ಅದಕ್ಕಾಗಿ ಅವರ ಜೀವವನ್ನೇ ಮುಡಿಪಾಗಿಟ್ಟಿರುತ್ತಾರೆ.
ಹೀಗೆ ಹುತಾತ್ಮ ಸೈನಿಕರು ನಮ್ಮಲ್ಲಿನ ದೇಶಪ್ರೇಮದ ಕಿಚ್ಚನ್ನು ಭಾವನಾತ್ಮಕವಾಗಿ ಪ್ರಚೋದಿಸಿದರೆ, ಇನ್ನು ವೀರಾವೇಶದಿಂದ ಹೋರಾಡುವ ಯೋಧರು ನಮ್ಮೊಳಗೆ ಆತ್ಮಸ್ಥೈರ್ಯ ತುಂಬುತ್ತಾರೆ. ಅಂತಹ ನಮ್ಮ ಹೆಮ್ಮೆಯನ್ನು ಹೆಚ್ಚಿಸುವ ಸೈನಿಕರಲ್ಲಿ ಜುಬೈರ್ ಒಬ್ಬರು.
ಪುತ್ತೂರು ತಾಲ್ಲೂಕಿನ ಕಡಬದ ಹಳೆನೇರಂಕಿಯ 29 ವರ್ಷದ ಯೋಧ ಜುಬೈರ್ ಈಗ ಸಾಮಾಜಿಕ ಜಾಲತಾಣದಲ್ಲಿ 'ಹೀರೋ' ಆಗಿದ್ದಾರೆ. ಅವರ ಫೋಟೊಗಳು ಎಲ್ಲೆಡೆ ಹರಿದಾಡುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಕರಣ್ ನಗರ್ ಬೆಟಾಲಿಯನ್ ಕೇಂದ್ರ ಕಚೇರಿಯಲ್ಲಿನ 49ನೇ ತುಕಡಿಯಲ್ಲಿ ಜುಬೈರ್ ಸೇವೆ ಸಲ್ಲಿಸುತ್ತಿದ್ದಾರೆ.

ಜುಬೈರ್, ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಾಲೆ ಮತ್ತು ಪಿಯು ಶಿಕ್ಷಣ ಪೂರೈಸಿದ ಅವರು, 2008-11ರ ಸಾಲಿನಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಬಿಎಂ ವಿದ್ಯಾಭ್ಯಾಸ ಪಡೆದಿದ್ದಾರೆ.
2013ರಲ್ಲಿ ಸೇನೆಗೆ ಸೇರಿಕೊಂಡ ಅವರು, ಹೈದರಾಬಾದ್ನಲ್ಲಿ ತರಬೇತಿ ಪಡೆದು ಮಹಾರಾಷ್ಟ್ರದ ಲಾತೂರ್ನಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಈಗ ಎರಡೂವರೆ ವರ್ಷದಿಂದ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಕರಣ್ ನಗರ್ನಲ್ಲಿ ಅಡಗಿಕುಳಿತಿದ್ದ ಇಬ್ಬರು ಉಗ್ರರನ್ನು ಹಿಡಿದ ಯೋಧರ ತಂಡದಲ್ಲಿದ್ದ ಜುಬೈರ್ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕ್ವಿಕ್ ಆಕ್ಷನ್ ಟೀಮ್ನ ಭಾಗವಾಗಿದ್ದ ಜುಬೈರ್, ಸೇನೆಯ ಕಮೆಂಡೇಷನ್ ಡಿಸ್ಕ್ ಮತ್ತು ಪ್ರಮಾಣಪತ್ರದ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಡತನದ ಕುಟುಂಬದಿಂದ ಬಂದ ಜುಬೈರ್ ತಂದೆ ಸಮೂನು ಬ್ಯಾರಿ ಕೂಲಿ ಕಾರ್ಮಿಕ. ಅವರ ಸಹೋದರರಲ್ಲಿ ಒಬ್ಬರಾದ ಅಬ್ದುಲ್ ರಜಾಕ್, ಮದರಸಾದಲ್ಲಿ ಶಿಕ್ಷಕರಾಗಿದ್ದಾರೆ.
ಪೊಲೀಸ್ ಅಗುವ ಆಸೆ ಹೊಂದಿದ್ದ ಜುಬೈರ್, ಸೇನಾ ಪರೀಕ್ಷೆಗೆ ಹೋಗಿದ್ದವರು ಮೊದಲ ಹಂತದಲ್ಲಿಯೇ ಆಯ್ಕೆಯಾಗಿದ್ದರು.
ಮೈಕೊರೆಯುವ ಚಳಿಯ ವಾತಾವರಣದಲ್ಲಿ ಸುಮಾರು 30 ಗಂಟೆ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಖುಷಿ ಅವರಲ್ಲಿದೆ. ಯೋಧನಾಗಿದ್ದಕ್ಕೆ ಹೆಮ್ಮೆ ಇದೆ ಎಂದು ಅವರು ಮಾಧ್ಯಮ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.












Click it and Unblock the Notifications