ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿ ಸೇರಿ ಇಬ್ಬರ ಬಂಧನ
ವಿಜಯಪುರ, ಮಾರ್ಚ್ 4: ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಇಂಥದ್ದೊಂದು ಘಟನೆ ನಡೆದಿದ್ದು ಅಭ್ಯರ್ಥಿ ಸಹಿತ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಪರೀಕ್ಷಾ ಮೇಲ್ವಿಚಾರಕಿಯನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದೆ.
ಅತೀ ಸೂಕ್ಷ್ಮ ಕೇಂದ್ರವಾಗಿರುವ ಶಾಂತೇಶ್ವರ ಕಾಲೇಜಿನ ಒಟ್ಟು 7 ಪರೀಕ್ಷಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಸದರಿ ಕೇಂದ್ರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಮುರುಗೇಂದ್ರ ಹಿರೇಮಠ ಹಾಗೂ ಬಾಗಪ್ಪ ಸಗರ ಎಂಬುವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕಿ ಶ್ರೀಮತಿ ಎಂ.ಡಿ. ನಾರಾಯಣಕರ ಇವರ ಅಮಾನತ್ತಿಗೆ ಸೂಚಿಸಲಾಗಿದೆ.
ಪ್ರಕರಣ ಶಿಕ್ಷಣ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ತಲುಪಿ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಸ್ಥಳಕ್ಕೆ ದೌಡಾಯಿಸಿದೆ. ಪರಿಶೀಲನೆ ವೇಳೆ ಫೋಟೊ ಕ್ಲಿಕ್ಕಿಸಿಕೊಂಡಾತ ತಪ್ಪೊಪ್ಪಿಕೊಂಡಿದ್ದಾನೆ. ಜತೆಗೆ ಪರೀಕ್ಷಾ ಕೇಂದ್ರ ಜಾಲಾಡಲಾಗಿ ಹೆಚ್ಚಿನವರು ನಕಲು ಮಾಡುತ್ತಿದ್ದ ಅಂಶ ಬಯಲಾಗಿದೆ.
ಪ್ರಶ್ನೆ ಪತ್ರಿಕೆ ತೋರಿಸಿದ ಮುರುೇಂದ್ರ ಹಾಗೂ ಬಾಗಪ್ಪ ಸಗರ ಈತನ ಮೇಲೆ ಮಾಲ್ ಪ್ರಾಕ್ಟಿಸ್ ಕೇಸ್ ದಾಖಲಿಸಲಾಗಿದೆ. ತನಿಖೆ ಮುಂದುವರಿದಿರುವುದಾಗಿ ಎಸ್ಪಿ ಅನುಪಮ ಅಗರವಾಲ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications