ಪಿಯು ಮೌಲ್ಯಮಾಪನ ಬಹಿಷ್ಕಾರ, ಮುರಿದು ಬಿದ್ದ ಸಂಧಾನ ಸಭೆ
ಬೆಂಗಳೂರು, ಏಪ್ರಿಲ್ 01 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಇದೀಗ ಮೌಲ್ಯ ಮಾಪನ ಬಹಿಷ್ಕಾರದ ಸಮಸ್ಯೆ ಎದುರಾಗಿದೆ. ಮೌಲ್ಯ ಮಾಪನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿರುವ ಉಪನ್ಯಾಸಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಮುರಿದುಬಿದ್ದಿದೆ.
ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಜೊತೆ ಸಿದ್ದರಾಮಯ್ಯ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸಭೆ ನಡೆಸಿದರು. ಆದರೆ, ಒಮ್ಮತದ ನಿರ್ಧಾರವನ್ನ ಕೈಗೊಳ್ಳಲು ಸಭೆ ವಿಫಲವಾಯಿತು. [ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬಹಿಷ್ಕಾರ?]

'ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಮೌಲ್ಯ ಮಾಪನ ಬಹಿಷ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕು' ಎಂದು ಸಿದ್ದರಾಮಯ್ಯ ಅವರು ಉಪನ್ಯಾಸಕರಿಗೆ ಭರವಸೆ ನೀಡಿದರು. [ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]
ಆದರೆ, ಉಪನ್ಯಾಸಕರು ಮುಖ್ಯಮಂತ್ರಿಗಳ ಭರವಸೆಗೆ ಮಣಿಯಲಿಲ್ಲ. ತಮ್ಮ ನಿರ್ಧಾರವನ್ನು ವಾಪಸ್ ಪಡೆಯುವುದಿಲ್ಲ. ಏ.3ರಂದು ಮತ್ತೊಮ್ಮೆ ಸಭೆ ಸೇರಿ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಮೌಲ್ಯ ಬಹಿಷ್ಕಾರ ಮಾಡುವ ತಮ್ಮ ನಿರ್ಧಾರಕ್ಕೆ ಈಗಲೂ ಬದ್ಧವಾಗಿರುವುದಾಗಿ ಉಪನ್ಯಾಸಕರು ಹೇಳಿದರು. [ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?]
ಖಚಿತ ಭರವಸೆ ಸಿಗದೆ ಸಭೆ ವಿಫಲವಾಗಿದೆ : ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರುಳೆ ಅವರು, 'ಮೌಲ್ಯ ಮಾಪನ ಬಹಿಷ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ತಿಳಿಸಿದರು.
'ಏ.3ರಂದು ಮತ್ತೊಮ್ಮೆ ಸಭೆ ಸೇರಿ ನಿರ್ಧಾರ ಕೈಗೊಳ್ಳೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು ಖಚಿತವಾದ ಭರವಸೆ ನೀಡಿದ ಕಾರಣ ಇಂದಿನ ಸಭೆ ವಿಫಲವಾಗಿದೆ' ಎಂದರು.












Click it and Unblock the Notifications