545 ಹುದ್ದೆಯ ಪಿಎಸ್ಐ ಪರೀಕ್ಷೆ ರದ್ದು: ಹೊಸ ದಿನಾಂಕ ಶೀಘ್ರವೇ ಘೋಷಣೆ
ಬೆಂಗಳೂರು , ಏಪ್ರಿಲ್ 29: ಕರ್ನಾಟಕ ಪಿಎಸ್ ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ಮಹತ್ವದ ಸುದ್ದಿಗೋಷ್ಟಿಯನ್ನು ನಡೆಸಿದರು. ಈ ವೇಳೆ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರೋದು ಬೆಳಕಿಗೆೆ ಬಂದಿದೆ. ಹೀಗಾಗಿ 545 ಪಿಎಸ್ ಐ ಹುದ್ದೆಯ ನೇಮಕಾತಿ ಪರೀಕ್ಷೆಯನ್ನೇ ರದ್ದು ಮಾಡಿ ಮತ್ತೆ ಮರು ಪರೀಕ್ಷೆಯನ್ನು ಮಾಡಲು ಸರ್ಕಾರ ತೀರ್ಮಾನಿಸಿರುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಪಿಎಸ್ಐ ಮರು ಪರೀಕ್ಷೆ
ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಸ್ಪಷ್ಟವಾಗಿದೆ. ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರು ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಇದೀಗ ಹೊಸದಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 545 ಪಿಎಸ್ಐ ಪರೀಕ್ಷೆಗೆ ಮತ್ತೆ 54,244 ಅಭ್ಯರ್ಥಿಗಳು ಮತ್ತೆ ಪರೀಕ್ಷೆಯನ್ನು ಬರೆಯಬೇಕಾಗಿದೆ. ಹಣಕ್ಕಾಗಿ ಹುದ್ದೆ ಎಂಬುದನ್ನು ಮರೆಯಬೇಕು. ಆ ಮೂಲಕ ಸರ್ಕಾರ ಪರೀಕ್ಷೆಗೆ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಗೃಹ ಸಚಿವರು ಮಾಹಿತಿಯನ್ನು ನೀಡಿದರು.
ಕಷ್ಟ ಪಟ್ಟು ಓದಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ
ಇನ್ನು ಪಿಎಸ್ ಐ ನೇಮಕಾತಿ ಪರೀಕ್ಷೆಯ ವೇಳೆ ಶ್ರಮವಹಿಸಿ ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಓದಿ ನಿಯತ್ತಾಗಿ ಪರೀಕ್ಷೆ ಬರೆದ ಅದೆಷ್ಟೋ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ಅನ್ಯಾಯವಾಗಿದೆ. ಯಾರೋ ಹತ್ತಾರು ಜನ ಮಾಡಿರುವ ಅಕ್ರಮಕ್ಕೆ ನೂರಾರು ಜನರ ಭವಿಷ್ಯ ಅತಂತ್ರವಾಗಿದೆ.

"ಆರೋಪಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು ಮರು ಪರೀಕ್ಷೆಯನ್ನು ಬರೆಯಬೇಕು. ಇವರ ಅವ್ಯವಹಾರದಿಂದಾಗಿ ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಿದೆ ನಮಗೂ ಆ ನೋವಿದೆ,'' ಎಂದು ಆರಗ ಜ್ಞಾನೇಂದ್ರ ಹೇಳಿದರು.
ಆರೋಪಿಗಳಿಗೆ ಕಾಂಗ್ರೆಸ್ ಶಾಸಕರ ಕುಮ್ಮಕ್ಕು
ಅಪರಾಧಿಗಳಿಗೆ ಕುಮ್ಮಕ್ಕು ಕೊಟ್ಟಿರುವ ಶಾಸಕ ಹೀರೋ ಆಗಲು ಹೊರಟಿದ್ದಾರೆ. ಸಮಾಜ ದ್ರೋಹಿ ಶಕ್ತಿಗಳಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಇದನ್ನು ಖಂಡಿಸಬೇಕು. ಕಾಗ್ರೆಸ್ ಪಕ್ಷ ಹಾಗೂ ಸಾರ್ವಜನಿಕರು ಇದನ್ನು ಗಮನಿಸಬೇಕಾಗುತ್ತದೆ ಎಂದು ಗೃಹಸಚಿವರು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ದಿವ್ಯಾ ಹಾಗರಗಿ ಬಂಧನದ ಬಗ್ಗೆ ಸ್ಪಷ್ಟನೆ
''ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ 18 ದಿನಗಳಿಂದ ತಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿ, ಅರ್ನಾ, ಸುನಂದಾ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕಾನೂನಾತ್ಮಕವಾಗಿ ತನಿಖೆ ನಡೆಯುತ್ತದೆ,'' ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಕಾನೂನು ಸಮರ ಏರ್ಪಡುವ ಸಾಧ್ಯತೆ
ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರು ಅಕ್ರಮ ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದಾಗಿ ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿ ಮರು ಪರೀಕ್ಷೆಯನ್ನು ಮಾಡಲು ನಿರ್ಧರಿಸಿದೆ. ಇದರಿಂದಾಗಿ ಕಷ್ಟ ಪಟ್ಟು ನಿಯತ್ತಿನಿಂದ ಓದಿ ಉತ್ತೀರ್ಣರಾಗಿರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಅನ್ನೋದು ಸತ್ಯವಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications