ಎಡಿಜಿಪಿ ಪೌಲ್ ಎತ್ತಂಗಡಿ: ಪಿಎಸ್ಐ ನೇಮಕಾತಿ ಅಕ್ರಮ ಕಾರಣವೇ?
ಬೆಂಗಳೂರು, ಏ. 27: ಪಿಎಸ್ಐ ನೇಮಕಾತಿಯಲ್ಲಿ ಭಾರೀ ಅಕ್ರಮ ಕಂಡು ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಐಪಿಎಸ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ಸಿಬಿಐ ನಲ್ಲಿ ಕೆಲಸ ನಿರ್ವಹಸಿಇದ ಹಿನ್ನೆಲೆಯುಳ್ಳ ಖಡಕ್ ಅಧಿಕಾರಿ ಅರ್. ಹಿತೇಂದ್ರ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿದಂತೆ ಸಿಐಡಿ ಪೊಲೀಸರು ಮಹತ್ವದ ಅಂಶಗಳನ್ನು ಬಯಲಿಗೆ ಎಳೆದಿದ್ದಾರೆ. ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಸೋರಿಕೆಯಾಗಿದೆ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್ ನೇಮಕಾತಿ ವಿಭಾಗ ಸರಿಯಾಗಿ ಬಿಗಿ ಕ್ರಮ ಮಾಡಿದ್ದ ಪಕ್ಷದಲ್ಲಿ ಅಕ್ರಮ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಎಡಿಜಿಪಿ ದರ್ಜೆಯ ಅಧಿಕಾರಿಯಾಗಿ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ಮಾಡಿಸಬೇಕಿತ್ತು. ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಕರ್ತವ್ಯಲೋಪದಿಂದಲೇ ಪರೀಕ್ಷೆಯಲ್ಲಿ ಅಕ್ರಮ ನಡೆಯಲು ಕಾರಣವಾಗಿದೆ.
ಈ ಎಲ್ಲಾ ಮಾನದಂಡಗಳನ್ನು ಇಟ್ಟುಕೊಂಡು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. 1995 ನೇ ಬಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮಂಗಳೂರು ಸೇರಿದಂತೆ ವಿವಿಧ ರೇಂಜ್ ಗಳ ಐಜಿಪಿಯಾಗಿ ಅಮೃತ್ ಪೌಲ್ ಕಾರ್ಯ ನಿರ್ವಹಿಸಿದ್ದರು.

ನೇಮಕಾತಿ ಅಕ್ರಮಕ್ಕೆ ಆಸ್ಪದ ಯಾಕೆ:
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೋಲಿಸಿದರೆ ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತಿವೆ ಎಂಬ ಮಾತಿತ್ತು. ಈ ಹಿಂದೆ ನೇಮಕಾತಿ ವಿಭಾಗದಲ್ಲಿದ್ದ ದಿವಂಗತ ಮಧುಕರಶೆಟ್ಟಿ ಅವರು, ಸಾಕಷ್ಟು ಪಾರದರ್ಶಕವಾಗಿ ನೇಮಕಾತಿ ವಿಭಾಗ ಕೆಲಸ ನಿರ್ವಹಿಸಲು ನಾಂದಿ ಹಾಡಿದ್ದರು. ಇನ್ನು ನೇಮಕಾತಿಯಲ್ಲಿ ಅಕ್ರಮಕ್ಕೆ ಆಸ್ಪದ ಇರುತ್ತದೆ ಎಂಬ ಕಾರಣಕ್ಕೆ ಮೌಖಿಕ ಸಂದರ್ಶನದ ಅಂಕಗಳನ್ನು ಸಹ ಕಡಿಮೆ ಮಾಡಿ, ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವರಿಗೆ ಹುದ್ದೆ ಸಿಗುವ ರೀತಿಯಲ್ಲಿ ಸಾಕಷ್ಟು ಪಾರದರ್ಶಕ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಹೀಗೆ ಪಾದರ್ಶಕ ನೇಮಕಾತಿಗೆ ಹೆಸರುವಾಸಿಯಾಗಿದ್ದ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗ ಎಚ್ಚೆತ್ತುಕೊಂಡಿದ್ದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಯಲು ಸಾಧ್ಯವಿರುತ್ತಿರಲಿಲ್ಲ.
ಸದ್ಯ ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾನಾ ಬಗೆಯ ಅಕ್ರಮಗಳು ನಡೆದಿವೆ. ಒಂದೆಡೆ ಪರೀಕ್ಷಾ ಕೇಂದ್ರದಲ್ಲಿಯೇ ವಿದ್ಯಾರ್ಥಿಗಳ ಉತ್ತರ ಹಾಳೆಗಳನ್ನು ಪಡೆದು ಸರಿ ಉತ್ತರ ತುಂಬಿಸಿ ಅಕ್ರಮ ಎಸಗಲಾಗಿದೆ. ಇನ್ನೊಂದೆಡೆ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಪರೀಕ್ಷೆ ಬರೆದು ಪಿಎಸ್ಐ ಹುದ್ದೆಗೆ ನೇಮಕವಾಗಿದ್ದಾರೆ. ಇಷ್ಟೆಲ್ಲಾ ಅಕ್ರಮಗಳು ನಡೆಯಲು ಕಾರಣ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದಿಂದ ಎತ್ತಂಗಡಿ ಮಾಡಲಾಗಿದೆ.












Click it and Unblock the Notifications