ಪಿಎಸ್ಐ ನೇಮಕಾತಿ ಹಗರಣ ಕೊಲೆಗಿಂತ ಗಂಭೀರ ಅಪರಾಧ!

ಬೆಂಗಳೂರು, ಜುಲೈ 14; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣವು ಕೊಲೆಗಿಂತ ಗಂಭೀರ ಅಪರಾಧ. ಕೊಲೆಯಲ್ಲಿ ಒಬ್ಬರು ಸಂತ್ರಸ್ತರಾಗುತ್ತಾರೆ. ಆದರೆ ಇಲ್ಲಿ ಇಡೀ ಸಮಾಜ ಸಂತ್ರಸ್ತವಾಗಿದ್ದು, 50 ಸಾವಿರಕ್ಕೂ ಅಧಿಕ ಮಂದಿ ನೋವು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹಗರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಆರೋಪಿಗಳಾದ ಸಿ. ಎನ್‌. ಶಶಿಧರ್‌ ಮತ್ತಿತರರು ಜಾಮೀನು ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌. ಪಿ.ಸಂದೇಶ್‌ ಅವರಿದ್ದ ಏಕಸದಸ್ಯಪೀಠ ಗುರುವಾರ ನಡೆಸಿತು.

ಕೊಲೆಯು ಈ ಥರದ ಅಪರಾಧ ಎಸಗುವುದಿಕ್ಕಿಂತ ಭಿನ್ನವಾಗಿರುತ್ತದೆ. ಇದು ಸಮಾಜದ ಮೇಲಿನ ಭಯೋತ್ಪಾದಕ ದಾಳಿ. ಇಂತಹ ಅಕ್ರಮಗಳು ಎಲ್ಲಾ ನೇಮಕಾತಿಗಳಲ್ಲೂ ನಡೆಸಲು ಬಿಟ್ಟು ನ್ಯಾಯಾಲಯವು ಕಣ್ಣು ಮುಚ್ಚಿ ಕುಳಿತಿಕೊಳ್ಳಬೇಕೆ? ಎಂದು ಹೈಕೋರ್ಟ್‌ ಪ್ರಶ್ನಿಸಿತು. ಸುಮಾರು ಎರಡುಗಂಟೆಗೂ ಅಧಿಕ ಕಾಲ ಅರ್ಜಿದಾರರ ಪರ ವಕೀಲರು ಮತ್ತು ಸಿಐಡಿ ಪರ ಎಸ್‌ಪಿಪಿ ವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.

ಕಣ್ಣುಮುಚ್ಚಿ ಕೂರಬೇಕೆ?; ವಿಚಾರಣೆ ವೇಳೆ ನ್ಯಾಯಪೀಠ "ಇದು ಕೊಲೆಗಿಂತ ಗಂಭೀರವಾದ ಅಪರಾಧ. ಕೊಲೆಯಾದರೆ ಒಬ್ಬ ಮಾತ್ರ ಸಾವಿಗೀಡಾಗುತ್ತಾನೆ. ಆದರೆ ಇಲ್ಲಿ 50 ಸಾವಿರ ಅಭ್ಯರ್ಥಿಗಳು ತೊಂದರೆಗೀಡಾಗಿದ್ದಾರೆ, ಇಡೀ ಸಮಾಜ ಸಂತ್ರಸ್ತವಾಗಿದೆ. ಅದಕ್ಕೆ ನಾನು ಹೇಳಿದ್ದು, ಅಕ್ರಮ ನೇಮಕಾತಿ ಸಮಾಜಕ್ಕೇ ಬಹು ದೊಡ್ಡ ಬೆದರಿಕೆಯಾಗಿದೆ. ಪ್ರತಿ ನೇಮಕದಲ್ಲೂ ಹೀಗೆ ಆದರೆ ಕೋರ್ಟ್‌ ಕಣ್ಮುಚ್ಚಿ ಕೂರಬೇಕೆ? ಅಸಮಾಧಾನ ಹೊರಹಾಕಿತು.

PSI Recruitment Scam More Than Murder, HC Observed Adjourns Hearing To July 20

ತನಿಖೆಯ ಪ್ರಗತಿಯ ವರದಿ ಪರಿಶೀಲಿಸಿದ ನ್ಯಾ. ಎಚ್‌. ಪಿ. ಸಂದೇಶ್‌, "ಪೊಲೀಸ್‌ ವರಿಷ್ಠಾಧಿಕಾರಿಯೂ ಎಡಿಜಿಪಿ ಶ್ರೇಣಿಗಿಂತ ಕೆಳಗಿದ್ದಾರಲ್ಲವೇ?. ಅವರು ಹೇಗೆ ಎಡಿಜಿಪಿಯನ್ನು ವಿಚಾರಣೆ ನಡೆಸಲು ಸಾಧ್ಯ? ಮಹತ್ವದ ಸ್ಥಾನದಲ್ಲಿರುವ ಎಡಿಜಿಪಿಯೇ ಓಎಂಆರ್‌ ಶೀಟ್‌ಗಳನ್ನು ತಿರುಚುವ ಕೃತ್ಯದಲ್ಲಿಭಾಗಿಯಾಗಿರುವುದರಿಂದ ಏನನ್ನು ನಿರೀಕ್ಷಿಸುವುದು?. ಪರಿಸ್ಥಿತಿ ಹೀಗಿರುವಾಗ, ಪಾರದರ್ಶಕ ತನಿಖೆಯನ್ನು ಹೇಗೆ ನಿರೀಕ್ಷಿಸಬಹುದು? ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಲ್ಲದೆ ಮತ್ತೇನು?" ಎಂದು ಕೇಳಿದರು.

15 ದಿನಗಳಲ್ಲಿ ತನಿಖೆ ಪೂರ್ಣ: ನ್ಯಾಯಾಲಯದ ಆದೇಶದಂತೆ ಆರ್‌ಎಫ್‌ಎಸ್‌ಎಲ್‌ ವರದಿ ಹಾಗೂ ಓಎಂಆರ್‌ ಶೀಟ್‌ಗಳನ್ನು ಬದಲಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿಸಿಐಡಿ ಹೈಕೋರ್ಟ್‌ಗೆ ಸಲ್ಲಿಸಿತು.

ಇದೇ ವೇಳೆ ಸರಕಾರದ ಪರ ವಾದ ಮಂಡಿಸಿದ ಎಸ್‌ಪಿಪಿ ವಿ. ಎಸ್‌. ಹೆಗ್ಡೆ, ತನಿಖೆ ಬಹುತೇಕ ಮುಕ್ತಾಯ ಹಂತದಲ್ಲಿದ್ದು, 15 ದಿನಗಳಲ್ಲಿ ಮುಕ್ತಾಯವಾಗಲಿದೆ. ಸಿಡಿಆರ್‌ನಲ್ಲಿನ ಮಾಹಿತಿಯಂತೆ ಕಾಲ್‌ ರೆಕಾರ್ಡ್‌ಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಅದರಿಂದ ಕೆಲವು ಮಹತ್ವದ ಅಂಶಗಳು ಲಭ್ಯವಾಗಲಿವೆ ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದರು.

PSI Recruitment Scam More Than Murder, HC Observed Adjourns Hearing To July 20

ಪಾರದರ್ಶಕ ತನಿಖೆ ಸಾಧ್ಯವೇ?; "ಅದಕ್ಕಾಗಿಯೇ 10 ದಿನಗಳ ಹಿಂದೆ ಪೌಲ್‌ ಅವರನ್ನು ಬಂಧಿಸಿದ ಮೇಲೆ ತನಿಖೆಯಲ್ಲಿಏನು ಪ್ರಗತಿಯಾಗಿದೆ ಎಂದು ಕೇಳಿದ್ದು. ಹೀಗಿರುವಾಗ ಎಡಿಜಿಪಿ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ತನಿಖೆ ನಡೆಸುವ ಸ್ಥಿತಿಯಲ್ಲಿರುತ್ತಾರೆಯೇ? ನೀವು ಕಳೆದ ಬಾರಿ ತನಿಖಾಧಿಕಾರಿಗಳ ಪಟ್ಟಿ ನೀಡಿದ್ದೀರಿ. ಅವರೆಲ್ಲರೂ ಎಡಿಜಿಪಿ ಶ್ರೇಣಿಗಿಂತ ಕೆಳಗಿದ್ದಾರೆ.

ಎಡಿಜಿಪಿಯೇ ಓಎಂಆರ್‌ಶೀಟ್‌ ತಿರುಚಿದ ಕೃತ್ಯದಲ್ಲಿಬಂಧಿತರಾಗಿರುವಾಗ ತನಿಖಾಧಿಕಾರಿಗಳಿಂದ ಪಾರದರ್ಶಕ ತನಿಖೆಯನ್ನು ನ್ಯಾಯಾಲಯ ನಿರೀಕ್ಷಿಸಲಾದೀತೆ?. ಏಕೆ ಇನ್ನೂ ಆ ಅಧಿಕಾರಿಯ ಹೇಳಿಕೆಯನ್ನು ದಾಖಲಿಸಿಲ್ಲ, ಅವರು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಅಲ್ಲವೇ?" ಎಂದು ಪೀಠ ಕೇಳಿತು.

ಜಾಮೀನು ನೀಡಬೇಡಿ: ಸಿಐಡಿ ಪರ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ವಿ. ಎಸ್‌. ಹೆಗ್ಡೆ , ಜಾಮೀನು ನೀಡುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, "ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕ ಅಕ್ರಮ ಸಾಧಾರಣ ಅಪರಾಧವಲ್ಲ, ಅದೊಂದು ಅತ್ಯಂತ ನೀಚ ಕೃತ್ಯ, ಇದರಲ್ಲಿಬಹುದೊಡ್ಡ ಪಿತೂರಿ ಅಡಗಿದೆ. ತನಿಖೆ ಮೂಲಕ ಎಲ್ಲವನ್ನೂ ಬಯಲಿಗೆಳೆಯಬೇಕಿದೆ" ಎಂದರು.

ಈವರೆಗಿನ ತನಿಖೆಯ ಅಂಶಗಳನ್ನು ವಿವರಿಸಿದ ಅವರು, "ಓಎಂಆರ್‌ ಶೀಟ್‌ಗಳನ್ನು ಬದಲಿಸಿದ್ದು, ಆರ್‌ಎಫ್‌ಎಸ್‌ಎಲ್‌ ವರದಿ, ಅಕ್ರಮಕ್ಕೆ ಅನುಸರಿಸಿದ ವಿಧಾನಗಳನ್ನು ಗಮನಿಸಿದರೆ ಇದು ಸಾಧಾರಣಾ ಅಪರಾಧವಲ್ಲ, ಅತ್ಯಂತ ನೀಚ ಕೃತ್ಯವಾಗಿದ್ದು, ಪಿಎಸ್‌ಐ ಹುದ್ದೆ ಪಡೆದು ಕಾನೂನು ಮತ್ತು ಸಮಾಜದ ರಕ್ಷಣೆ ಮಾಡಬೇಕಿದ್ದವರೆ ಅಕ್ರಮ ಎಸಗಿದ್ದಾರೆ" ಎಂದರು.

"ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಸ್ವತಃ ಪೊಲೀಸ್‌ ಅಧಿಕಾರಿಗಳೇ ಹಗರಣದಲ್ಲಿ ಶಾಮೀಲಾಗಿದ್ದಾರೆ. ನಿರ್ಲಜ್ಜ ವ್ಯಕ್ತಿಗಳಿಂದ ಅಕ್ರಮ ನಡೆದಿದೆ. ಎಡಿಜಿಪಿ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ದೂರವಾಣಿ ಕರೆಗಳು, ಎಸ್‌ಎಂಎಸ್‌, ವಾಟ್ಸಪ್‌ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ.

ಈವರೆಗೆ 2.5 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಗಂಭೀರತೆ, ಇದರಲ್ಲಿಭಾಗಿಯಾಗಿರುವ ವ್ಯಕ್ತಿಗಳನ್ನು ನೋಡಬೇಕಿದೆ. ಮುಖ್ಯವಾಗಿ ದೊಡ್ಡ ಮಟ್ಟದ ಭ್ರಷ್ಟಾಚಾರ ಈ ಪ್ರಕರಣ ಒಳಗೊಂಡಿದೆ. ಸಿಐಡಿ ಎಲ್ಲಾಆಯಾಮಗಳಲ್ಲಿತನಿಖೆ ನಡೆಸುತ್ತಿದೆ. ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು" ಎಂದು ಮನವಿ ಮಾಡಿದರು.

ಬನಿಯನ್‌ನಲ್ಲಿ ಕಾಣಿಸಿಕೊಂಡ ವ್ಯಕ್ತಿ; ವಿಚಾರಣೆಯ ಕೊನೆಯಲ್ಲಿಕೇಶವಮೂರ್ತಿ ಎಂಬ ಹೆಸರಲ್ಲಿ ವಿಡಿಯೋ ಕಾನ್ಸ್‌ರೆನ್ಸ್‌ಗೆ ಹಾಜರಾಗಿದ್ದ ವ್ಯಕ್ತಿ, "ನಾನು ಪಿಎಸ್‌ಐ ಅಭ್ಯರ್ಥಿ ನನ್ನ ಮನವಿ ಕೇಳಿ" ಎಂದರು. ಆಗ ಜಡ್ಜ್‌, "ಕೋರ್ಟ್‌ ಕಲಾಪದಲ್ಲಿಈ ರೀತಿ ಏಕಾಏಕಾಕಿ ಮಧ್ಯಪ್ರವೇಶಿಸುವುದು ಸರಿಯಲ್ಲ. ನಿಮ್ಮ ವಾದ ಏನೇ ಇದ್ದರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆಗ ನಿಮ್ಮ ಮನವಿ ಪರಿಗಣಿಸಲಾಗುವುದು. ಪ್ರಕರಣದ ವಿಚಾರಣೆ ನಡೆದಿದೆ ಅಂದ ಮಾತ್ರಕ್ಕೆ ಎಲ್ಲಾ 50 ಸಾವಿರ ಅಭ್ಯರ್ಥಿಗಳನ್ನು ನಾನು ಕೇಳಲಿಕ್ಕಾಗುವುದಿಲ್ಲ" ಎಂದರು.

ಇದೇ ವೇಳೆ ಒಂದಿಬ್ಬರು ವಿಡಿಯೋ ಕಾನ್ಸರೆನ್ಸ್‌ನಲ್ಲಿ ಬನಿಯನ್‌ ಧರಿಸಿ ಬಂದಿದ್ದಕ್ಕೆ ಸಿಟ್ಟಾದ ನ್ಯಾಯಮೂರ್ತಿ ಇದೇನಿದು? ಬನಿಯನ್‌ ಹಾಕಿಕೊಂಡು ವಿಚಾರಣೆಗೆ ಹಾಜರಾಗಿದ್ದಾರೆ, ಇಂಥದ್ದನ್ನು ನಿಲ್ಲಿಸಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+