Breaking; ಪಿಎಸ್ಐ ನೇಮಕಾತಿ ಹಗರಣ; ಕಿಂಗ್ಪಿನ್ ಸಿಐಡಿಗೆ ಶರಣು
ಬೆಂಗಳೂರು, ಮೇ 01; ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆಗಿರುವ ಮಂಜುನಾಥ ಮೇಳಕುಂದಿ ಸಿಐಡಿ ಪೊಲೀಸರಿಗೆ ಶರಣಾಗಿದ್ದಾನೆ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹಲವು ದಿನದಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಕೆಲವು ದಿನಗಳ ಹಿಂದೆ ಸಿಐಡಿ ಪೊಲೀಸರು ಮಂಜುನಾಥ ಮೇಳಕುಂದಿ ನಿವಾಸದ ಮೇಲೆ ದಾಳಿ ಮಾಡಿದ್ದರು. ಆಗ ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯ ಕೆಲವು ಹಾಲ್ ಟಿಕೆಟ್ಗಳು ಸಹ ಪತ್ತೆಯಾಗಿದ್ದವು.
ಕಲಬುರಗಿಯಲ್ಲಿ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಆಗಿ ಮಂಜುನಾಥ ಮೇಳಕುಂದಿ ಕೆಲಸ ಮಾಡುತ್ತಿದ್ದರು. ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯ ಹಗರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದರು.

ಮಂಜುನಾಥ ಮೇಳಕುಂದಿ ಕಲಬುರಗಿ ನಗರದ ಎನ್ಜಿಓ ಕಾಲೋನಿ ನಿವಾಸಿ. ಆಟೋದಲ್ಲಿ ಸಿಐಡಿ ಕಚೇರಿಗೆ ಆಗಮಿಸಿ ಪೊಲೀಸರ ಮುಂದೆ ಆರೋಪಿ ಶರಣಾಗಿದ್ದಾನೆ. ಆರೋಗ್ಯ ಸರಿ ಇಲ್ಲದ ಕಾರಣ ತಡವಾಗಿ ಆಗಮಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದ ಕಲಬುರಗಿ ಜಿಲ್ಲೆಯ ಸೇಡಂ ನಿವಾಸಿ ವಿರೇಶ್ ಬಳಿ 39 ಲಕ್ಷ ಹಣ ಪಡೆದಿರುವ ಆರೋಪ ಮಂಜುನಾಥ ಮೇಳಕುಂದಿ ಮೇಲಿದೆ. ಸಿಐಡಿ ಬಂಧಿಸಿದ್ದ ವಿರೇಶ್ ಮಂಜುನಾಥನಿಗೆ ಹಣ ನೀಡಿರುವುದಾಗಿ ಮಾಹಿತಿ ನೀಡಿದ್ದ.
ವಿರೇಶ್ ಹೇಳಿಕೆ ಬಳಿಕ ಸಿಐಡಿ ಪೊಲೀಸರು ಮಂಜುನಾಥ ಮೇಳಕುಂದಿಗೆ ವಿಚಾರಣೆ ಬರುವಂತೆ ನೋಟಿಸ್ ನೀಡಿದ್ದರು. ಆದರೆ ಆತ ನಾಪತ್ತೆಯಾಗಿದ್ದ. ಬಳಿಕ ಪೊಲೀಸರು ಆರೋಪಿ ಮನೆ ಮೇಲೆ ದಾಳಿಯನ್ನು ಸಹ ನಡೆಸಿದ್ದರು.
ಅಕ್ರಮವಾಗಿ ಪರೀಕ್ಷೆ ಬರೆಯುವವರನ್ನು ಹುಡುಕಿ, ಅವರಿಂದ ಹಣ ಪಡೆದು ಪರೀಕ್ಷಾ ಕೇಂದ್ರದವರ ಜೊತೆ ಮಂಜುನಾಥ ಮೇಳಕುಂದಿ ಡೀಲ್ ಕುದುರಿಸುತ್ತಿದ್ದ ಎಂಬುದು ಆರೋಪವಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಗುರುವಾರ ರಾತ್ರಿ ಪುಣೆಯಲ್ಲಿ ಬಂಧಿಸಿದ್ದರು. ಶುಕ್ರವಾರ ಆಕೆಯನ್ನು ಕಲಬುರಗಿಯಲ್ಲಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ 11 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಿದೆ.











Click it and Unblock the Notifications