ಪೊಲೀಸ್ ನೇಮಕಾತಿ ವಿಭಾಗದ ಸರ್ವ ಅಕ್ರಮಗಳ ಸೂತ್ರಧಾರ ಶಾಂತ ಕುಮಾರ್
ಬೆಂಗಳೂರು/ಕಲಬುರಗಿ, ಮೇ. 16: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಜತೆ ಒಡನಾಟ ಹೊಂದಿದ್ದವರ ವಿಚಾರಣೆಗೆ ಸಿಐಡಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ರುದ್ರಗೌಡ ಪಾಟೀಲ್ ಪಟಾಲಂ ಊರು ಖಾಲಿ ಮಾಡಿದೆ.
ರಾಜಕಾರಣಕ್ಕೆ ಎಂಟ್ರಿ ಕೊಡುವ ಆಸೆ ಹೊಂದಿದ್ದ ರುದ್ರಗೌಡ ಪಾಟೀಲ್ ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಸಾಧಿಸಿದ್ದರು. ಮಾತ್ರವಲ್ಲ ಸ್ಥಳೀಯವಾಗಿ ಹಲವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಪಿಎಸ್ಐ ಅಕ್ರಮದಲ್ಲಿ ಆರ್.ಡಿ. ಪಾಟೀಲ್ ಬಂಧನಕ್ಕೆ ಒಳಗಾಗುತ್ತಿದ್ದಂತೆ ಅವರ ಬೆಂಬಲಿಗರು ಬಂಧನ ಬೀತಿ ಎದುರಿಸಿದ್ದರು. ಅಫಜಲಪುರದ ಶಿವಪ್ಪ ಅಲಮೇಲ್ ಎಂಬಾತನನ್ನು ಪೊಲೀಸರು ದಿನವಡೀ ಡ್ರಿಲ್ ಮಾಡಿದ್ದರು. ಈ ವಿಚಾರ ಹೊರ ಬರುತ್ತಿದ್ದಂತೆ ಆರ್.ಡಿ. ಪಾಟೀಲನ ಬೆಂಬಲಿಗರು ಪರಾರಿಯಾಗಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ- ಉಗ್ರ ಸಂಘಟನೆ ಸೇರುವ ಬೆದರಿಕೆ
ಸಿಐಡಿ ತನಿಖೆ ಕೇಳಿ ಊರು ಬಿಟ್ಟ ಪಾಟೀಲ ಸಂಗಡಿಗರು:
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದರೂ ಮೂರು ದಿನದಲ್ಲಿ ಜಾಮೀನು ಪಡೆದು ಹೊರ ಬರುವುದಾಗಿ ರುದ್ರಗೌಡ ತನ್ನ ಪಟಲಾಂಗೆ ಹೇಳಿದ್ದ. ಹೀಗಾಗಿ ಪಾಟೀಲ್ ಬಂಧನದ ಬಳಿಕ ಜೈಲಿನಿಂದಲೇ ಅದ್ಧೂರಿ ಮೆರವಣಿಗೆ ನಡೆಸಲು ಬೆಂಬಲಿಗರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್ ಯಾವ ಆರೋಪಿಗೂ ಜಾಮೀನು ನೀಡಿಲ್ಲ. ಆರ್. ಡಿ. ಪಾಟೀಲ್ ಮೆರವಣಿಗೆ ವಿಚಾರ ಮಾಹಿತಿ ಕಲೆ ಹಾಕುತ್ತಿದ್ದಂತೆ ಬೆಂಬಲಿಗರು ಊರೇ ಬಿಟ್ಟು ಖಾಲಿ ಮಾಡಿದ್ದಾರೆ.
ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಕಾಶಿನಾಥನ ಕೈವಾಡ:
ಇನ್ನು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್, ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಇತರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಎಸಗಿರುವ ಬಗ್ಗೆ ಸಿಐಡಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಶಿನಾಥ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಡಿವೈಎಸ್ಪಿ ಶಾಂತಕುಮಾರ್ ವಿಚಾರಣೆ:
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿವೈಎಸ್ಪಿ ಶಾಂತ್ ಕುಮಾರ್ ಅವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿತ ಅಧಿಕಾರಿ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದಾಗ, ನೇಮಕಾತಿ ವಿಭಾಗಕ್ಕೆ ಸೇರಿದ ಕೊಠಡಿಗಳ ಕೀ, ಒಎಂಆರ್ ಶೀಟ್ ಸಂಗ್ರಹಿಸುತ್ತಿದ್ದ ಟ್ರಂಕ್ ಬೀಗ ಸೇರಿದಂತೆ ಹಲವು ವಸ್ತು ದೊರೆತಿವೆ. ಅಲ್ಲದೇ ಸಿಡಿ ಪೆನ್ ಡ್ರೈವ್ ಗಳನ್ನು ಸಿಐಡಿ ಪೊಲೀಸರು ವಶಡಿಸಿಕೊಂಡಿದ್ದಾರೆ. ಆಡುಗೋಡಿಯ ಕ್ವಾಟ್ರಸ್ ನಲ್ಲಿರುವ ಶಾಂತಕುಮಾರ್ ಮನೆ ಮೇಲೆ ಸಿಡಿ ಪೊಲೀಸರು ದಾಳಿ ಮಾಡಿದ್ದರು. ಪೊಲೀಸ್ ನೇಮಕಾತಿ ವಿಭಾಗದಿಂದ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಶಾಂತ್ ಕುಮಾರ್ ಅವರ ಪಾತ್ರ ಇರುವ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಶಾಂತ ಕುಮಾರ್ ಬ್ಯಾಂಕ್ ವಹಿವಾಟಿನ ವಿವರಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಈತ ಪಿಎಸ್ಐ ಆಕಾಂಕ್ಷಿಗಳಿಂದ ನೇರವಾಗಿ ಲಂಚ ಪಡೆದಿರವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಕ್ಷಾಧಾರಗಳ ಸಂಗ್ರಹ ಕಾರ್ಯದಲ್ಲಿ ಸಿಐಡಿ ಅಧಿಕಾರಿಗಳು ತೊಡಗಿದ್ದಾರೆ.
ಅಭ್ಯರ್ಥಿಗಳಿಗೆ ಸಿಗುತ್ತಾ ಜಾಮೀನು?
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಬ್ಬರು ಬಂಧಿತ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬಂಧಿತ ಆರೋಪಿಗಳಾದ ಗಜೇಂದ್ರ ಮತ್ತು ಮನುಕುಮಾರ್ ಎಂಬುವರು ಅರ್ಜಿ ಸಲ್ಲಿಸಿದ್ದು, ಇವರ ಪರ ವಕೀಲರಾದ ಸಿಎಚ್ ಹನುಮಂತರಾಯ ಮತ್ತು ಮನು ಕುಮಾರ್ ವಕಾಲತ್ತು ಸಲ್ಲಿಸಿದ್ದಾರೆ.