ಒಂದೇ ದಿನ ಮೂರು ಸಿನಿಮಾ ಮಿಸ್ ಮಾಡ್ಕೊಂಡ ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ, ಅವತ್ತು ಏನಾಗಿತ್ತು ಗೊತ್ತಾ!
ಮನೋಜ್ ಬಾಜಪೇಯಿ ಬಾಲಿವುಡ್ನ ಪ್ರತಿಭಾವಂತ ನಟ. ನಿತ್ಯ ಹತ್ತಾರು ಪಾತ್ರಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಒಂದು ಕಾಲದಲ್ಲಿ ಅವರು ಒಂದೇ ದಿನ ಮೂರು ಸಿನಿಮಾ ಅವಕಾಶ ಕಳೆದುಕೊಂಡಿದ್ದರಂತೆ. ಅಷ್ಟಕ್ಕೂ ಅವತ್ತು ಅಲ್ಲಿ ಏನಾಗಿತ್ತು?
ಮನೋಜ್ ಬಾಜಪೇಯಿ ಅಂದಾಕ್ಷಣ ಹಲವರ ತಲೆಯಲ್ಲಿ ಬರುವುದು ಫ್ಯಾಮಿಲಿ ಮ್ಯಾನ್ ವೆಬ್ ಸರಣಿ. ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಏಕಕಾಲಕ್ಕೆ ಅಸಾಧ್ಯ ಜಾಣ್ಮೆಯನ್ನೂ, ಉಡಾಳತನವನ್ನೂ, ಪೆದ್ದುತನವನ್ನೂ ತೋರಿಸಿ ಎಂಟರ್ಟೇನ್ಮೆಂಟ್ಗೆ ಒಂದಿಷ್ಟೂ ಮೋಸವಾಗದಂತೆ ಜೀವ ತುಂಬಿದವರು ಮನೋಜ್ ಬಾಜಪೇಯಿ. ಸಣಕಲು ದೇಹ, ವಿಚಿತ್ರ ಮಾನರಿಸಂ, ಡೈಲಾಗ್ ಡೆಲಿವರಿ ಸ್ಟೈಲ್, ಸಣ್ಣ ಮುಗ್ಧತೆ ತುಂಬಿದ ಈ ನಟನಿಗೆ ಇಂದು ಬೇಡ ಬೇಡ ಅಂದರೂ ಸಿನಿಮಾ ಅವಕಾಶದ ಮಹಾಪೂರವೇ ಹರಿದು ಬರುತ್ತಿದೆ. ಒಂದಲ್ಲ ಎರಡಲ್ಲ ನಾಲ್ಕು ನ್ಯಾಶನಲ್ ಅವಾರ್ಡ್ ಪಡೆದ ಮಹಾನ್ ಪ್ರತಿಭಾವಂತ, ಫಿಲಂಫೇರ್ ಸೇರಿದಂತೆ ಇತರ ಹತ್ತಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಆದರೆ ಈ ನಟ ಈ ಲೆವೆಲ್ಗೆ ಬರಲು ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದು ಕೇವಲ ಅವರಿಗೊಬ್ಬರಿಗೇ ಗೊತ್ತಿರುವ ಸತ್ಯ. ಸಂದರ್ಶಕ ಶೇಖರ್ ಸುಮನ್ ಜೊತೆಗಿನ ಸಂದರ್ಶನದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ಮನೋಜ್ ಬಾಜಪೇಯಿ, ಬ್ಯಾಂಡಿಟ್ ಕ್ವೀನ್ ಸಿನಿಮಾದ ನಂತರವೂ ತನಗೆ ಚಿತ್ರರಂಗದಲ್ಲಿ ಅವಕಾಶ ಕಂಡುಕೊಳ್ಳಲು ತುಂಬಾ ಕಷ್ಟವಾಗಿತ್ತು ಎಂದು ತನ್ನ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮನೋಜ್ ಬಾಜಪೇಯಿ ಅವರು ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಅತ್ಯಂತ ನೋವಿನ ದಿನಗಳವು. ಆಗ ಅವರು ಒಂದೇ ದಿನದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದರು. ಈ ಅನುಭವವು ತನ್ನ ಆತ್ಮವಿಶ್ವಾಸ ಮತ್ತು ಧೈರ್ಯ ಎರಡನ್ನೂ ಪರೀಕ್ಷಿಸಿತು ಅಂತ ಆ ದಿನಗಳನ್ನು ನೆನೆಸಿಕೊಂಡು ಭಾವುಕರಾಗುತ್ತಾರೆ ಮನೋಜ್. ಆಗ ಅವರು ಒಂದೇ ಸಮಯದಲ್ಲಿ ಹಲವು ಪ್ರಾಜೆಕ್ಟ್ಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅದರಲ್ಲಿ ಒಂದು ದೂರದರ್ಶನ ಧಾರಾವಾಹಿಯ ಮುಖ್ಯ ಪಾತ್ರವಾಗಿತ್ತು, ಇನ್ನೊಂದು ಕಾರ್ಪೊರೇಟ್ ಚಿತ್ರದ ಮುಖ್ಯ ಪಾತ್ರವಾಗಿತ್ತು ಮತ್ತು ಮೂರನೆಯದು ಅವರು ಎರಡನೇ ಮುಖ್ಯ ಪಾತ್ರದಲ್ಲಿ ನಟಿಸಬೇಕಾಗಿದ್ದ ಧಾರಾವಾಹಿಯಾಗಿತ್ತು.
ಅವರು ಎಂದಿನಂತೆ ಮೊದಲ ಪ್ರಾಜೆಕ್ಟ್ನ ಶೂಟಿಂಗ್ಗೆ ಹೋದರು, ಆದರೆ ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಮೊದಲ ಸೀನ್ನ ಶೂಟಿಂಗ್ ನಂತರ, ಸಹಾಯಕ ನಿರ್ದೇಶಕರು ಮತ್ತು ನಿರ್ದೇಶಕರು ಕೋಣೆಯೊಂದರ ಒಳಗೆ ಹೋದರು. ಸ್ವಲ್ಪ ಸಮಯದ ನಂತರ ಸಹಾಯಕ ನಿರ್ದೇಶಕರು ಮನೋಜ್ ಅವರನ್ನು ಪಕ್ಕಕ್ಕೆ ಕರೆದು ಕಾಸ್ಟ್ಯೂಮ್ ತೆಗೆಯಲು ಹೇಳಿದರು. ಅವರು ಅಂದುಕೊಂಡ ಹಾಗೆ ಸೀನ್ ಬರುತ್ತಿಲ್ಲ ಅಂತ ಹೇಳಿ ಅವರನ್ನು ಮನೆಗೆ ಕಳಿಸಿದರು.
ಆ ಶೂಟಿಂಗ್ ಜಾಗದಿಂದ ಹೊರಡುವಾಗ ತಮ್ಮ ಜೊತೆ ನಟಿಸುವವರೆಲ್ಲರೂ ಹೊರಗಡೆ ನಿಂತು ಇವರು ಹೋಗುವುದನ್ನೇ ನೋಡುತ್ತಿರುವುದು ಕಣ್ಣಿಗೆ ಬಿತ್ತು. ಆ ಕ್ಷಣ ಅವರಿಗೆ ತುಂಬಾ ಅವಮಾನಕರ ಮತ್ತು ಮನಸ್ಸಿಗೆ ತೀವ್ರ ಆಘಾತ ನೀಡುವಂತಿತ್ತು, ಒತ್ತಿ ಬರುತ್ತಿದ್ದ ಅಳುವನ್ನು ತಡೆದುಕೊಂಡು ಮನೆಯ ದಾರಿ ಹಿಡಿದರು. 'ನಾನು ಹೊರಡುವಾಗ ನನ್ನ ಜೊತೆ ನಟಿಸುವವರೆಲ್ಲರೂ ಹೊರಗಡೆ ಇದ್ದರು. ಅವರ ಕಣ್ಣೆದುರಲ್ಲೇ ಅಲ್ಲಿಂದ ಹೊರಬಂದಿದ್ದು ಅದು ತುಂಬಾ ಬೇಸರ ತರಿಸಿತು. ಬಹಳ ಅವಮಾನವಾದಂತೆ ಅನಿಸಿತು. ಆದರೆ ನಾನು ಅಳಲಿಲ್ಲ' ಎನ್ನುತ್ತ ಆ ದಿನಗಳನ್ನು ನೆನಪಿಸಿಕೊಳ್ತಾರೆ ಮನೋಜ್.
ತಕ್ಷಣವೇ ತಾನು ಕೆಲಸ ಮಾಡುತ್ತಿದ್ದ ಕಾರ್ಪೊರೇಟ್ ಚಿತ್ರದ ಶೂಟಿಂಗ್ ಜಾಗಕ್ಕೆ ಬರುತ್ತಾರೆ. ಅಲ್ಲಿ ಇನ್ನೊಂದು ಆಘಾತ. ಅವರ ಜಾಗಕ್ಕೆ ಬೇರೆ ನಟನನ್ನು ಹಾಕಿಕೊಳ್ಳಲಾಗಿತ್ತು. ನೋವು ನುಂಗಿ ಅಲ್ಲಿಂದ ಹೊರಬಂದು ತನ್ನ ಮೂರನೇ ಪ್ರಾಜೆಕ್ಟ್ ತಂಡಕ್ಕೆ ಕರೆ ಮಾಡಿದರು. ಅವರು ಶೂಟಿಂಗ್ ಶೆಡ್ಯೂಲ್ ಬಗ್ಗೆ ಕೇಳಿದಾಗ ಆ ಪ್ರಾಜೆಕ್ಟ್ನಿಂದ ಅವರನ್ನು ಕೈ ಬಿಡಲಾಗಿದೆ ಅನ್ನುವುದು ಗೊತ್ತಾಯ್ತು.
ಹೀಗೆ ಒಂದೇ ದಿನದಲ್ಲಿ ಯಾವುದೇ ಮುನ್ಸೂಚನೆಯಾಗಲೀ, ನಂಬುವಂಥಾ ಕಾರಣಗಳಾಗಲೀ ಇಲ್ಲದೆ ಮೂರೂ ಪಾತ್ರಗಳು ಅವರ ಕೈಯಿಂದ ಜಾರಿಹೋದವು. ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮನೋಜ್ ಬೆಳೆಯುತ್ತ ಹೋದರು.
1999 ರಲ್ಲಿ ಸತ್ಯ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು, ನಂತರ 2004 ರಲ್ಲಿ ಪಿಂಜರ್ ಚಿತ್ರಕ್ಕಾಗಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆದರು. ಆನಂತರ 2021 ರಲ್ಲಿ ಭೋಸ್ಲೆ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ತೀರಾ ಇತ್ತೀಚೆಗೆ 2024 ರಲ್ಲಿ ಗುಲ್ಮೊಹರ್ ಚಿತ್ರಕ್ಕಾಗಿ ಸ್ಪೆಷಲ್ ಮೆನ್ಶನ್ ಗೌರವವನ್ನು ಪಡೆದರು. ಕಳೆದವಾರ ಅವರ ನಟನೆಯ 'ಗವರ್ನರ್' ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ.
- ಭವಾನಿ ಭಟ್














Click it and Unblock the Notifications