ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಶರತ್ ರಾಮಣ್ಣ ರಾಜಕೀಯ ನಂಟು ಬಹಿರಂಗ!
ಬೆಂಗಳೂರು, ಮೇ. 11: ಪಿಎಸ್ಐ ನೇಮಕ ಸಂಬಂಧ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಒಎಂಅರ್ ಉತ್ತರ ಪತ್ರಿಕೆಗಳನ್ನು ರವಾನಿಸಲಾಗಿದೆ. ಇನ್ನೂ ಹಲವು ದಾಖಲೆಗಳ ಅನ್ವೇಷಣೆ ಬಳಿಕ ಬರಲಿದ್ದು, ಆ ಬಳಿಕ ಸರಣಿ ಬಂಧನವಾಗಲಿದೆ ಎಂದ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಆಪ್ತ ಶ್ರೀನಿವಾಸ್ ಸೇರಿದಂತೆ ಹಲವು ಸಿಬ್ಬಂದಿ ಬಂಧನ ಖಚಿತ ಪಡಿಸಿದ ಸಿಐಡಿ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ಮಾಹಿತಿಯಿದು.
ಪಿಎಸ್ಐ ನೇಮಕಾತಿ ಅಕ್ರಮ: ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಆಪ್ತ ಸೇರಿ ಅರು ಮಂದಿ ಬಂಧನ
ಪಿಎಸ್ಐ ನೇಮಕಾತಿ ಅಕ್ರಮ ನಾನಾ ರೀತಿಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಲಾಗಿದೆ. ಇದರ ಜತೆಗೆ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆ ಬರೆದು ಉತ್ತೀರ್ಣ ರಾಗಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ನೇಮಕಾತಿ ವಿಭಾಗದ ಸಿಬ್ಬಂದಿ ಜತೆ ಡೀಲ್ ಕುದುರಿಸಿ ಸ್ಟ್ರಾಂಗ್ ರೂಮ್ ನಲ್ಲಿದ್ದ ಒಎಂಆರ್ ಶೀಟ್ ಗಳನ್ನು ಪಡೆದು ತಿದ್ದುಪಡಿ ಮಾಡಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ: ಕೆಎಸ್ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ಬಂಧನ
ನಾನಾ ಶೈಲಿಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ. ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಒಬ್ಬ ಅಭ್ಯರ್ಥಿ ಕೂಡ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತಾಂತ್ರಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಾಗಮಂಗಲದ ಶರತ್ ರಾಜಕೀಯ ಹಿನ್ನೆಲೆ ಬಯಲು
ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಾಗಮಲಂಗದ ಶರತ್ ಹಲವು ರಾಜಕಾರಣಿಗಳ ಪರಮಾಪ್ತನಾಗಿ ಗುರುತಿಸಿಕೊಂಡಿವ ಸಂಗತಿ ಬಯಲಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶರತ್ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ. ಮಿಗಿಲಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತನಾಗಿ ಗುರುತಿಸಿಕೊಂಡು ತಾಲೂಕಿನಲ್ಲಿ ಪರಿಚಯವಾಗಿದ್ದ. ಇತ್ತೀಚೆಗೆ ಸಂಸದೆ ಸುಮಲತಾ ಅವರೊಂದಿಗೂ ಗುರುತಿಸಿಕೊಂಡಿದ್ದು, ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳು ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಶ್ರವಣಬೆಳಗೊಳದ ಪಿಎಸ್ಐ ಅಭ್ಯರ್ಥಿ
ಬಂಧಿತ ಶರತ್ ರಾಮಣ್ಣ ಶ್ರವಣಬೆಳಗೊಳದ ಪಿಎಸ್ಐ ಅಭ್ಯರ್ಥಿ ಪರವಾಗಿ ಹಣ ಪಡೆದು ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಶರತ್ ನನ್ನು ವಿಚಾರಣೆಗೆ ಒಳಪಡಿಸಿದ್ದು, ಈತನಿಗೆ ಪೊಲೀಸ್ ನೇಮಕಾತಿ ವಿಭಾಗದ ಲಿಂಕ್ ಸಿಕ್ಕಿರುವ ಜಾಡು ಪತ್ತೆ ಮಾಡುತ್ತಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಮಟ್ಟದ ಅಕ್ರಮ ಎಸಗಿದ್ದು, ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ದಾಖಲೆಗಳ ಸಂಗ್ರಹ ಕಾರ್ಯದಲ್ಲಿ ಸಿಐಡಿ ಅಧಿಕಾರಿಗಳು ತಲ್ಲೀನರಾಗಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ
ಪಿಎಸ್ಐ ನೇಮಕಾತಿ ಅಕ್ರಮ ಮುಂದಿಟ್ಟುಕೊಂಡು ಕಾಂಗ್ರೆಸ್, ಆಡಳಿತ ರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಯುತ್ತಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಆ ಬಳಿಕ ಹಾಲಿ ಸಚಿವ ಅಶ್ವತ್ಥ್ ನಾರಾಯಣ ಅವರ ಸಹೋದರನ ಹೆಸರು ತಳಕು ಹಾಕಿಕೊಂಡಿತ್ತು.
ಜಿಲ್ಲಾ ಯುವ ಕಾಂಗ್ರೆಸ್ ನಾಯಕ
ಆದರೆ, ಕಲಬುರಗಿಯ ಅಫಜಲಪುರ ತಾಲೂಕಿನ ಆರ್.ಡಿ. ಪಾಟೀಲ್ ಜಿಲ್ಲಾ ಯುವ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿದ್ದು, ಅತ ಸಹ ಬಂಧನಕ್ಕೆ ಒಳಗಾಗಿದ್ದಾನೆ. ಇದಲ್ಲದೇ , ಇದೀಗ ನಾಗಮಂಗಲ ತಾಲೂಕಿನ ಯುವ ಕಾಂಗ್ರೆಸ್ ಮುಖಂಡ ಶರತ್ ರಾಮಣ್ಣ ಬಂಧನಕ್ಕೆ ಒಳಗಾಗಿದ್ದು, ಇದನ್ನು ಅಸ್ತ್ರವಾಗಿ ಬಳಿಸಿಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತ್ಯಾರೋಪ ಮಾಡಿದೆ.