ಪಿಎಸ್ಐ ಅಕ್ರಮ: 'ನ್ಯಾಯ ಸಿಗದಿದ್ದರೆ ನಮ್ಮಪ್ಪನಂತೆ ಹೊಲದಲ್ಲಿ ಕೆಲಸ ಮಾಡುವುದೇ ವಾಸಿ'
ಬೆಂಗಳೂರು, ಮೇ. 08: ಈ ಪಿಎಸ್ಐ ಹಗರಣ ನೋಡಿದರೆ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಅನ್ನೋ ತರ ಆಗಿದೆ. ಇದೆಲ್ಲವೂ ನೋಡುತ್ತಿದ್ದರೆ ನಮ್ಮಪ್ಪನ ತರ ಹೊಲದಲ್ಲಿ ಕೆಲಸ ಮಾಡೋದು ವಾಸಿ ಅಂತ ಅನ್ನಿಸಿಬಿಟ್ಟಿದೆ. ಕೊನೆಯ ಆಸೆ ನ್ಯಾಯಾಲಯದ ಮೇಲೆ ಇಟ್ಟುಕೊಂಡಿದ್ದೇನೆ. ಜನ ಪ್ರತಿನಿಧಿಗಳು ಜನರನ್ನು ಮೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಬಹುದು. ನ್ಯಾಯಾಲಯ ನ್ಯಾಯ ನೋಡಿ ತೀರ್ಪು ಕೊಡುತ್ತದೆ. ನ್ಯಾಯ ಸಿಗುವ ನಂಬಿಕೆ ಇಟ್ಟುಕೊಂಡಿದ್ದೇನೆ!
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಬೆಳಗಾವಿ ಮೂಲದ ಪಿಎಸ್ಐ ಅಭ್ಯರ್ಥಿಯ ಮನದಾಳದ ಮಾತು. ನನ್ನ ಹೆಸರು ದಯವಿಟ್ಟು ಬರೆಯಬೇಡಿ ಎಂಬ ಷರತ್ತು ವಿಧಿಸಿ ಮಾತನಾಡಿದ ಪಿಎಸ್ಐ ಅಭ್ಯರ್ಥಿ ಕೆಲವು ಮಹತ್ವದ ವಿಚಾರ ಹಂಚಿಕೊಂಡರು.
ಅಧಿಕಾರಿಗಳು ವೆರಿಗುಡ್ ಎಂದಿದ್ದರು
"ನಾನು 2017 ರಲ್ಲಿ ಪದವಿ ಮುಗಿಸಿದ ಬಳಿಕ 2019 ರಲ್ಲಿ ನಡೆದ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲಿ ಅಯ್ಕೆಯಾಗಿದ್ದೆ. ಸಂದರ್ಶನ ಹಂತಕ್ಕೆ ತಲುಪಿದ್ದೆ. ನಾನು ಪದವಿ ಪಾಸದ ವರ್ಷವೇ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದು, ಸಂದರ್ಶನದ ಅಂಕದಲ್ಲಿ ಹುದ್ದೆ ಕೈ ತಪ್ಪಿತ್ತು. ನಾನು ಈ ಹಿಂದೆ ಬರೆದಿದ್ದ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ನೋಡಿ ಸಿಐಡಿ ಅಧಿಕಾರಿಗಳು ವೆರಿಗುಡ್ ಅಂತ ಕಳಿಸಿದರು. ಆದ್ರೆ ಏನು ಮಾಡೋದು! ನೆನಪಿಸಿಕೊಂಡರೆ ಬೇಜಾರಾಗುತ್ತದೆ. ಪಿಎಸ್ಐ ಆಯ್ಕೆಯಾದ ಬಳಿಕ ಊರಿನವರು ಸನ್ಮಾನ ಮಾಡಿ ಸಂಭ್ರಮಿಸಿದ್ದರು. ಅವರ ಮುಂದೆ ಓಡಾಡಲು ಮನಸಿಗೆ ಬೇಸರ ಎನಿಸುತ್ತದೆ. ಅಪ್ಪನಂತೆ ಹೊಲದಲ್ಲಿ ಕೆಲಸ ಮಾಡಿ ಜೀವನ ಮಾಡೋದೇ ಒಳ್ಳೆಯದು ಎಂದೆನಿಸುತ್ತದೆ,'' ಎಂದು ಬೆಳಗಾವಿ ಮೂಲದ ಪಿಎಸ್ಐ ಅಭ್ಯರ್ಥಿ ತನ್ನ ನೋವು ತೋಡಿಕೊಂಡಿದ್ದಾರೆ.

"ನನ್ನಪ್ಪ ಅಪ್ಪ ಅಜ್ಜಿ ಕಡೆಯವರಿಂದ ಹೊಲ ತೆಗೆದುಕೊಂಡು ಗೇಣಿಗೆ ಮಾಡ್ತೇವೆ. ಏನಾದರೂ ಸಾಧಿಸಲೇಬೇಕೆಂಬ ಹಠಕ್ಕೆ ಬಿದ್ದು ಪದವಿ ಮುಗಿಸಿದ ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆ ಕಡೆ ಗಮನಕೊಟ್ಟೆ. ಬೆಳಗ್ಗೆ 6 ಗಂಟೆಗೆ ಎದ್ದು ಕೂತರೆ ರಾತ್ರಿ 11 ವರೆಗೂ ಓದುತ್ತಿದ್ದೆ. 2017 ರಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಅಯ್ಕೆಯಾಗಿದ್ದೆ. ಈ ಸಲ ತಪ್ಪಬಾರದು ಎಂದು ಕಠಿಣ ಶ್ರಮ ಆಕಿ ಉತ್ತೀರ್ಣ ಆದೆ. ಇದು ನೋಡಿದ್ರೆ ಯಾರೋ ಮಾಡಿದ ತಪ್ಪಿಗೆ ನಾವು ಬಲಿ ಪಶುಗಳಾದೆವು. ನೂರು ಅಪರಾಧಿಗಳು ತಪ್ಪಿಸಿಕೊಂಡ್ರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನ್ಯಾಯ ವ್ಯವಸ್ಥೆಯ ಉದ್ದೇಶ. ಇಲ್ಲಿ ನಮಗೆ ಅನ್ಯಾಯ ಆಗಲ್ಲ ಎಂದು ನ್ಯಾಯ ವ್ಯವಸ್ಥೆಯನ್ನು ನಂಬಿದ್ದೇವೆ. ಅರಿಸ್ಟಾಟಲ್ ಹೇಳಿದ ಹಾಗೆ ಮಾನವ ಸಂಘ ಜೀವಿ. ಏನೇ ಆದ್ರೂ ಸಮಾಜದಲ್ಲಿ ಬದುಕಲೇಬೇಕು. ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಇಲ್ಲ ಕಾಡಲ್ಲಿ ಬದಕಲು ಸಾಧ್ಯವೇ ? ನಮ್ಮ ಕಷ್ಟ ಹೇಳಿ ಕೊಂಡು ತೋರಿಸಿಕೊಳ್ಳುವುದಲ್ಲಿ ಪ್ರಯೋಜನವಿಲ್ಲ,'' ಎಂದು ರಂಗಪ್ಪ ( ಹೆಸರು ಬದಲಿಸಿದೆ) ಬೇಸರ ತೋಡಿಕೊಂಡರು.

ನನಗೆ ಗೃಹ ಸಚಿವರ ಮೇಲೂ ಬೇಜಾರಿಲ್ಲ. ಪರೀಕ್ಷೆ ರದ್ದು ಪಡಿಸಲು ಹೋರಾಟ ಮಾಡಿದ ಅಭ್ಯರ್ಥಿಗಳ ಮೇಲೂ ಬೇಸರವಿಲ್ಲ. ನಮ್ಮ ವ್ಯವಸ್ಥೆ ಮೇಲೆ ಬೇಜಾರಾಗುತ್ತಿದೆ. ನಂಬಿಕೆ ಇಟ್ಟು ಪರೀಕ್ಷೆ ಬರೆಯುತ್ತೇವೆ. ಅದರ ಮೇಲೆ ನಂಬಿಕೆ ಕಳೆದು ಹೋದರೆ. ಕೆಲವರಿಗೆ ಒಂದು ಸೌಲತ್ತು ಕೊಟ್ಟು, ಇನ್ನೂ ಕೆಲವರಿಗೆ ಏನೂ ಕೊಡದೇ ಪರೀಕ್ಷೆ ಬರೆಸುವುದು ಭಾರೀ ಅನ್ಯಾಯ. ತಪ್ಪು ಮಾಡಿದವರು ಯಾರೂ ತಲೆ ಮರೆಸಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರ ಪೊಲೀಸ್ ಮಹಾ ನಿರ್ದೇಶಕರೂ ಹೇಳಿದ್ದಾರೆ. ತಪ್ಪಿತಸ್ಥರು ಸಿಕ್ಕಿಬಿದ್ದ ನಂತರ ಉಳಿದವರನ್ನು ಪರಿಗಣಿಸುವುದಲ್ಲಿ ಸರ್ಕಾರಕ್ಕೆ ಏನು ಸಮಸ್ಯೆ ಅಂತ ಅರ್ಥವಾಗುತ್ತಿಲ್ಲ. ಇದೆಲ್ಲವೂ ನೋಡ್ತಿದ್ರೆ ಹುಚ್ಚನ ಮದುವೆಯಲ್ಲಿ ಉಂಡವನು ಜಾಣ ಎಂದು ಅನಿಸುತ್ತಿದೆ.

ರಾಜಕಾರಣಿಗಳು ಜನರನ್ನು ಮೆಚ್ಚಿಸಬೇಕು. ಅವರು ಯಾವತ್ತೂ ಹೆಚ್ಚು ಮಂದಿ ಇರುವರ ಮಾತಿಗೆ ಬೆಲೆ ಕೊಡುತ್ತಾರೆ. ನಾವು ನ್ಯಾಯಾಲಯದ ಮೇಲೆ ಭಾರ ಹಾಕಿದ್ದೀವಿ. ನ್ಯಾಯ ದೇವತೆಗೆ ಕಣ್ಣು ಕಟ್ಟಿರುತ್ತಾರೆ. ಯಾಕೆಂದರೆ ಅಲ್ಲಿ ನ್ಯಾಯ ಬಿಟ್ಟರೆ ಏನೂ ನೋಡಬಾರದು ಎಂಬುದು ನ್ಯಾಯ ತತ್ವ. ನಮಗೆ ನ್ಯಾಯ ಸಿಗುವ ನಂಬಿಕೆ ಇದೆ. ಒಂದು ವೇಳೆ ಸಿಗದೇ ಹೋಗದಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜ್ಞಾನವೊಂದಿದ್ದರೆ ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ ಗಳಿಸಬಹುದು. ಸಂತೋಷದಿಂದ ಬದುಕುವುದೇ ಜೀವನದ ತತ್ವ. ಅದರಕ್ಕೆ ನಾನು ಒತ್ತುಕೊಡುತ್ತೇನೆ ಎಂದು ಪಿಎಸ್ಐ ಅಭ್ಯರ್ಥಿ ತನ್ನ ಪಿಎಸ್ಐ ಪರೀಕ್ಷೆ ಯಶೋಗಾಥೆಯನ್ನು ವಿವರಿಸಿದರು.












Click it and Unblock the Notifications