ಮಣ್ಣಲ್ಲಿ ಮಣ್ಣಾದ ವೀರ ಮಲ್ಲಿಕಾರ್ಜುನ ಬಂಡೆ
ಗುಲ್ಬರ್ಗ, ಜ.16 : ಕುಟುಂಬದವರ ಆಕ್ರಂದನ, ಸಾರ್ವಜನಿಕರ ಅಂತಿಮ ನಮನ, ಪೊಲೀಸ್ ಇಲಾಖೆಯವರ ಅಂತಿಮ ಗೌರವದ ನಡುವೆ ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಬಳಿಯ ಜಮೀನಿನಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ ನಡೆಯಿತು. ನೂರಾರು ಜನರು ಅಂತ್ಯಕ್ರಿಯೆಗೆ ಸಾಕ್ಷಿಯಾಗಿದ್ದರು. ಬಂಡೆ ಅಮರ ರಹೇ ಎಂಬ ಕೂಗು ಮುಗಿಲು ಮುಟ್ಟಿತ್ತು.
ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಬಂಡೆ ಅವರ ಮೃತದೇಹವನ್ನು ಗುಲ್ಬರ್ಗದ ಡಿಎಆರ್ ಮೈದಾನದಿಂದ ಖಜೂರಿ ಗ್ರಾಮಕ್ಕೆ ತರಲಾಯಿತು. ಬುಧವಾರದಿಂದಲೇ ಬಂಡೆ ಮೃತದೇಹದ ಅಂತಿಮ ದರ್ಶನ ಪಡೆಯಲು ಖಜೂರಿ ಗ್ರಾಮದಲ್ಲಿ ಸಂಬಂಧಿಕರು, ಗ್ರಾಮಸ್ಥರು ಕಾದು ಕುಳಿತಿದ್ದರು. ಮೃತದೇಹ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ದುಖಃದ ಕಟ್ಟೆ ಒಡೆಯಿತು.
ಮಧ್ಯಾಹ್ನ 3 ಗಂಟೆವರೆಗೆ ಮಲ್ಲಿಕಾರ್ಜುನ ಬಂಡೆ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಇಡಲಾಗಿತ್ತು. ನೂರಾರು ಗ್ರಾಮಸ್ಥರು, ಬಂಡೆ ಸಂಬಂಧಿಕರು ಮೃತದೇಹದ ಅಂತಿಮ ದರ್ಶನ ಪಡೆದರು. ನಂತರ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ ನಡೆಯವ ಅವರ ಜಮೀನಿಗೆ ತೆಗೆದುಕೊಂಡು ಹೋಗಲಾಯಿತು. [ಮಲ್ಲಿಕಾರ್ಜುನ ಬಂಡೆ ಕೊಂದ ಪಾತಕಿ ಯಾರು?]
ಖಜೂರಿ ಗ್ರಾಮದ ಸಮೀಪದಲ್ಲಿರುವ ಮಲ್ಲಿಕಾರ್ಜುನ ಬಂಡೆ ಅವರ ಜಮೀನಿನಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು 4.15ರ ಸುಮಾರಿಗೆ ನಡೆಸಲಾಯಿತು. ಪಂಚಮಸಾಲಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬಂಡೆ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪಾತಕಿಯನ್ನು ಹಿಡಿಯಲು ಹೋದ ಮಲ್ಲಿಕಾರ್ಜುನ ಬಂಡೆ ಮಣ್ಣಲ್ಲಿ ಮಣ್ಣಾದರು.
ಗೃಹ ಸಚಿವರ ಕಾರಿಗೆ ಕಲ್ಲು
ಖಜೂರಿ ಗ್ರಾಮಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ಖಮುರುಲ್ ಇಸ್ಲಾಂ, ಐಜಿ ವಜೀರ್ ಅಹಮದ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಮಲ್ಲಿಕಾರ್ಜುನ ಬಂಡೆಗೆ ಅಂತಿಮ ನಮನ ಸಲ್ಲಿಸಿದರು. ಗೃಹ ಸಚಿವರು ಮರಳುವ ವೇಳೆಗೆ ಬಂಡೆ ಅವರ ಸಾವಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಗೃಹ ಸಚಿವರ ಕಾರಿಗೆ ಕಲ್ಲು ತೂರಾಟ ನಡೆಸಿದರು.
50 ಲಕ್ಷ ಪರಿಹಾರ, ನಿವೃತ್ತಿ ದಿನಾಂಕದ ತನಕ ವೇತನ
ಮಲ್ಲಿಕಾರ್ಜುನ ಬಂಡೆ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್ ಸರ್ಕಾರದ ವತಿಯಿಂದ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲಾಗುವುದು ಎಂದರು, ನಂತರ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ 50 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಮಲ್ಲಿಕಾರ್ಜುನ ಬಂಡೆ ನಿವೃತ್ತಿ ದಿನಾಂಕದವರೆಗೂ ಪ್ರತಿ ತಿಂಗಳು ಅವರ ಕುಟುಂಬಕ್ಕೆ ವೇತನ ಪಾವತಿ ಮಾಡಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಪತಿ ಸಾವಿಗೆ ಐಜಿ ಅವರು ಕಾರಣ
ನನ್ನ ಪತಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿಗೆ ಐಜಿ ವಜೀರ್ ಅಹಮದ್ ಕಾರಣ ಎಂದು ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಆರೋಪಿಸಿದ್ದಾರೆ. "ಶಾರ್ಪ್ ಶೂಟರ್ ಮುನ್ನಾನನ್ನು ಸೆರೆಹಿಡಿಯುವಾಗ ಗುಂಡು ಹಾರಿಸಬೇಡಿ. ಅವರನ್ನು ಜೀವಂತವಾಗಿ ಸೆರೆ ಹಿಡಿಯಿರಿ" ಎಂದು ವಜೀರ್ ಆದೇಶಿಸಿದ್ದರು. ಆದ್ದರಿಂದ ಮುನ್ನಾನನ್ನು ಹಿಡಿಯಲು ಹೋದಾಗ ನನ್ನ ಪತಿಗೆ ಗುಂಡು ತಗುಲಿದೆ. ಇದಕ್ಕೆ ಐಜಿ ಅವರೇ ಹೊಣೆ ಎಂದು ಮಲ್ಲಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗುಲ್ಬರ್ಗ ನಗರ ಸ್ತಬ್ಧ
ಬುಧವಾರವೇ ನಗರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಿಜೆಪಿ ಗುರುವಾರ ಗುಲ್ಬರ್ಗ ಬಂದ್ ಗೆ ಕರೆ ನೀಡಿತ್ತು. ಆದ್ದರಿಂದ ಗುಲ್ಬರ್ಗ ನಗರದಲ್ಲಿ ಜನಸಂಚಾರ ಕಡಿಮೆ ಇತ್ತು. ಬೆಳ್ಳಂಬೆಳಗ್ಗೆ ನೂರಾರು ಜನರು ಡಿಎಆರ್ ಮೈದಾನಕ್ಕೆ ತೆರಳಿ ಮಲ್ಲಿಕಾರ್ಜುನ ಬಂಡೆ ಮೃತದೇಹದ ಅಂತಿಮ ದರ್ಶನ ಪಡೆದರು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಶಾಸಕರಿಗೆ ಘೇರಾವ್
ಅಳಂದ ಶಾಸಕ ಬಿ.ಆರ್ ಪಾಟೀಲ್ ಮಲ್ಲಿಕಾರ್ಜುನ ಬಂಡೆ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಆಗಮಿಸಿ ಜನರ ಆಕ್ರೋಶಕ್ಕೆ ಗುರಿಯಾದರು. ಬುಧವಾರದಿಂದ ಖಜೂರಿ ಗ್ರಾಮಕ್ಕೆ ಆಗಮಿಸಿಸದ ಶಾಸರು ಗುರುವಾರ ಮಧ್ಯಾಹ್ನ ಆಗಮಿಸುತ್ತಿದ್ದಂತೆ ಜನರು ಅವರಿಗೆ ಘೇರಾವ್ ಹಾಕಿ, ಧಿಕ್ಕಾರ ಕೂಗಿದರು. ಜನರ ಆಕ್ರೋಶದಿಂದಾಗಿ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿ ಪಾಟೀಲ್ ಅಲ್ಲಿಂದ ನಿರ್ಗಮಿಸಿದರು.
ಪೊಲೀಸರಿಂದ ಅಂತಿಮ ನಮನ
ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯಸಂಸ್ಕಾರ ಆಳಂದ ತಾಲೂಕಿನ ಖಜೂರಿನ ಅವರ ಜಮೀನಿನಲ್ಲಿ ನೇರವೇರಿತು. ಮೃತದೇಹಕ್ಕೆ ಪೊಲೀಸ್ ಇಲಾಖೆಯವರು ಅಂತಿಮ ನಮನ ಸಲ್ಲಿಸಿದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಲ್ಲಿಕಾರ್ಜುನ ಬಂಡೆ ನಿಧನದ ಹಿನ್ನಲೆಯಲ್ಲಿ ಒಂದು ದಿನದ ಶೋಕಾಚರಣೆ ಆಚರಿಸಲಾಗುತ್ತಿದೆ.