PSI 545 Good News: ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಸಿಂಧುತ್ವ: ಜಿ. ಪರಮೇಶ್ವರ್ ಹೇಳಿದ್ದೇನು
ಕರ್ನಾಟಕದಲ್ಲಿ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಸಿಂಧುತ್ವದ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈಚೆಗೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿನ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ತಾತ್ಕಾಲಿಕ ಪಟ್ಟಿಯನ್ನು ರಾಜ್ಯ ಗೃಹ ಇಲಾಖೆಯು ಪ್ರಕಟಿಸಿತ್ತು. ಆದರೆ, ಈ ನಡುವೆ ಅಂತಿಮ ಪಟ್ಟಿಗೂ ಮುನ್ನವೇ ನೇಮಕಾತಿ ಆದೇಶ ನೀಡಲು ಗಡುವು ವಿಚಾರದ ಬಗ್ಗೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
545 ಪಿಎಸ್ಐ ಹುದ್ದೆಗೆ ನೇಮಕಾತಿ ಆದೇಶ ನೀಡಲು ಗಡುವು ವಿಚಾರದ ಬಗ್ಗೆ ಅವರು ಮಹತ್ವದ ಸುಳಿವೊಂದನ್ನು ಕೊಟ್ಟಿದ್ದಾರೆ. ಅಂತಿಮ ಪಟ್ಟಿಗೂ ಮುನ್ನವೇ ನೇಮಕಾತಿ ಆದೇಶ ನೀಡಲು ಗಡುವು ನೀಡುವ ಕುರಿತು ಬುಧವಾರ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. 545 ಪಿಎಸ್ಐ ಹುದ್ದೆಗೆ ನೇಮಕಾತಿ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳಿಗೆ (ಡಿಸಿಗಳಿಗೆ) ಕಳಿಸಿದ್ದಾರೆ. ಸಿಂಧುತ್ವ ವೆರಿಫಿಕೇಷನ್ ಮಾಡಿ ಆರ್ಡರ್ ಕೊಡ್ತಾರೆ ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಹ ಈಗಾಗಲೇ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೀವು ಆರ್ಡರ್ ಕಾಪಿ ಕೊಟ್ಟಿರಿ ಅಂತ ಸೂಚನೆ ಕೊಟ್ಟಿದ್ದೀನಿ. ಆ ನಂತರ ಸಿಂಧುತ್ವ ಪರಿಶೀಲನೆ ಏನಾದರೂ ತಪ್ಪಾದರೆ, ಮುಂದಿನ ಹಂತದಲ್ಲಿ ಅದನ್ನು ಕ್ಯಾನ್ಸಲ್ ಮಾಡೋಣ ಎಂದು ಹೇಳಿದ್ದೇವೆ. ಸಿಂಧುತ್ವ ವೆರಿಫಿಕೇಶನ್ ಆಗುವ ತನಕ ಮಾಡೋದಿಲ್ಲ ಎಂದೂ ಜಿ. ಪರಮೇಶ್ವರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದಿತ್ತು. ಆದರೆ, ಈ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವ ವಿಚಾರವು ದೇಶದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇದಾದ ನಂತರ ಹೈಕೋರ್ಟ್ ಮಹತ್ವದ ಸೂಚನೆ ನೀಡಿತ್ತು. ಅದಾದ ಮೇಲೆ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು.
ಜೈಲಿನಲ್ಲಿ ಕೈದಿಗಳ ಪತ್ರಿಭಟನೆ ವಿಚಾರ: ಇನ್ನು ಕಲಬುರಗಿ ಜೈಲಿನಲ್ಲಿ ನಡೆಯುತ್ತಿರುವ ವಿಚಾರದ ಬಗ್ಗೆಯೂ ಜಿ. ಪರಮೇಶ್ವರ್ ಅವರು ಮಾಹಿತಿ ಕೊಟ್ಟಿದ್ದಾರೆ. ಕಲಬುರಗಿ ಜೈಲಿನಲ್ಲಿ ಅವ್ಯವಸ್ಥೆ ಇದೆ ಎಂದು ಆರೋಪಿಸಿ ಇಲ್ಲಿನ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲಿ ಏನು ಅವ್ಯವಸ್ಥೆ ಸೇರಿದೆ ಎಂದು ಡಿ.ಜಿ ಅವರಿಂದ ವಿವರಣೆ ಕೇಳಲಾಗಿದೆ. ಡಿ.ಜಿ ಅವರ ಬಳಿ ಮಾತನಾಡ್ತೀನಿ. ಯಾವ ಕಾರಣಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಅಂತ ಕೇಳ್ತಿನಿ. ನಾವು ಈಗಾಗಲೇ ಇಡೀ ಜೈಲಿನ ಬಗ್ಗೆ ರಿವ್ಯೂ ಮಾಡ್ಸಿದ್ದೀವಿ. ಕಲಬುರಗಿಯಲ್ಲಿ ಏನಾಗಿದೆ ಎಂದು ವಿಚಾರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಭೋವಿ ನಿಗಮದ ಅವ್ಯವಹಾರ ಕೇಸ್: ಭೋವಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತು ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ. ಈ ತನಿಖೆ ಇನ್ನೂ ಸಂಪೂರ್ಣವಾಗಿ ಮುಗಿಯದೆ ಇರುವುದರಿಂದ ಏನಾಗಿದೆ ಎನ್ನುವ ಮಾಹಿತಿಯನ್ನು ಈಗಲೇ ಹೇಳುವುದಕ್ಕೆ ಆಗಲ್ಲ. ನಿಮಗೆ ಏನು ಮಾಹಿತಿ (ಪತ್ರಕರ್ತರಿಗೆ) ಇದೆಯೋ ನನಗೂ ಅಷ್ಟೇ ಮಾಹಿತಿ ಇದೆ. ಸಿಐಡಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಮೂಲಕ ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.












Click it and Unblock the Notifications