ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಯಡಿಯೂರಪ್ಪ ಮನವಿ ಏನು?
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಯಡಿಯೂರಪ್ಪ ನಾಗರಿಕರಲ್ಲಿ ಒಂದು ಮನವಿ ಎಂದು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಪ್ರಚೋದನಾಕಾರಿ ಹೇಳಿಕೆಗಳಿಗೆ ಕಿವಿಗೊಡಬೇಡಿ ಶಾಂತಿ, ಸೌಹಾರ್ಹತೆ ಮತ್ತು ಪರಸ್ಪರ ಸಾಮರಸ್ಯಕ್ಕೆ ಹೆಸರಾದ ಕರ್ನಾಟಕ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿಯೋಣ ಎಂದು ಕರೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ 2019 ದೇಶದ ಯಾವುದೇ ಧರ್ಮಕ್ಕೆ ಸೇರಿದ ಭಾರತೀಯ ಪ್ರಜೆಯ ಹಕ್ಕು ಮತ್ತು ಸವಲತ್ತುಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಧಕ್ಕೆ ಉಂಟು ಮಾಡುವುದಿಲ್ಲ
ಭಾರತ ಸರ್ಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019 ದೇಶದ ಯಾವುದೇ ಧರ್ಮಕ್ಕೆ ಸೇರಿದ ಭಾರತೀಯ ಪ್ರಜೆಯ ಹಕ್ಕು ಮತ್ತು ಸವಲತ್ತುಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟು ಮಾಡುವುದಿಲ್ಲ ಎಂದು ಯಡಿಯೂರಪ್ಪ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ
ಈ ಕಾಯ್ದೆ ಜಾರಿ ವಿರುದ್ಧ ರಾಜ್ಯದ ಕೆಲವು ಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ನಾಗರಿಕರು ಯಾವುದೇ ಕಾರಣಕ್ಕೂ ದುರುದ್ದೇಶಪೂರಿತ ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ವಿನಂತಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹಕ್ಕುಗಳನ್ನು ಕಾಪಾಡಲು ಬದ್ಧವಾಗಿದೆ
ಸರ್ಕಾರವು ಎಲ್ಲಾ ಜಾತಿ, ಧರ್ಮ, ಪಂಥ ಅಥವ ಸಮುದಾಯಕ್ಕೆ ಸೇರಿದ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ಹಾಗೂ ಅವರ ಹಕ್ಕುಗಳನ್ನು ಕಾಪಾಡಲು ಬದ್ಧವಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕದ ಹಿರಿಮೆ ಎತ್ತಿ ಹಿಡಿಯೋಣ
ಯಾರೊಬ್ಬರು ಕೂಡ ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆಗಳಿಗೆ ಹಾಗೂ ಪ್ರೇರೇಪಿತ ವದಂತಿಗಳಿಗೆ ಕಿವಿಗೊಡದೆ ಶಾಂತಿ, ಸೌಹಾರ್ಹತೆ ಮತ್ತು ಪರಸ್ಪರ ಸಾಮರಸ್ಯಕ್ಕೆ ಹೆಸರಾದ ಕರ್ನಾಟಕ ರಾಜ್ಯದ ಹಿರಿಮೆಯನ್ನು ಎತ್ತಿಹಿಡಿಯೋಣ ಎಂದು ಕರೆ ನಿಡಿದ್ದಾರೆ.












Click it and Unblock the Notifications