ಬೆಂಗಳೂರು ಕಸಕ್ಕೆ ಮಾಗಡಿ ಗ್ರಾಮಸ್ಥರ ವಿರೋಧ
ರಾಮನಗರ, ಅ.30 : ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಣಯಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗುರುವಾರ ಉದ್ದೇಶಿತ ಸ್ಥಳದಲ್ಲಿ ಸರ್ವೆ ನಡೆಸಲು ಬಂದ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಗಡಿ ತಾಲೂಕಿನ ಗೊರೂರಿನ 45 ಎಕರೆ ಪ್ರದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ಇಂದು ತಹಶೀಲ್ದಾರ್ ಶಿವಕುಮಾರ್ ನೇತೃತ್ವದ ಅಧಿಕಾರಿಗಳು ಸರ್ವೆ ನಡೆಸಲು ತೆರಳಿದ್ದರು. [ಮಂಡೂರು: ಪ್ರಾಣ ಕೊಟ್ಟೇವು, ಕಸ ಹಾಕಲು ಬಿಡೆವು]

ಆದರೆ, ರೈತರು ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸಿದ್ದು, ಜಮೀನಿನಲ್ಲಿ ಮಲಗಿ ಗೊರೂರು ಗ್ರಾಮದಲ್ಲಿ ಕಸ ಸುರಿಯಬೇಡಿ ಎಂದು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದರು. ಪೊಲೀಸರ ಸಹಾಯ ಪಡೆದರೂ ಸರ್ವೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. [ಡಿಸೆಂಬರ್ ನಂತರ ಮಂಡೂರಲ್ಲಿ ಕಸ ಹಾಕಲ್ಲ]
ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸಮೂರ್ತಿ (ಜೆಡಿಎಸ್) ಮತ್ತು ಮಾಗಡಿ ಶಾಸಕ ಬಾಲಕೃಷ್ಣ (ಜೆಡಿಎಸ್) ಅವರು ಸಹ ಸ್ಥಳಕ್ಕೆ ಆಗಮಿಸಿದ್ದು ಗ್ರಾಮಸ್ಥರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಬಿಬಿಎಂಪಿ ಇಲ್ಲಿ ಕಸ ಸುರಿಯಬಾರದು ಎಂದು ಒತ್ತಾಯಿಸುತ್ತಿದ್ದಾರೆ. [ಬಿಬಿಎಂಪಿ ಮೇಯರ್ ಸಂದರ್ಶನ ಓದಿ]
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ ಅವರು, ಸರ್ಕಾರ ಗೊರೂರು ಗ್ರಾಮಸ್ಥರ ಜೊತೆ ಚರ್ಚೆ ನಡೆಸದೇ ಏಕಾಏಕಿ ಇಲ್ಲಿ ತಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಇಲ್ಲಿ ತಾಜ್ಯ ಸುರಿದರೆ ಇದು ಮತ್ತೊಂದು ಮಂಡೂರು ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಬಿಬಿಎಂಪಿ ರೈತರ ಜೊತೆ ಮಾತುಕತೆ ನಡೆಸಿ, ತಾಜ್ಯ ಘಟಕದಿಂದ ರೈತರ ಜಮೀನಿಗೆ ಮತ್ತು ಇಲ್ಲಿ ವಾಸಮಾಡುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರೆ, ಕಸ ಸುರಿಯಲು ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಡಿಸೆಂಬರ್ ಗಡುವು : ಈಗಾಗಲೇ ಸರ್ಕಾರ ಮತ್ತು ಬಿಬಿಎಂಪಿ ಡಿಸೆಂಬರ್ ನಂತರ ಮಂಡೂರಿನಲ್ಲಿ ಕಸ ಸುರಿಯವುದಿಲ್ಲ ಎಂದು ಅಲ್ಲಿನ ಗ್ರಾಮಸ್ಥರಿಗೆ ಭರವಸೆ ನೀಡಿದೆ. ಆದ್ದರಿಂದ ಹೊಸ ಸ್ಥಳಗಳ ಹುಡುಕಾಟದಲ್ಲಿದೆ. ಆದ್ದರಿಂದ ಮಾಗಡಿಯ ಗೊರೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸ್ಥಳ ಗುರುತಿಸಲಾಗಿತ್ತು. ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications