ರೈತರಿಗೆ ಶುಭಸುದ್ದಿ: ಕಲಬುರಗಿಯಲ್ಲಿ ಖಾರಿಫ್ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಕಲಬುರಗಿ: ರಾಜ್ಯಾದ್ಯಂತ ಇನ್ನೊಂದು ತಿಂಗಳ ಆಸುಪಾಸಿನಲ್ಲಿ ರಾಬಿ ಬೆಳೆ ಕೊಯ್ಲಿಗೆ ಸಿದ್ಧವಾಗಿದೆ. ಖಾರಿಫ್ ಬೆಳೆಗೆ ಬೆಲೆ ಸಿಗದ ಪರಿಣಾಮ ಒಂದಷ್ಟು ರೈತರಿಂದ ಉತ್ಪನ್ನ ಮಾರಾಟ ತಡವಾಗಿತ್ತು. ಕಲಬುರಗಿ ಭಾಗದಲ್ಲಿ ನೆರೆ, ಪ್ರವಾಹ ರೈತರ ನಿದ್ದೆಗೆಡಿಸಿತ್ತು. ಸರ್ಕಾರ ಪರಿಹಾರ ಘೋಷಿಸಿದ ಬೆನ್ನಲ್ಲೆ ಇದೀಗ ರೈತರ ಅನುಕೂಲಕ್ಕಾಗಿ ವಿವಿಧ ಬೆಳೆಗಳ ಖರೀದಿ ಅವಧಿಯನ್ನು ವಿಸ್ತರಣೆ ಮಾಡಿ ಹೊಸ ವರ್ಷದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಲಬುರಗಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಗುರುವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

2025-26 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿನ ನ್ಯಾಯಯುತ ಸರಾಸರಿ ಗುಣಮಟ್ಟದ (ಎಫ್.ಎ.ಕ್ಯೂ) ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಉತ್ಪನ್ನವನ್ನು ರೈತರಿಂದ ಖರೀದಿಸಲು ನಿಗದಿಪಡಿಸಿರುವ ಗರಿಷ್ಠ ಮಿತಿಯನ್ನು ತೆಗೆಯಲಾಗಿದೆ. ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲು ನಮ್ಮ ಸರ್ಕಾರ ಆದೇಶ ನೀಡಿದೆ ಎಂದರು.
ಈಗಾಗಲೇ ನಿಗಧಿತ ಅವಧಿಯಲ್ಲಿ ನೊಂದಣಿ ಮಾಡಿಕೊಂಡಿರುವ ಜಿಲ್ಲೆಯ ರೈತರು ಮಾರಾಟ ಮಾಡಲು ಖರೀದಿ ಅವಧಿಯನ್ನು ಈ ಕೆಳಕಂಡ ಅವಧಿಗೆ ವಿಸ್ತರಿಸಲಾಗಿರುತ್ತದೆ. ಯಾವ ಅವಧಿಯಲ್ಲಿ ಯಾವ ಬೆಳೆಗೆ ಎಷ್ಟು ದರ ನಿಗದಿ ಆಗಿದೆ ಎಂಬ ಮಾಹಿತಿ ತಿಳಿದು ಮಾರಾಟ ಮಾಡಬಹುದಾಗಿದೆ.
ವಿಸ್ತರಣೆಗೊಂಡ ಅವಧಿ, ಬೆಳೆ ದರ ಮಾಹಿತಿ
1. ಹೆಸರು ಕಾಳು- ನಿಗದಿಪಡಿಸಿದ ದರ: 8768
- ಅಂತಿಮ ದಿನಾಂಕ : 22-01-2026.
2. ಉದ್ದಿನ ಕಾಳು- ನಿಗದಿಪಡಿಸಿದ ದರ: 7800 ರೂಪಾಯಿ
- ಅಂತಿಮ ದಿನಾಂಕ: 22-01-26
3. ಸೂರ್ಯಕಾಂತಿ-ನಿಗದಿಪಡಿಸಿದ ದರ: 7721 ರೂಪಾಯಿ
- ಅಂತಿಮ ದಿನಾಂಕ: 22-01-26
4. ಸೋಯಾಬೀನ್- ನಿಗದಿಪಡಿಸಿದ ದರ: 5328 ರೂಪಾಯಿ
- ಅಂತಿಮ ದಿನಾಂಕ : 26-01-26
ಕಲಬುರಗಿ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (PACS) ಹಾಗೂ ಎಫ್ಪಿಓ ಗಳಿಗೆ ಭೇಟಿ ನೀಡಿ ತಾವು ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗು ಸೋಯಾಬೀನ ನಿಗದಿತ ಅವಧಿಯಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರೈತರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಸಚಿವರು ತಿಳಿಸಿದ್ದಾರೆ.
1. ಉದ್ದಿನ ಕಾಳು & ಸೋಯಾಬೀನ ಖರೀದಿಗಾಗಿ ಮೊಬೈಲ್- 9449864446 (KSCMF)
2. ಹೆಸರು ಕಾಳು ಖರೀದಿಗಾಗಿ ಮೊಬೈಲ್- 9964474444 (KSPAML)
3. ಸೂರ್ಯಕಾಂತಿ ಖರೀದಿಗಾಗಿ ಮೊಬೈಲ್- 9591812142 (KOF)












Click it and Unblock the Notifications