Priyanka Gandhi : ಏಪ್ರಿಲ್ 25ರಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಿಯಾಂಕ ಗಾಂಧಿ
ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯ ಮತ್ತಷ್ಟು ರಂಗೇರುತ್ತಿದೆ. ರಾಷ್ಟ್ರದ ನಾಯಕರು ರಾಜ್ಯದ ಕಡೆ ಮುಖಮಾಡುತ್ತಿದ್ದು, ಎಲ್ಲಾ ಪಕ್ಷಗಳಿಂದ ರೋಡ್ ಶೋ, ಸಮಾವೇಶ ಭರ್ಜರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಕೂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದು, ಏಪ್ರಿಲ್ 25ರಂದು ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಪ್ರಿಯಾಂಕ ಗಾಂಧಿ ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮನಿಸಿ ಭರ್ಜರಿ ಪ್ರಚಾರ ನಡೆಸಿದರು. ಬಾಗಲಕೋಟೆ, ವಿಜಾಪುರ ಸೇರಿದಂತೆ ಹಲವು ಕಡೆ ರಾಹುಲ್ ಗಾಂಧಿ ಪ್ರಚಾರ ನಡೆಸಿದರು. ಈ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಅವರ ರಾಜ್ಯ ಪ್ರವಾಸಕ್ಕೂ ದಿನಾಂಕ ನಿಗದಿ ಮಾಡಲಾಗಿದೆ.

ಏಪ್ರಿಲ್ 25ರಂದು ಮೈಸೂರಿಗೆ ಆಗಮಿಸಲಿರುವ ಕಾಂಗ್ರೆಸ್ ನಾಯಕಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 25ರಂದು ಮಧ್ಯಾಹ್ನ 12 ರಿಂದ 1 ಗಂಟೆಗೆ ಟಿ.ನರಸೀಪುರ ಕ್ಷೇತ್ರದ ಹೆಳವರಹುಂಡಿಯಲ್ಲಿ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಹನೂರು ಕ್ಷೇತ್ರಕ್ಕೆ ಹೋಗಲಿದ್ದು, ಗೌರಿಶಂಕರ್ ಕನ್ವೆನ್ಷನ್ ಹಾಲ್ನಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ 1 ಗಂಟೆಗಳ ಕಾಲ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ.
ಸಂವಾದ ಮುಕ್ತಾಯವಾದ ಬಳಿಕ ಸಂಜೆ 4.15ಕ್ಕೆ ಕೆ.ಆರ್ ನಗರಕ್ಕೆ ತೆರಳಲಿದ್ದು, ಸಂಜೆ 5.30 ರಿಂದ 6.30ರ ವರೆಗೆ ನಡೆಯುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ನಗರದ ತೋಪಮ್ಮನ ದೇವಸ್ಥಾನದಿಂದ ಸುಮಾರು 2 ಕಿಲೋ ಮೀಟರ್ ದೂರದವರೆಗೆ ಬೃಹತ್ ರೋಡ್ ಶೋ ಮಾಡಲು ಯೋಜನೆ ಮಾಡಿಕೊಳ್ಳಲಾಗಿದೆ.
ಕಾಂಗ್ರೆಸ್ ಈಗಾಗಲೇ ರಾಜ್ಯದಾದ್ಯಂತ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಭಾನುವಾರ ಬಸವಜಯಂತಿಯಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಜಯಪುರದಲ್ಲಿ ನಡೆದ ಬೃಹತ್ ರೋಡ್ಶೋನಲ್ಲಿ ಕೂಡ ಭಾಗವಹಿಸಿದ್ದ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಾರಿ ರಾಜ್ಯದಲ್ಲಿ ಆಪರೇಷನ್ ಕಮಲ ಎಲ್ಲಾ ನಡೆಯಲ್ಲ, ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications