ವೈದ್ಯರ ಮುಷ್ಕರ : ರೋಗಿಗಳ ಪರದಾಟ, ಸರ್ಕಾರದ ಮೌನ
ಬೆಂಗಳೂರು, ನವೆಂಬರ್ 3 : 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಒಂದು ದಿನದ ಮುಷ್ಕರ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ರೋಗಿಗಳು ಪರದಾಡಿದರು.
ಮುಷ್ಕರ ನಡೆಸಿದರೂ ತುರ್ತು ಸೇವೆಗಳನ್ನು ನೀಡುತ್ತೇವೆ ಎಂದು ಗುರುವಾರ ವೈದ್ಯರು ಹೇಳಿದ್ದರು. ಆದರೆ, ಹಲವು ಜಿಲ್ಲೆಗಳಲ್ಲಿ ಆಸ್ಪತ್ರೆಗಳು ರೋಗಿಗಳನ್ನು ವಾಪಸ್ ಕಳುಹಿಸಿದ ಘಟನೆ ನಡೆದಿದೆ. ಅತ್ತ ಸರ್ಕಾರವೂ ವೈದ್ಯರ ಪ್ರತಿಭಟನೆ ನಂತರವೂ ಯಾವ ನಿರ್ಧಾರವನ್ನು ಕೈಗೊಂಡಿಲ್ಲ.
ವೈದ್ಯರ ಮುಷ್ಕರದಿಂದಾಗಿ ಜನರು ಪರದಾಡುತ್ತಿದ್ದರೆ, 'ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಗೊತ್ತಿಲ್ಲ. ಧರಣಿ ನಡೆಸುವ ಬಗ್ಗೆ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಮಸೂದೆ ಬಗ್ಗೆ ಖಾಸಗಿ ವೈದ್ಯಕೀಯ ಸಂಸ್ಥೆ ಸದಸ್ಯರ ಜತೆ ಚರ್ಚಿಸಲಾಗಿದೆ' ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿಕೆ ನೀಡಿದರು.
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
ಒಂದು ದಿನದ ಮುಷ್ಕರ ಮುಗಿದೆ. ಆದರೆ, ಕರ್ನಾಟಕ ಸರ್ಕಾರ ಮುಷ್ಕರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ನ.14ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಲಾಗುತ್ತದೆ. ವೈದ್ಯರ ಮುಂದಿನ ನಡೆ ಏನೂ ಎಂಬುದು ಇನ್ನೂ ಖಚಿತವಾಗಿಲ್ಲ. ವೈದ್ಯರ ಮುಷ್ಕರದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ....

ಸಿದ್ದರಾಮಯ್ಯ ಹೇಳುವುದೇನು?
ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಮಸೂದೆ ರೂಪಿಸಿದ್ದೇವೆ. ಅದು ವಿಧಾನಮಂಡಲ ಜಂಟಿ ಸದನ ಸಮಿತಿ ಮುಂದೆ ಹೋಗಿದೆ. ಅದರ ಬಗ್ಗೆ ವಿಧಾನ ಮಂಡಲದಲ್ಲಿ ಇನ್ನಷ್ಟೇ ಚರ್ಚೆ ನಡೆಯಬೇಕು. ಈ ಹಂತದಲ್ಲಿ ವೈದ್ಯರ ಪ್ರತಿಭಟನೆ ಸರಿಯಲ್ಲ' ಎಂದು ಹೇಳಿದರು.

ಪರದಾಡಿದ ರೋಗಿಗಳು
ಬಾಗಲಕೋಟೆಯಲ್ಲಿ 60 ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. ಶಿವಮೊಗ್ಗದಲ್ಲಿ ಪ್ರತಿಷ್ಠಿತ ನಂಜಪ್ಪ, ನಾರಾಯಣ ಆಸ್ಪತ್ರೆಗಳು ಬಂದ್ ಆಗಿದ್ದವು. ಯಾದಗಿರಿಯಲ್ಲಿ 50 ಆಸ್ಪತ್ರೆ, ಉಡುಪಿಯಲ್ಲಿ 25ಕ್ಕೂ ಹೆಚ್ಚು ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. ಇದರಿಂದ ರೋಗಿಗಳು ಪರದಾಡಿದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು.

ಸಂಕಷ್ಟ ಅನುಭವಿಸಿದ ಗರ್ಭಿಣಿ
ಬಾಗಲಕೋಟೆಯ ಹುನಗುಂದದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಗರ್ಭಿಣಿ ಚೈತ್ರಾ ಅವರನ್ನು ಸಿಬ್ಬಂದಿ ವಾಪಸ್ ಕಳಿಸಿದರು. ಕುಟುಂಬದವರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಮೂರು ಗಂಟೆಗಳ ಕಾಲ ಗರ್ಭಿಣಿ ಚೈತ್ರಾ ಅವರು ಸಂಕಷ್ಟ ಅನುಭವಿಸಿದರು. ಕೊನೆಗೆ ಸಂಶೋಧನಾ ವಿದ್ಯಾರ್ಥಿಗಳು, ನರ್ಸ್ಗಳ ಸಹಾಯದಿಂದ ಹೆರಿಗೆ ಮಾಡಿಸಲಾಯಿತು. ಚೈತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

ಮುಷ್ಕರಕ್ಕೆ ವಿರೋಧ
ವೈದ್ಯರ ಒಂದು ದಿನದ ಮುಷ್ಕರಕ್ಕೆ ಜನರು, ವಿವಿಧ ಗ್ರಾಹಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. 'ವೈದ್ಯರಿಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ. ಅದು ಸಾಂಕೇತಿಕವಾಗಿ ಇರಬೇಕೆ ಹೊರತು ರೋಗಿಗಳಿಗೆ ತೊಂದರೆ ಆಗಬಾರದು' ಎಂದು ಕೇಂದ್ರ ಗ್ರಾಹಕರ ಸಂರಕ್ಷಣಾ ಪರಿಷತ್ ಸದಸ್ಯ ವೈ.ಜಿ.ಮುರುಳೀಧರ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ಸಂದಣಿ
ಖಾಸಗಿ ಆಸ್ಪತ್ರೆ ವೈದ್ಯರು ಸೇವೆ ಸ್ಥಗಿತಗೊಳಿಸಿದ್ದರಿಂದ ಜನರಿಗೆ ತೊಂದರೆ ಆಗದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಸೂಚನೆ ನೀಡಿತ್ತು. ಆದ್ದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿತು.

'ಪ್ರತಿಭಟನೆ ಬಗ್ಗೆ ನನಗೆ ಗೊತ್ತಿಲ್ಲ'
'ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಗೊತ್ತಿಲ್ಲ. ಧರಣಿ ನಡೆಸುವ ಬಗ್ಗೆ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಮಸೂದೆ ಬಗ್ಗೆ ಖಾಸಗಿ ವೈದ್ಯಕೀಯ ಸಂಸ್ಥೆ ಸದಸ್ಯರ ಜತೆ ಚರ್ಚಿಸಲಾಗಿದೆ' ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿಕೆ ನೀಡಿದರು.

ತರಾತುರಿಯ ಕೆಲಸ ಬೇಡ
'ಕರ್ನಾಟಕ ಸರ್ಕಾರ ತರಾತುರಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 ಅನ್ನು ಜಾರಿಗೆ ತರಲು ಹೊರಟಿರುವುದು ಹುಚ್ಚುತನದ ನಿರ್ಧಾರ. ಎಲ್ಲಾ ವೈದ್ಯರು ಮೋಸಗಾರರಲ್ಲ. ಕಾರ್ಪೊರೇಟ್ ಆಸ್ಪತ್ರೆಗಳ ಬಿಲ್ಲಿಂಗ್ನಲ್ಲಿ ಮೋಸವಾಗಿರಬಹುದು. ಸರ್ಕಾರ ತರಾತುರಿಯಲ್ಲಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ಜಾರಿಗೆ ತರುವ ಅಗತ್ಯವಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.












Click it and Unblock the Notifications