ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಹಿಂಬಡ್ತಿ: ಅಪ್ಡೇಟ್
ಬೆಂಗಳೂರು, ಏಪ್ರಿಲ್ 15: ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಹಿಂಬಡ್ತಿ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಶಿಕ್ಷಕರಲ್ಲಿ ಸಹ ಹಲವು ಗೊಂದಲಗಳು ಉಂಟಾಗಿದೆ. 1 ರಿಂದ 7ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು, 1 ರಿಂದ 5ರ ಪಿಎಸ್ಟಿ ಶಿಕ್ಷಕರಾಗಿ ಹಿಂಬಡ್ತಿ ನೀಡಿದ ಶಿಕ್ಷಣ ಇಲಾಖೆಯ ಕ್ರಮದ ಕುರಿತು ಚರ್ಚೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಲ್ಲಿಸಿರುವ ಮನವಿಯ ಕುರಿತು ಯಾವ ಅಭಿಪ್ರಾಯ ವ್ಯಕ್ತವಾಗಿದೆ? ಎಂಬುದು ಪ್ರಶ್ನೆಯಾಗಿದೆ.
2016ಕ್ಕಿಂತ ಮೊದಲು ನೇಮಕ ಹೊಂದಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹಿಂಬಡ್ತಿಯನ್ನು ಹಿಂಪಡೆದು, ಮರುಪದನಾಮಿಕರಣಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಲ್ಲಿಸಿರುವ ಮನವಿಯ ಕುರಿತು ವ್ಯಕ್ತವಾದ ಅಭಿಪ್ರಾಯ ಇಲ್ಲಿದೆ.

ಶಾಲಾ ಶಿಕ್ಷಕರ ಬಡ್ತಿ ವಿವರಗಳು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು ಸಲ್ಲಿಸಿರುವ ದಿನಾಂಕ 20.01.2025ರ ಟಿಪ್ಪಣಿಯನ್ನು ಹಾಗೂ ಅದರೊಂದಿಗಿನ ಅಡಕಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ಟಿಪ್ಪಣಿಯಲ್ಲಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಅವರ ಮನವಿಯಂತೆ 2016ಕ್ಕಿಂತ ಮೊದಲು 1-7/ 8ಕ್ಕೆ ನೇಮಕ ಹೊಂದಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪಿಎಸ್ಟಿ ಎಂದು ಪದನಾಮ ಮಾಡಿ 1-5ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆದು, ಪದವಿ ಹೊಂದಿದ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಜಿಪಿಟಿ ಶಿಕ್ಷಕರೆಂದು ಪದನಾಮೀಕರಣ ಮಾಡುವುದು.
ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರ ಹಕ್ಕುಗಳನ್ನು ಸಂರಕ್ಷಿಸಿ ನ್ಯಾಯ ಒದಗಿಸುವ ಕುರಿತು ಸಮಿತಿ ರಚಿಸಿ ವರದಿ ಪಡೆದು 2 ತಿಂಗಳ ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಅದರನ್ವಯ ಸರ್ಕಾರದ ಆದೇಶ ದಿನಾಂಕ 23/9/2023ರಂತೆ ಸಮಿತಿ ರಚಿಸಲಾಗಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ಶೀಘ್ರವಾಗಿ ಅಭಿಪ್ರಾಯ ನೀಡುವಂತೆ ಕಾನೂನು ಇಲಾಖೆಯನ್ನು ಕೋರಿರುತ್ತಾರೆ.
ಟಿಪ್ಪಣಿಯನ್ನು ಪರಿಶೀಲಿಸಿ, ಸದರಿ ವಿಷಯದ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಅಭಿಪ್ರಾಯ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಹಾಗೂ ಟಿಪ್ಪಣಿಯೊಂದಿಗಿನ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ, ಶಾಲಾ ಶಿಕ್ಷಣ ಇಲಾಖೆ ಇವರ ಪತ್ರದಲ್ಲಿನ ಮಾಹಿತಿಯ ಆಧಾರದ ಮೇಲೆ ಅಭಿಪ್ರಾಯ ನೀಡಿದಲ್ಲಿ, ಏಕಪಕ್ಷೀಯ ಅಭಿಪ್ರಾಯವಾಗುವ ಹಿನ್ನಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಈ ವಿಷಯವಾಗಿ ಭೌತಿಕ ಇ-ಕಡತಗಳನ್ನು ತೆರೆದಿದ್ದಲ್ಲಿ, ಅದನ್ನು ಕೂಡಲೇ ಕಾನೂನು ಇಲಾಖೆಗೆ ಕಡತಗಳನ್ನು ಸಲ್ಲಿಸುವಂತೆ ದಿನಾಂಕ 03/02/2025 ಮತ್ತು 27/02/2025ರ ಅರೆ ಸರ್ಕಾರಿ ಪತ್ರದ ಮೂಲಕ ಕೋರಲಾಗಿರುತ್ತದೆ.
ಆದಾಗ್ಯೂ ಕಡತಗಳು ಸ್ವೀಕೃತವಾಗದ ಹಿನ್ನೆಲೆಯಲ್ಲಿ, ಸದರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಕಡತಗಳನ್ನು ಸಲ್ಲಿಸುವಂತೆ ಸಹ ತಿಳಿಸಲಾಗಿದ್ದು, ಇದುವರೆಗೂ ಕಡತಗಳು ಸ್ವೀಕೃತಗೊಂಡಿರದ ಕಾರಣ ಹಾಗೂ ಈಗಾಗಲೇ 2 ತಿಂಗಳಿಗೂ ಹಚ್ಚಿನ ಸಮಯ ಮುಗಿದಿರುವ ಕಾರಣ ಅಭಿಪ್ರಾಯವನ್ನು ನೀಡಲಾಗಿದ್ದು, ಅಭಿಪ್ರಾಯವು ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖಾ ಸಚಿವರ ಟಿಪ್ಪಣಿಯೊಂದಿಗೆ ಸಲ್ಲಿಕೆಯಾಗಿರುವ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ಶಾಲಾ ಶಿಕ್ಷಣ ಇಲಾಖೆ ಇವರ ಪತ್ರದಲ್ಲಿನ ಮಾಹಿತಿಯನ್ನು ಆಧರಿಸಿರುತ್ತದೆ ಎಂದು ಹೇಳಿದೆ.
ಕಾನೂನು ಇಲಾಖೆ ಈ ವಿಚಾರದಲ್ಲಿ ವೃಂದ ಮತ್ತು ನೇಮಕಾತಿಗೆ 2017ರಲ್ಲಿ ತಂದ ತಿದ್ದುಪಡಿಯ ನಿಯಮಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2016ಕ್ಕೂ ಮೊದಲು ನೇಮಕವಾದ ಶಿಕ್ಷಕರಿಗೆ ಪೂರ್ವಾನ್ವಯ ಮಾಡಬಾರದು ಎಂದು ಅಭಿಪ್ರಾಯವನ್ನು ನೀಡಿದೆ.
2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ನಿಯಮ ಅನ್ವಯಿಸಬಾರದು. 1 ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು 1-5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದೇ ಪರಿಗಣಿಸಬೇಕು ಎಂದು ಇಲಾಖೆ ಅಭಿಪ್ರಾಯವನ್ನು ಪಟ್ಟಿದೆ.












Click it and Unblock the Notifications