ರಾಜ್ಯದಲ್ಲಿಯೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ
ಬೆಂಗಳೂರು, ಜು. 29: ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ರಾಜ್ಯ ಶಿಕ್ಷಣ ಇಲಾಖೆ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ ಎಂಬ ಧ್ಯೇಯವಾಕ್ಯದ ಆಧಾರದ ಮೇಲೆ, ನೂತನ ನೀತಿಗೆ ಅನುಮೋದನೆ ನೀಡಲಾಗಿದೆ. 34 ವರ್ಷಗಳ ಬಳಿಕ ಬದಲಾವಣೆ ಮಾಡಿ ತಂದಿರುವ ಹೊಸ ಶಿಕ್ಷಣ ನೀತಿಯನ್ನು ರಾಜ್ಯ ಶಿಕ್ಷಣ ಇಲಾಖೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಹೇಳಿದ್ದಾರೆ.
ನೂತನ ಶಿಕ್ಷಣ ನೀತಿಯ ಪ್ರಮುಖ ಅಂಶಗಳನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸುವತ್ತ ನಮ್ಮ ಇಲಾಖೆ ಚಿಂತನೆ ನಡೆಸಿದೆ. ಹೊಸ ಶಿಕ್ಷಣ ನೀತಿಯಿಂದ ಸರ್ವರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕೆನ್ನುವುದು ನಮ್ಮೆಲ್ಲರ ಆಕಾಂಕ್ಷೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿಸುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಆಶಯವಾಗಿದೆ. ಐದು ವರ್ಷದ ಒಳಗಿನ ಮಕ್ಕಳಿಗೆ 'ಬಾಲವಾಟಿಕಾ' ಆರಂಭಿಸುವುದು, ಹಂತ-ಹಂತವಾಗಿ ಕಲಿಕೆ ಆಗಲೆಂಬ ಕಾರಣಕ್ಕೆ 10+2 ಪದ್ಧತಿಯ ಬದಲಿಗೆ 5+3+3+4 ಪದ್ಧತಿ ಪರಿಚಯ ಮಾಡಿಕೊಡಲಾಗುತ್ತಿದೆ. ಆರನೇ ತರಗತಿ ನಂತರ ವೃತ್ತಿಪರ ಶಿಕ್ಷಣ ಕಲಿಕೆ ಪ್ರಾರಂಭಗೊಳಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಹೊಸ ಶಿಕ್ಷಣ ನೀತಿಯಲ್ಲಿ ಪರೀಕ್ಷಾ ವಿಧಾನದಲ್ಲಿ ಸುಧಾರಣೆಗೆ ಮಹತ್ವ ಕೊಡಲಾಗಿದೆ. ಬಹುವಿಧದ ಪರೀಕ್ಷೆಗೆ ತೀರ್ಮಾನ ಮಾಡಲಾಗಿದೆ. ವಾರ್ಷಿಕ, ಅರ್ಧವಾರ್ಷಿಕ, ಮಾಡ್ಯುಲ್ ಮಾದರಿ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯ ಪ್ರಾಮುಖ್ಯತೆ ಕಡಿಮೆ ಮಾಡುವ ಚಿಂತನೆಯಿದೆ. ವರ್ಷದಲ್ಲಿ ಎರಡು ಬಾರಿ ಮುಖ್ಯ ಪರೀಕ್ಷೆ ಮಾಡಲಾಗುವುದು. ಸಮಗ್ರ ಫಲಿತಾಂಶ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೀಗಾಗಿ ಮೂರು ಹಂತದಲ್ಲಿ ವಿದ್ಯಾರ್ಥಿಯ ಸಾಮರ್ಥ್ಯ ಅಳೆಯುವ ರಿಪೋರ್ಟ್ ಕಾರ್ಡ್ ಕೊಡಲಾಗುವುದು. ಜೊತೆಗೆ ಉನ್ನತ ಶಿಕ್ಷಣ ಪೂರ್ತಿಯಾಗುವವರೆಗೆ ಒಂದೇ ಮಾದರಿಯ ರಿಪೋರ್ಟ್ ನೀಡುವ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿದೆ.












Click it and Unblock the Notifications