ಕೊಡಗಿನ ಬಿಜೆಪಿ ಶಾಸಕರಿಗೆ ಕಾದಿದ್ಯಾ ಸಂಕಷ್ಟ?
ಮಡಿಕೇರಿ, ಫೆಬ್ರವರಿ 01: ಈಗಾಗಲೇ ಮುಂಬರುವ ಮೇ ತಿಂಗಳಲ್ಲಿ ನಡೆಯಲಿರುವ 2018 ವಿಧಾನಸಭಾ ಚುನಾವಣೆಗೆ ರಾಜ್ಯದಾದ್ಯಂತ ರಾಜಕೀಯ ಪಕ್ಷಗಳು ತಂತ್ರ, ಪ್ರತಿತಂತ್ರ ನಡೆಸುತ್ತಿದ್ದರೆ, ಆಕಾಂಕ್ಷಿಗಳು ತಮ್ಮ ನೆಚ್ಚಿನ ನಾಯಕರ ಮೂಲಕ ಶಿಫಾರಸ್ಸು ಮಾಡಿಸಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ಇತ್ತ ಕೊಡಗಿನಲ್ಲಿಯೂ ಚುನಾವಣಾ ತಂತ್ರಗಳು ಬಿರುಸಿನಿಂದ ಸಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಲ್ಲಿ ಬಿಜೆಪಿ ಕಳೆದ ಕೆಲವು ವರ್ಷಗಳಿಂದ ಭದ್ರವಾಗಿ ನೆಲೆ ಕಂಡು ಕೊಂಡಿರುವುದರಿಂದಾಗಿ ಹೇಗಾದರು ಮಾಡಿ ಬಿಜೆಪಿಯನ್ನು ಸೋಲಿಸಿ ತಮ್ಮ ಪಕ್ಷದ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ವ ವಿಧದಲ್ಲೂ ಸಜ್ಜಾಗುತ್ತಿವೆ.

ಹೊಸ ಮುಖಗಳಿಗೆ ಅವಕಾಶವಿಲ್ಲ
ಇದುವರೆಗೆ ಸೋಲಿಲ್ಲದ ಸರದಾರರಂತೆ ಬೀಗುತ್ತಿರುವ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಈ ಬಾರಿ ಸಂಕಷ್ಟ ಎದುರಾಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿಲ್ಲ. ಕೆಲವು ತಿಂಗಳ ಹಿಂದೆ ಬಿಜೆಪಿ ನಾಯಕರು ಸಭೆ ನಡೆಸಿ ಮುಂದಿನ ಚುನಾವಣೆಗೆ ಹಾಲಿ ಶಾಸಕರೇ ಸ್ಪರ್ಧಿಸಲಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು.
ಆದರೆ ಬದಲಾದ ರಾಜಕೀಯ ವಿದ್ಯಮಾನಗಳು ಇವರಿಗೆ ವರದಾನವಾಗುತ್ತದೆಯೋ ಅಥವಾ ಮುಳುವಾಗುತ್ತದೆಯೋ ಎಂಬುದು ಸದ್ಯದ ಯಕ್ಷ ಪ್ರಶ್ನೆಯಾಗಿದೆ. ಒಂದು ವೇಳೆ ಅಮಿತ್ ಶಾ ಅವರು ಹೊರಡಿಸಿದ್ದಾರೆ ಎನ್ನಲಾದ ಹಾಲಿ ಶಾಸಕರ ಕ್ಷೇತ್ರ ಬದಲಾವಣೆ ತಂತ್ರ ಜಾರಿಯಾದರೆ ಕೊಡಗಿನ ಶಾಸಕರಿಗೆ ಅದು ವರದಾನವಾದರೂ ಅಚ್ಚರಿಪಡಬೇಕಾಗಿಲ್ಲ.
ಸದ್ಯದ ರಾಜ್ಯ ಬಿಜೆಪಿ ನಾಯಕರು ಮುಂದಿನ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಅವರೇನಾದರೂ ನೂತನ ಮುಖಗಳಿಗೆ ಟಿಕೆಟ್ ಕೊಡಲು ಮುಂದಾದರೆ ಮಾತ್ರ ಆಕಾಂಕ್ಷಿ ನಾಯಕರಿಗೆ ಅನುಕೂಲವಾಗಲಿದೆ. ಇಲ್ಲದೆ ಹೋದರೆ ಎಷ್ಟೇ ಉತ್ತಮ ಕೆಲಸ ಮಾಡಿ ಪ್ರಭಾವ ಬೆಳೆಸಿಕೊಂಡಿದ್ದರೂ ಅವರಿಗೆ ಟಿಕೆಟ್ ಸಿಕ್ಕಿ ಅವರು ಗೆದ್ದು ಶಾಸಕರಾಗುವುದು ಕನಸಿನ ಮಾತಾಗಿದೆ.

ಟಿಕೆಟ್ ಆಕಾಂಕ್ಷಿಗಳು ಇದ್ದಾರೆ
ಹಾಗೆನೋಡಿದರೆ ಜಿಲ್ಲೆಯಲ್ಲಿ ಹಾಲಿ ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಹೊರತು ಪಡಿಸಿ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಹಲವು ನಾಯಕರು ಮುಂದಾಗಲು ತಯಾರಿದ್ದಾರೆ. ಅವರಲ್ಲಿ ಮಂಡೇಪಂಡ ಸುಜಾ ಕುಶಾಲಪ್ಪ, ಹಾಲಿ ಬಿಜೆಪಿ ಜಿಲ್ಲಾಧÀ್ಯಕ್ಷ ಯುವ ನಾಯಕ ಭಾರತೀಶ್ ಈಗಲೂ ಆಕಾಂಕ್ಷಿಗಳೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಾಲಿ ಶಾಸಕರಿಬ್ಬರು ಪ್ರಭಾವಿ ನಾಯಕರಾಗಿರುವುದರಿಂದ ಎರಡನೇ ದರ್ಜೆಯ ನಾಯಕರಿಗೆ ಅವಕಾಶ ಸಿಗುವುದು ಸುಲಭದ ಮಾತಲ್ಲ.
ಇದೆಲ್ಲದರ ನಡುವೆ ಹೇಗಾದರು ಮಾಡಿ ಬಿಜೆಪಿಗೆ ಸೆಡ್ಡು ಹೊಡೆಯಲೇ ಬೇಕೆಂಬ ಹಠಕ್ಕೆ ಕಾಂಗ್ರೆಸ್ ಬಂದಿದೆ. ಹೀಗಾಗಿಯೇ ಜೆಡಿಎಸ್ನಿಂದ ದೂರವಾಗಿ ತಟಸ್ಥವಾಗಿದ್ದ ಎಂ.ಸಿ.ನಾಣಯ್ಯ ಅವರು ಮತ್ತು ಬೆಂಬಲಿಗರನ್ನು ತಮ್ಮತ್ತ ಸೆಳೆಯಲು ತಂತ್ರ ಮಾಡಿದ್ದಾರೆ.

ಕೊಡವ ಸಮುದಾಯಕ್ಕೆ ಪ್ರಾತಿನಿದ್ಯ ದೊರೆಯಬೇಕು
ಮತ್ತೊಂದೆಡೆ ಕೊಡವರ ಪ್ರಾಬಲ್ಯವಿರುವ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕೆ ಪ್ರಾತಿನಿದ್ಯ ಸಿಗಲೇ ಬೇಕು, ತಮ್ಮದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಕೆಲವು ಸಂಘಟನೆಗಳ ಮುಖಂಡರ ಮೂಲಕ ಇಂತಹ ಹೇಳಿಕೆಗಳನ್ನು ಹರಿಯ ಬಿಡಲಾಗುತ್ತಿದೆ. ಇದು ಹಾಲಿ ಶಾಸಕ, ಗೌಡ ಸಮುದಾಯಕ್ಕೆ ಸೇರಿದ ಕೆ.ಜಿ.ಬೋಪಯ್ಯ ಅವರಿಗೆ ಆತಂಕ ತಂದಿದೆ. ಇದರ ಹಿಂದೆ ಯಾರ ತಂತ್ರವಿದೆಯೋ ಗೊತ್ತಿಲ್ಲ.

ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ
ಕೊಡಗಿನ ಮಟ್ಟಿಗೆ ಜಾತಿ ರಾಜಕೀಯ ನಡೆಯಲ್ಲ ಎಂಬುದು ಹಿಂದಿನ ಚುನಾವಣೆಗಳು ಸಾಬೀತು ಮಾಡಿವೆ ಅದು ಹೇಗೆಂದರೆ ಗೌಡರು ಮತ್ತು ಇತರೆ ಸಮುದಾಯದವರು ಹೆಚ್ಚಿರುವ ಕ್ಷೇತ್ರವಾದ ಮಡಿಕೇರಿಯಿಂದ ಕೊಡವ ಸಮುದಾಯದ ಅಪ್ಪಚ್ಚುರಂಜನ್ ಗೆದ್ದು ಬಂದಿದ್ದರೆ, ಕೊಡವ ಸಮುದಾಯದ ಪ್ರಾಬಲ್ಯವಿರುವ ವಿರಾಜಪೇಟೆ ಕ್ಷೇತ್ರದಿಂದ ಗೌಡ ಸಮುದಾಯದ ಕೆ.ಜಿ.ಬೋಪಯ್ಯ ಗೆಲುವು ಪಡೆದಿದ್ದಾರೆ.
ಆದರೆ ಚುನಾವಣೆ ವೇಳೆಗಾಗಲೇ ಕೇಳಿ ಬರುತ್ತಿರುವ ಈ ಕೂಗಿಗೆ ಇನ್ನಷ್ಟು ಬಲ ದೊರತು ಅದೇನಾದರೂ ಚುನಾವಣೆ ಮೇಲೆ ಪರಿಣಾಮ ಬೀರುವ ಮಟ್ಟಕ್ಕೆ ಹೋದರೂ ಹಾಲಿ ಶಾಸಕರಿಗೆ ಯಾವುದೇ ತೊಂದರೆಯಾಗಲಾರದು. ಕಾರಣ ಇಬ್ಬರು ತಮ್ಮ ಕ್ಷೇತ್ರವನ್ನು ಅದಲು ಬದಲು ಮಾಡಿಕೊಂಡರೆ ಸಾಕು. ಆ ಕೂಗು ತಣ್ಣಗಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications