ಸಂವೇದನೆ ಇಲ್ಲದ ಐಬಿಪಿಎಸ್, ಸುಮ್ಮನಿರುವ ಕೇಂದ್ರಕ್ಕೆ ಸಿದ್ದು ಗುದ್ದು
ಬೆಂಗಳೂರು, ಸೆಪ್ಟೆಂಬರ್ 11: "ಭಾಷೆ ಅರಿವಿನ ಬಗ್ಗೆ ಇರುವ ನಿಯಮ ರೂಪಿಸುವಾಗ ಐಬಿಪಿಎಸ್ (ಬ್ಯಾಂಕ್ ಪರೀಕ್ಷೆಗಳನ್ನು ನಡೆಸುವ ಏಜೆನ್ಸಿ) ಪೂರ್ತಿ ವ್ಯತ್ಯಾಸ ಮಾಡಿಟ್ಟಿದೆ. ಇಂಥ ನಿಯಮ ಮಾಡಿರುವುದರಿಂದ ಪ್ರಾದೇಶಿಕ ಭಾವನೆಗಳಿಗೆ ಸ್ಪಂದಿಸುವ ಸಂವೇದನಾಶೀಲತೆಯನ್ನೇ ಕಳೆದುಕೊಂಡಿದೆ. ಇದರಿಂದ ನಮ್ಮ ರಾಜ್ಯದ ಯುವಕರ ಮನಸಿಗೆ ಘಾಸಿಯಾಗಿದೆ."
-ದೇಶದಾದ್ಯಂತ ಜಾರಿಯಲ್ಲಿರುವ ಬ್ಯಾಂಕ್ ಗಳ ನೇಮಕಾತಿ ವಿಧಾನದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಖಡಕ್ ಪತ್ರ ಬರೆದಿದ್ದಾರೆ.
ಸೆಪ್ಟೆಂಬರ್ 2017ರಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಿಗದಿಯಾಗಿದ್ದು, ಭಾಷಾ ಜ್ಞಾನದ ಬಗ್ಗೆ ಇರುವ ನಿಯಮಾವಳಿಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಬೇಕು. ತಕ್ಷಣದಿಂದ ತಿದ್ದುಪಡಿ ತಂದು, ಸ್ಥಳೀಯ ಭಾಷೆ ತಿಳಿದವರಿಗೆ ಆದ್ಯತೆ ನೀಡಬೇಕು. ಈ ಬಾರಿ ನೇಮಕಾತಿಯಲ್ಲೇ ಇದು ಜಾರಿಗೆ ಬರಬೇಕು.
ಆಯಾ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಆಯಾ ರಾಜ್ಯ ಭಾಷೆ ಅಧ್ಯಯನ ಮಾಡದವರನ್ನು ನೇಮಕಾತಿಗೆ ಪರಿಗಣಿಸಬಾರದು.
ಭಾರತದಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದ ಎಲ್ಲ ಭಾಷೆಗಳನ್ನೂ ಸಮಾನವಾಗಿ ಪರಿಗಣಿಸಬೇಕು. ಆದ್ದರಿಂದ ಪರೀಕ್ಷೆಯನ್ನು ಅಧಿಕೃತ ಇಪ್ಪತ್ತೆರಡು ಭಾಷೆಗಳ ಪೈಕಿ ಯಾವುದರಲ್ಲಾದರೂ ಬರೆಯುವ ಅವಕಾಶ ಇರಬೇಕು. ಈಗಿರುವಂತೆ ಹಿಂದಿ-ಇಂಗ್ಲಿಷ್ ನಲ್ಲಷ್ಟೇ ಪರೀಕ್ಷೆ ಇಡುವುದು ಸಂವಿಧಾನದ ತತ್ವಗಳಿಗೆ ವಿರುದ್ಧವಾದದ್ದು.

ಸ್ಥಳೀಯ ಭಾಷೆ ಮೇಲೆ ಹಿಡಿತ ಇರುವವರಿಗೆ ಅವಕಾಶ
ಕೇಂದ್ರ ಸರಕಾರದ ವಿವಿಧ ಇಲಾಖೆಗಳಾದ ಅಬಕಾರಿ, ರೈಲ್ವೆ, ಸ್ಟಾಫ್ ಸೆಲೆಕ್ಷನ್, ಜಿಎಸ್ ಟಿ ಸೇವೆ ಮುಂತಾದ ಕಡೆ ಸಾವಿರಾರು ಮಂದಿಯನ್ನು ವಿವಿಧ ರಾಜ್ಯಗಳಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಈ ಎಲ್ಲ ಕಡೆಯೂ ಸ್ಥಳೀಯ ಭಾಷೆ ಮೇಲೆ ಹಿಡಿತ ಇರುವವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಪ್ರೊಬೇಷನರಿ ಮುಗಿಯುವದರೊಳಗೆ ಕಲಿತಿರಲಿ
ನಿಯಮದ ಪ್ರಕಾರ, ಆಯ್ಕೆಯಾದ ಅಭ್ಯರ್ಥಿ ಆಯಾ ಸ್ಥಳೀಯ ಭಾಷೆಯನ್ನು ನೇಮಕವಾದ ಆರು ತಿಂಗಳೊಳಗೆ ಕಲಿಯಬೇಕು. ಒಂದು ವೇಳೆ ಕಲಿಯದಿದ್ದರೆ ಮತ್ತಷ್ಟು ಕಾಲಾವಕಾಶ ನೀಡಲಾಗುತ್ತಿದೆ. ಈ ಸಮಯ ಅವರ ಪ್ರೊಬೇಷನರಿ ಅವಧಿಗಿಂತ ಹೆಚ್ಚಿರಬಾರದು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಜನರ ಅಗತ್ಯ ಪೂರೈಸಬೇಕು
ಜನರ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡಬೇಕಾದ ಬ್ಯಾಂಕ್ ಉದ್ಯೋಗಿಗಳನ್ನು ಆಯಾ ನಿರ್ದಿಷ್ಟ ವಲಯದಲ್ಲೇ ವರ್ಗಾವಣೆ ಮಾಡಲಾಗುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣ ಗ್ರಾಮೀಣ ಪ್ರದೇಶವಾಗಿರುತ್ತದೆ. ಆದ್ದರಿಂದ ಈ ಉದ್ಯೋಗಿಗಳು ಸ್ಥಳೀಯ ಭಾಷೆ ಕಲಿಯಬೇಕು ಮತ್ತು ಅಲ್ಲಿನ ಜನರ ಅಗತ್ಯವನ್ನು ಪೂರೈಸಬೇಕು ಎಂದಿದ್ದಾರೆ.

ಎಲ್ಲ ಜನರಿಗೂ ನ್ಯಾಯ
ವಿವಿಧತೆಗೆ ಹೆಸರಾದ ಭಾರತದಲ್ಲಿ ಸ್ಥಳೀಯವಾಗಿ ಮಾತನಾಡುವ ಅಧಿಕೃತ ಇಪ್ಪತ್ತೆರಡು ಭಾಷೆಗಳಿವೆ. ಎಲ್ಲಕ್ಕೂ ಸಮಾನ ಪ್ರಾಶಸ್ತ್ಯ ಸಿಗಬೇಕು. ಎಲ್ಲ ರಾಜ್ಯಕ್ಕೂ ಸಾಂವಿಧಾನ ಹಕ್ಕಿದೆ ಎಂಬುದನ್ನು ಐಬಿಪಿಎಸ್ ಅರ್ಥ ಮಾಡಿಕೊಳ್ಳಬೇಕು. ಸಮರ್ಥ ದೇಶ ಕಟ್ಟುವ ನಿಟ್ಟಿನಲ್ಲಿ ಎಲ್ಲ ಜನರಿಗೂ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.












Click it and Unblock the Notifications