ರಾಜ್ಯದಲ್ಲಿ ತಗ್ಗಿದ ಉಷ್ಣಾಂಶ, ಬೆಂಗಳೂರಲ್ಲಿ ವರ್ಷಧಾರೆ ನಿರೀಕ್ಷೆ
ಬೆಂಗಳೂರು, ಮೇ 17: ರಾಜ್ಯದಲ್ಲಿ ಮೇ 17 ಮತ್ತು ಮೇ 18 ರಂದು ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆ ಸೋಮವಾರ ಬಾಳೆಹೋನ್ನೂರಿನಲ್ಲಿ ಮೀಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚಿನ ಉಷ್ಣಾಂಶ ಅಂದರೆ 42 ಡಿಗ್ರಿ ದಾಖಲಾಗಿತ್ತು. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಉಷ್ಣಾಂಶ ಗಣನೀಯವಾಗಿ ತಗ್ಗಿದೆ. ಮಂಗಳವಾರ ಸಂಜೆ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ.[ಮುಂಗಾರು ಪ್ರವೇಶ ಒಂದು ವಾರ ವಿಳಂಬ]
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ತುಮಕೂರು, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದಿದೆ.[ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಮಳೆ ಪರಿಣಾಮ ಅಡಕೆ, ರಬ್ಬರ್ ಬೆಳೆಗೆ ಹಾನಿಯಾಗಿದೆ. ಮೀನುಗಾರರಿಗೆ ಸಹ ಎಚ್ಚರಿಕೆ ನೀಡಲಾಗಿದ್ದು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಗಂಟೆಗೆ 45ರಿಂದ 55ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ. ಆದುದರಿಂದ ಮುಂದಿನ 48 ತಾಸುಗಳವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಅತ್ತ ತಮಿಳುನಾಡಿನ ಚೆನ್ನೈ ಮತ್ತು ಕೇರಳದಲ್ಲಿ ಮಳೆ ಆರಂಭವಾಗಿದೆ. ಮುಂಗಾರು ಕೇರಳವನ್ನು ಜೂನ್ ಮೊದಲ ವಾರ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.