ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ
ಬೆಂಗಳೂರು, ಮೇ, 19: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಾಡಾದರೆ ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.[ಮಡಿಕೇರಿಯಲ್ಲಿ ಮಳೆ ತಂದ ಅವಾಂತರ]
ವಾಯುಭಾರ ಕುಸಿತದ ಪರಿಣಾಮ ಬುಧವಾರ ರಾಜ್ಯದ ವಿವಿಧ ಕಡೆಗಳಲ್ಲಿ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡಿನಲ್ಲಿ 7 ಸೆಂಮೀ ಮಳೆ ದಾಖಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ದಕ್ಷಿಣ ಕನ್ನಡ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾಸನ, ದಾವಣಗೆರೆ ಸೇರಿದಂತೆ ಗಾಳಿಸಹಿತ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಸಹ ಬುಧವಾರ ಸಂಜೆ ಮತ್ತು ರಾತ್ರಿ ಮಳೆ ಅಬ್ಬರಿಸಿದೆ.[ಮುಂಗಾರು ಪ್ರವೇಶ ಒಂದು ವಾರ ವಿಳಂಬ]
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹುಬ್ಬಳ್ಳಿ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿಯೂ ಮಳೆಯಾಗಿದ್ದು, ಬಿರುಗಾಳಿ ಮಳೆಗೆ 600ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.[ಬಿಬಿಎಂಪಿಗೆ ಸವಾಲೊಡ್ಡುವಂತೆ ಬೆಂಗಳೂರಲ್ಲಿ ವರ್ಷಧಾರೆ]
ಮಳೆ ಮಲೆನಾಡಿನ ಕಾಫಿ ಮತ್ತು ಅಡಿಕೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಒಂದೆಡೆ ವಾತಾವರಣ ತಂಪು ಮಾಡಿದ್ದರೆ ಇನ್ನೊಂದೆಡೆ ವಾಣಿಜ್ಯ ಬೆಳೆಗಳ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಎಲ್ಲೆಲ್ಲಿ ಮಳೆ: ಶಿವಮೊಗ್ಗ ಜಿಲ್ಲೆ ತ್ಯಾಗರ್ತಿ, ಚಿಕ್ಕಮಗಳೂರು ಜಿಲ್ಲೆ ಕಳಸ 6 ಸೆಂ ಮೀ, ಹಾವೇರಿ ಮತ್ತು ಮೂಡಿಗೆರೆಯಲ್ಲಿ 5 ಸೆಂಮೀ, ಮಂಗಳೂರು, ಕೋಟಾ, ಕೊಲ್ಲೂರು, ಆನವಟ್ಟಿ, ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ 4 ಸೆಂಮೀ ಮಳೆಯಾಗಿದೆ.
ಉಳಿದಂತೆ ಹಾನಗಲ್, ಹಿರೆಕೆರೂರು, ಲಕ್ಷ್ಮೀಶ್ವರ, ತಾಳಗುಪ್ಪ, ಬನವಾಸಿ, ಮಂಚಿಕೇರಿ, ಸಿದ್ದಾಪುರ, ಶಿಗ್ಗಾಂವ್, ಸವಣೂರು, ಹುಲಿಕಲ್, ಬಾಳೆಹೊನ್ನೂರು, ತರಿಕೇರೆ, ಅಜ್ಜಂಪುರ, ಕುಂದಾಪುರ, ಜಯಪುರ, ಶಿವನಿ ಸೇರಿದಂತೆ ಹಲವೆಡೆ ಮಳೆ ಬಿದ್ದಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 42.6 ಡಿಗ್ರಿ ಉಷ್ಣತೆ ದಾಖಲಾಗಿತ್ತು.
ಬೆಂಗಳೂರಲ್ಲಿ ಮಳೆ: ಬೆಂಗಳೂರಿನ ಉಷ್ಣಾಂಶ ಗಣನೀಯವಾಗಿ ಕುಸಿದಿದ್ದು ಗುರುವಾರ ಸಂಜೆ ಸಹ ಮಳೆಯಾಗುವ ಸಂಭವವಿದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.