ಕಲಬುರ್ಗಿ ಹತ್ಯೆ : ಆರೋಪಿ ಪ್ರವೀಣ್ ಚತುರ್ ಗೌರಿ ಹತ್ಯೆಯಲ್ಲಿ ಸಾಕ್ಷಿ!
ಬೆಂಗಳೂರು, ಜೂನ್ 09 : ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರವೀಣ್ ಚತುರ್ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ. ಕಲಬುರ್ಗಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬೆಳಗಾವಿ ಮೂಲದ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್ ಚತುರ್ (27) ನನ್ನು ಬಂಧಿಸಿದೆ. ಪ್ರವೀಣ್ ಚತುರ್, ಗಣೇಶ್ ಮಿಸ್ಕಿನ್ ಸೇರಿ ಎಂ.ಎಂ.ಕಲಬುರ್ಗಿ ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಎಂ.ಎಂ.ಕಲಬುರ್ಗಿ ಹತ್ಯೆ, ಪ್ರಮುಖ ಆರೋಪಿ ಬಂಧಿಸಿದ ಎಸ್ಐಟಿ
ಬೆಳಗಾವಿ ಮೂಲಕ ಪ್ರವೀಣ್ ಚತುರ್ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಮಾಡುವಾಗ ಬೈಕ್ ಓಡಿಸುತ್ತಿದ್ದ. ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಬೈಕ್ ಚಾಲಕರ ರೇಖಾ ಚಿತ್ರವನ್ನು ನೋಡಿದಾಗ ಪ್ರವೀಣ್ಗೆ ಹೋಲಿಕೆ ಇರುವುದು ಪತ್ತೆಯಾಗಿದೆ.
ಎಂ.ಎಂ.ಕಲಬುರ್ಗಿ ಹತ್ಯೆ ಎಸ್ಐಟಿ ತನಿಖೆಗೆ ಸುಪ್ರೀಂ ಆದೇಶ
'ಪದ್ಮಾವತ್' ಹಿಂದಿ ಸಿನಿಮಾ ಬಿಡುಗಡೆ ಸಮಯದಲ್ಲಿ ಬೆಳಗಾವಿಯ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ಚತುರ್ನನ್ನು ಪೊಲೀಸರು ಈ ವರ್ಷ ಬಂಧಿಸಿದ್ದರು.
ಎಂ.ಎಂ.ಕಲಬುರ್ಗಿ ಹತ್ಯೆಗೆ ಮಂಗಳೂರಲ್ಲಿ ತರಬೇತಿ ಪಡೆದಿದ್ದರು?
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಚು ರೂಪಿಸಿದ ಅಮೋಲ್ ಕಾಳೆಯನ್ನು ವಿಚಾರಣೆ ನಡೆಸಿದಾಗ ಪ್ರವೀಣ್ ಚತುರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಬೆಳಗಾವಿಯಲ್ಲಿ ಆತನನ್ನು ಬಂಧಿಸಿದ ಎಸ್ಐಟಿ ವಿಚಾರಣೆ ನಡೆಸಿದೆ. ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೆಲವು ಆರೋಪಿಗಳ ವಿಚಾರಣೆ ನಡೆಸಿದಾಗ ಮೊದಲು ಪ್ರವೀಣ್ ಹೆಸರು ಕೇಳಿಬಂದಿತ್ತು. ಆಗ ಆತನನ್ನು ಕರೆದು ಎಸ್ಐಟಿ ವಿಚಾರಣೆ ಮಾಡಿತ್ತು. ಆದರೆ, ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಹಿನ್ನಲೆಯಲ್ಲಿ ಆತನನ್ನು ಸಾಕ್ಷಿಯಾಗಿ ಚಾರ್ಜ್ ಶೀಟ್ನಲ್ಲಿ ಹೆಸರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಶಿವ ಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆಯ ಸಭೆಗೆ ಪ್ರವೀಣ್ ತಪ್ಪದೇ ಹಾಜರಾಗುತ್ತಿದ್ದ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಕೆಲವೇ ದಿನಗಳ ಹಿಂದೆ ಮಂಗಳೂರಿನಲ್ಲಿ ಬಂದೂರು ತರಬೇತಿ ನಡೆದಿತ್ತು, ಇದರಲ್ಲಿಯೂ ಪ್ರವೀಣ್ ಭಾಗಿಯಾದ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿದೆ.
ಆಗಸ್ಟ್ 30, 2015ರಂದು ಧಾರವಾಡದ ಕಲ್ಯಾಣ ನಗರದ ಮನೆಯಲ್ಲಿ ಎಂ.ಎಂ.ಕಲಬುರ್ಗಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಕಲಬುರ್ಗಿ ಅವರ ಹತ್ಯೆಯ ತನಿಖೆಯನ್ನೂ ನಡೆಸುತ್ತಿದೆ.