ಬಿಲ್ಲವ, ಈಡಿಗ ಸಮುದಾಯದ ಶಕ್ತಿ ತೋರಿಸುತ್ತೇವೆ: ಪ್ರಣವಾನಂದ ಸ್ವಾಮೀಜಿ
ಉಡುಪಿ, ನವೆಂಬರ್ 22: ''2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳು ನಮಗೆ ಬಿಲ್ಲವ, ಈಡಿಗ, ಮತದ ಅವಶ್ಯಕತೆ ಇಲ್ಲ ಎನ್ನುವುದನ್ನು ಬಹಿರಂಗ ಪಡಿಸಲಿ. ಆಗ ನಮ್ಮ ಶಕ್ತಿ ಎಷ್ಟು ಎನ್ನುವುದನ್ನು ನಾವು ತೋರಿಸುತ್ತೇವೆ'' ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣಾವಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಕೊನೆಗೆ ಕೈ ಬಿಡಲಾಗುತ್ತಿದೆ. ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಹೋರಾಟ ಮನೋಭಾವವನ್ನೇ ದೂರ ಮಾಡುವ ಪಿತೂರಿ ನಡೆಯುತ್ತಿದೆ. ಬಿಲ್ಲವರ ಮತ ಪಡೆದು ಅಧಿಕಾರ ಪಡೆದವರೇ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಸಹಿತ 70 ಲಕ್ಷದಷ್ಟು ಜನಸಂಖ್ಯೆ ಇದೆ. ಕೇರಳದಲ್ಲಿ 70 ಲಕ್ಷ, ತಮಿಳುನಾಡಿನಲ್ಲಿ 30 ಲಕ್ಷ, ತೆಲಂಗಾಣದಲ್ಲಿ 50 ಲಕ್ಷ, ಆಂಧ್ರಪ್ರದೇಶದಲ್ಲಿ 42 ಲಕ್ಷ, ಗೋವಾದಲ್ಲಿ 5 ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ದೇಶದ ಸರಾಸರಿ ಜನಸಂಖ್ಯೆಯಲ್ಲಿ ಶೇ. 15 ರಷ್ಟು ಬಿಲ್ಲವರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 7 ಮಂದಿ ಶಾಸಕರಿದ್ದು, ಇಬ್ಬರು ಪ್ರಭಾವಿ ಸಚಿವರಿದ್ದರೂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ರಾಜ್ಯದಲ್ಲಿ 16 ಜಾತಿಗಳಿಗೆ ನಿಗಮ ಮಂಡಳಿ ಇದೆ. ಆದರೆ ಬಿಲ್ಲವರಿಗೆ ಜೀವವಿಲ್ಲದ ಕೋಶ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ನಿಗಮ ಸ್ಥಾಪನೆಗೆ ಬೇಡಿಕೆ ಇಟ್ಟರೆ ಬಿಲ್ಲವ ಸಮುದಾಯದ ಶಾಸಕರೇ ನಿಗಮ ಬೇಡ ಎನ್ನುತ್ತಾರೆ ಎನ್ನುವ ಶಾಸಕ ಉಮನಾಥ್ ಕೋಟ್ಯಾನ್ ವಿಡಿಯೋ ವೈರಲ್ ಆಗಿದೆ. ಆ ಅಡ್ಡಗಾಲು ಹಾಕಿದ ಶಾಸಕ ಯಾರೆಂದು ಬಹಿರಂಗ ಪಡಿಸಲಿ. ಮುಂದಿನ ಚುನಾವಣೆಗೆ ಬಿಲ್ಲವರ ಮತದ ಅಗತ್ಯ ನನಗಿಲ್ಲ ಎನ್ನಲಿ. ಬಿಲ್ಲವರ ಶಕ್ತಿ, ಪ್ರಭಾವ ಎಷ್ಟು ಎನ್ನುವುದನ್ನು ತೋರಿಸುತ್ತೇವೆ ಎಂದರು.
ಬಿಜೆಪಿಯ ಧರ್ಮ ರಾಜಕಾರಣದಿಂದಾಗಿ 21 ಮಂದಿ ಬಿಲ್ಲವ ಯುವಕರ ಹತ್ಯೆಯಾಗಿದ್ದು, ಸರಕಾರ ಮಾತನಾಡುತ್ತಿಲ್ಲ. ಬಿಲ್ಲವರು ರಾಜಕೀಯಕ್ಕೆ ಬರಬಾರದು, ಆರ್ಥಿಕವಾಗಿ ಸದೃಢವಾಗಬಾರದೆಂದು ಆರ್ಥಿಕ ಮೂಲವನ್ನೇ ಕತ್ತರಿಸಲಾಗುತ್ತಿದೆ. 2004 ರಲ್ಲಿ 29 ಜಿಲ್ಲೆಗಳಲ್ಲೂ ಶೇಂದಿಯನ್ನು ನಿಷೇಧಿಸುತ್ತೀರಾ. 2006 ರಲ್ಲಿ ನ್ಯಾಯಾಲಯ ತೀರ್ಪು ಕೊಟ್ಟರೂ ಕಿಮ್ಮತ್ತು ಕೊಡಲ್ಲ ಎಂದರು.
30, 40 ಪರ್ಸಂಟ್ ಬಿಲ್ಲವರ ಮತವಿರುವ ವಿಧಾನ ಸಭಾ ಕ್ಷೇತ್ರದಲ್ಲಿ ಬಿಲ್ಲವರೇ ಅಭ್ಯರ್ಥಿಯಾಗಬೇಕು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಾರವಾರ ಸಹಿತ ಬಿಲ್ಲವರಿಗೆ ಪ್ರಾತಿನಿಧ್ಯ ಸಿಗಬೇಕು. ಬಿಲ್ಲವರು ಕೇವಲ ಜೈಕಾರ ಕೂಗುವುದಕ್ಕೆ, ಹಲ್ಲೆ ಮಾಡಿಸುವುದಕ್ಕೆ ಮಾತ್ರವಲ್ಲ. ಸಮುದಾಯ ಅಸ್ಮಿತೆಗಾಗಿ ಧರ್ಮದ ರಾಜಕೀಯಕ್ಕೆ ಬಲಿಯಾಗದೇ ರಾಜಕೀಯ ನಾಯಕರಾಗಿ ಬೆಳೆಯಬೇಕೆಂದು ಯುವ ಸಮುದಾಯಕ್ಕೆ ಮನವಿ ಮಾಡಿದರು.
ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಾಜದ ಬೇಡಿಕೆಯ ಈಡೇರಿಕೆಗಾಗಿ ಜ. 6 ರಿಂದ ಮುಂದಿನ 40 ದಿನಗಳ ಕಾಲ ಐತಿಹಾಸಿಕ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಗೆ ಕುದ್ರೋಳಿ ಕ್ಷೇತ್ರದಿಂದ ಚಾಲನೆ ಕೊಟ್ಟು 10 ಬೇಡಿಕೆಗೆ ಸರಕಾರ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ಬೆಂಗಳೂರಿಗೆ ಹೋಗುತ್ತೇವೆ. 2023 ರದ್ದು ಪಕ್ಷದ ಚುನಾವಣೆ ಅಲ್ಲ. ಅದು ಬಿಲ್ಲವ ಸಮುದಾಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಚುನಾವಣೆ ಎಂದು ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಬಿಲ್ಲವ ಒಕ್ಕೂಟ ತೋನ್ಸೆ ಅಧ್ಯಕ್ಷ ಬಿ.ಪಿ. ರಮೇಶ್ ಪೂಜಾರಿ, ಪ್ರ. ಕಾರ್ಯದರ್ಶಿ ಸರ್ವೋತ್ತಮ್ ಪೂಜಾರಿ, ಸಂಜಯ್ ಪೂಜಾರಿ, ಆಕಾಶ್ ಕಾರ್ಕಳ ಉಪಸ್ಥಿತರಿದ್ದರು.