ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಸಚಿವರೇ 'ಕತ್ತಲೆ ಭಾಗ್ಯ' ಕರೆಕ್ಟಾಗಿ ಎಷ್ಟು ಗಂಟೆ ಹೇಳಿ?

By ಬಾಲರಾಜ್ ತಂತ್ರಿ
|
Google Oneindia Kannada News

ವಿದ್ಯುತ್ ಸಮಸ್ಯೆ ಯಾವ ಸರಕಾರವನ್ನೂ ಬಿಟ್ಟಿಲ್ಲ. ಇದಕ್ಕೆ ಸಿದ್ದರಾಮಯ್ಯ ಸರಕಾರವೂ ಹೊರತಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಯಾರೂ ಇಲ್ಲ.

ಇಲ್ಲಿ ಬೇಕಾಗಿರುವುದು ಸಮಸ್ಯೆಗೆ ಸರಕಾರ ಯಾವ ರೀತಿ ಸ್ಪಂಧಿಸುತ್ತದೆ ಅನ್ನೋದು. ಕೆಟ್ಟು ಕೂತಿರುವ ಬಳ್ಳಾರಿ, ಉಡುಪಿ ಮತ್ತು ರಾಯಚೂರು ಘಟಕದ ಯೂನಿಟ್ ಗಳನ್ನು ಆದಷ್ಟು ಬೇಗ ಸರಿಪಡಿಸುವುದು, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ನೀಡುವುದು ಮುತ್ಸದಿತನ.

ಅದು ಬಿಟ್ಟು ಅವರ ಸರಕಾರದಲ್ಲಿ ಇಷ್ಟು ಗಂಟೆ ಲೋಡ್ ಶೆಡ್ಡಿಂಗ್ ಆಯಿತು, ರೈತರ ಪಂಪ್ ಸೆಟ್ಟಿಗೆ ನಮ್ಮ ಸರಕಾರ ಇಷ್ಟು ಗಂಟೆ ವಿದ್ಯುತ್ ನೀಡಿದೆ ಎನ್ನುವ ಅಂಕಿಅಂಶ ಸಮೇತ ಸರಕಾರದ ಸ್ಪಷ್ಟೀಕರಣ ಯಾವನಿಗೆ ಬೇಕಾಗಿದೆ?

ರಾಯಚೂರು, ಉಡುಪಿ ಘಟಕ ಕೈಕೊಟ್ಟಿರುವುದು ಸಿದ್ದರಾಮಯ್ಯ ಅವರ ಕಾಲ್ಗುಣವಲ್ಲ. ಹಿಂದಿನ ಯಡಿಯೂರಪ್ಪ, ಕುಮಾರಸ್ವಾಮಿ ಸರಕಾರದಲ್ಲೂ ಇದೇ ಸಮಸ್ಯೆ ಇತ್ತು. ಆ ಸಮಯಕ್ಕೆ ಬೇಕಾಗುವಂತೆ ತಾಂತ್ರಿಕ ಸಮಸ್ಯೆಯ ಪರಿಹಾರಕ್ಕೆ ಒತ್ತು ನೀಡುತ್ತಿದ್ದರೇ ಹೊರತು, ಪರ್ಮನೆಂಟ್ ಪರಿಹಾರಕ್ಕೆ ಯಾವ ಸರಕಾರವೂ ಮನಸ್ಸು ಮಾಡಲೇ ಇಲ್ಲ. (ಬೆಸ್ಕಾಂನಿಂದ ಮತ್ತೆ ಶಾಕ್)

Power crisis increasing day by day, what is the Load shedding duration

ಆಗಸ್ಟ್ ತಿಂಗಳಲ್ಲೇ ಈ ಮೂರು ಘಟಕಗಳ ಕೆಲವು ಯೂನಿಟುಗಳು ಕೆಟ್ಟು ಕೂತಿದ್ದವು, ಇದರಿಂದ ಪ್ರತಿದಿನ ಸರಾಸರಿ ಅಂದಾಜು 3,420 ಮೆಗಾವ್ಯಾಟ್ ಉತ್ಪಾದನೆ ಕಮ್ಮಿಯಾಗಿತ್ತು. ಹೆಸ್ಕಾಂ (ಹುಬ್ಬಳ್ಳಿ ವ್ಯಾಪ್ತಿ) ಆಗಸ್ಟ್ ತಿಂಗಳಿಂದಲೇ ಲೋಡ್ ಶೆಡ್ಡಿಂಗ್ ಆರಂಭಿಸಿತ್ತು. ಬೆಸ್ಕಾಂ ಮಾತ್ರ ಬಿಬಿಎಂಪಿ ಚುನಾವಣೆಯ ನಂತರ ಲೋಡ್ ಶೆಡ್ಡಿಂಗ್ ಆರಂಭಿಸಿತ್ತು.

ಮಳೆ, ಯೂನಿಟ್ ಕೈಕೊಟ್ಟಿರುವುದು ನಿಜ ಆದರೆ ಲೋಡ್ ಶೆಡ್ಡಿಂಗ್ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಇಂಧನ ಸಚಿವರು ಹೇಳಿದ್ದರು. ಬಹುಷಃ ಬಿಬಿಎಂಪಿ ಚುನಾವಣೆ ಇದೆ ಎನ್ನುವ ಕಾರಣ ಇದ್ದರೂ ಇರಬಹುದು. ವೋಟ್ ಬ್ಯಾಂಕ್ ರಾಜಕಾರಣ ಎಲ್ಲರೂ ಮಾಡೋದೇ.

ನಗರ ವ್ಯಾಪ್ತಿಯಲ್ಲಿ ಈ ಹಿಂದೆ ಎರಡು ಗಂಟೆ ಎಂದು ಘೋಷಿಸಿದ್ದ ಲೋಡ್ ಶೆಡ್ಡಿಂಗ್ ಮೂರು ತಾಸು, ಗ್ರಾಮೀಣ ಭಾಗದಲ್ಲಿ ನಾಲ್ಕು ತಾಸು ಎಂದು ಅಧಿಕೃತವಾಗಿ ಪ್ರಕಟವಾಗಿದೆ. ಆದರೆ ಎಸ್ಕಾಂಗಳು ಪ್ರಕಟಿಸಿರುವ ಲೋಡ್ ಶೆಡ್ಡಿಂಗಿಗೆ ಅನ್ವಯವಾಗುವಂತೆ ಅವರು ನಡೆದುಕೊಳ್ಳುತ್ತಿದ್ದಾರಾ ಅನ್ನೋದೇ ಇಲ್ಲಿರುವ ಪ್ರಶ್ನೆ.

ಇಂಡಸ್ಟ್ರಿಗಳಿಗೆ ಮತ್ತು ಇತರ ಅಗತ್ಯ ಸೇವೆಗಳ ಫೀಡರುಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಎಸ್ಕಾಂ ಅಧಿಕಾರಿಗಳು ಹೇಳಿದ್ದರು. ಆದರೆ, ಆಗುತ್ತಿರುವುದು ಏನು, ಎಸ್ಕಾಂ ಅಧಿಕಾರಿಗಳ ಮಾತಿಗೆ ಬೆಲೆ ಅನ್ನೋದು ಇಲ್ವೇ?

ಇಂಡಸ್ಟ್ರಿ ವ್ಯಾಪ್ತಿಯಲ್ಲಿ (Commercial HT) ನಿರಂತರ ವಿದ್ಯುತ್ ಪೂರೈಸ ಬೇಕಾದವರು ಮನ ಬಂದಂತೆ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಉದಾಹರಣೆಗೆ ನಮ್ಮ ಕಚೇರಿ ವ್ಯಾಪ್ತಿಯಲ್ಲೇ (ಜಯನಗರ) ಏಳರಿಂದ ಎಂಟು ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. (ಕತ್ತಲೆ ಭಾಗ್ಯ ಯೋಜನೆಯ ಪ್ರಯೋಜನಗಳು)

ಇಂಧನ ಇಲಾಖೆಗೆ ಕರೆಂಟ್ ಹೋದ ಕೂಡಲೇ ಜನರೇಟರ್ ಸದ್ದು ಮಾಡಲಾರಂಭಿಸುತ್ತದೆ ಅನ್ನೋ ಗ್ಯಾರಂಟಿನೋ, ಹೇಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ ಜನರೇಟರ್ ಓಡಿಸಲಿ ಬಿಡು ಅನ್ನೋ ಲೆಕ್ಕಾಚಾರನೋ? ರಾಜಧಾನಿಯಲ್ಲೇ ಹೀಗಾದರೆ, ಇನ್ನು ಗ್ರಾಮೀಣ ಭಾಗದಲ್ಲಿ? ಎಷ್ಟು ಗಂಟೆ ಕರೆಂಟು ಇರುತ್ತೆ ಅನ್ನೋ ಲೆಕ್ಕ ಇಡೋದೇ ಸುಲಭವೇನೋ?

ನಮ್ಮ ಪ್ರತಿನಿಧಿ ಬೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ಅವರು ಹೇಳಿದಿಷ್ಟು. ಒಂದೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ ಉಳಿಸ ಬೇಕು ಎನ್ನುವ ಆದೇಶವಿದೆ. ಲೋಡ್ ಶೆಡ್ಡಿಂಗ್ ಜಾಸ್ತಿ ಮಾಡದೇ ನಮಗೆ ಬೇರೆ ದಾರಿಯಿಲ್ಲ ಅಂತಾರೆ.

ರಾಜ್ಯದಲ್ಲಿ ವಿದ್ಯುತ್ತಿನ ಸಮಸ್ಶೆ ಗಂಭೀರವಾಗಿರುವುದು ನಿಜ. ಮಳೆ ಬರುವುದು ಬಿಡುವುದು ಸರಕಾರದ ಕೈಯಲಿಲ್ಲ, ಆದರೆ ವಿದ್ಯುತ್ ಘಟಕಗಳ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದಕ್ಕೆ ದೇವರೇ ಬೇಕಾಗಿಲ್ಲ. (ವಿದ್ಯುತ್ ತಂತಿಯಲ್ಲಿ ಬಟ್ಟೆ ಒಣಗಿಸಲು ಅನುಮತಿ)

ರಾಜಕಾರಣದಲ್ಲಿ ಸಕ್ರಿಯವಾಗಿರುವ ಮತ್ತು ಇಂಧನ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಅವರು ಜನತೆಯ ಮುಂದೆ ವಸ್ತುಸ್ಥಿತಿ ವಿವರಿಸಲಿ.. ಲೋಡ್ ಶೆಡ್ಡಿಂಗ್ ಎಷ್ಟು ದಿನ, ಎಷ್ಟು ಗಂಟೆಯೆಂದು ವಿವರಿಸಲಿ. ಕಬ್ಬಾಳಮ್ಮ ಎಲ್ಲರಿಗೂ ಒಳ್ಳೆದು ಮಾಡಲಿ.

English summary
Power crisis increasing day by day in Karnataka, what is the exact Load shedding duration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X