ಖಾತೆ ಹಂಚಿಕೆ ಕುರಿತು ಕ್ಯಾತೆ; ಬೊಮ್ಮಾಯಿ ಭೇಟಿಯಾದ ಸಚಿವರು
ಬೆಂಗಳೂರು, ಆಗಸ್ಟ್ 8; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ ಬಳಿಕ ಕೆಲವು ಸಚಿವರು ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಬಳಿ ಈ ಕುರಿತು ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಭಾನುವಾರ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಖಾತೆ ಹಂಚಿಕೆ ಬಗ್ಗೆ ತಮಗೆ ಇರುವ ಅಸಮಾಧಾನವನ್ನು ತೋಡಿಕೊಂಡರು. ಸಚಿವರಿಗೆ ಭರವಸೆಯನ್ನು ನೀಡಿ ಬಸವರಾಜ ಬೊಮ್ಮಾಯಿ ಕಳಿಸಿಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಎಂಟಿಬಿ ನಾಗರಾಜ್, "ನನಗೆ ಈಗ ಕೊಟ್ಟಿರುವ ಖಾತೆ ಹಿಂಬಡ್ತಿ ನೀಡಿದಂತಾಗಿದೆ. 'ಎ' ಗ್ರೇಡ್ನಿಂದ 'ಬಿ' ಗ್ರೇಡ್ಗೆ ತಂದಿದ್ದಾರೆ" ಎಂದರು.

"ನನಗೆ ಕೊಟ್ಟಿರುವ ಖಾತೆ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅವರ ಭರವಸೆಯನ್ನು ಒಪ್ಪಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಖಾತೆ ಬದಲಿಸುವ ವಿಶ್ವಾಸವಿದೆ. ನನಗೆ ಜನರ ಜೊತೆ ಸೇರಿ ಕೆಲಸ ಮಾಡುವ ಖಾತೆಯ ಅಗತ್ಯವಿದೆ" ಎಂದು ಹೇಳಿದರು.
"ಈ ಹಿಂದೆ ನಾನು ವಸತಿ ಖಾತೆ ಕೇಳಿದ್ದೆ. ಈ ಬಾರಿ ಅದಕ್ಕಿಂತ ಒಳ್ಳೆಯ ಖಾತೆ ನೀಡಲಿದ್ದಾರೆ ಅಂದುಕೊಂಡಿದ್ದೆ. ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಾರಿಗೆ ಈ ಪೈಕಿ ಯಾವುದಾದರೂ ಒಂದನ್ನು ಕೊಡಲಿ" ಎಂದರು.
ಆನಂದ್ ಸಿಂಗ್ ಭೇಟಿ; ಪರಿಸರ, ಜೀವಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಶನಿವಾರ ಖಾತೆ ಹಂಚಿಕೆ ಆಗುತ್ತಲೇ ಕೇಳಿದ ಖಾತೆ ಸಿಗಲಿಲ್ಲ ಎಂದು ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಆರ್. ಟಿ. ನಗರದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಕುಟುಂಬ ಸಮೇತ ಆನಂದ್ ಸಿಂಗ್ ಆಗಮಿಸಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಆನಂದ್ ಸಿಂಗ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿದೆ ತೆರಳಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಸಹ ಬೊಮ್ಮಾಯಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಯಡಿಯೂರಪ್ಪ ಭೇಟಿಯಾದ ಸಿಎಂ; ಖಾತೆ ಹಂಚಿಕೆ ಬಗ್ಗೆ ಹಲವಾರು ಸಚಿವರು ಅತೃಪ್ತಿ ವ್ಯಕ್ತಪಡಿಸಿರುವಂತೆಯೇ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಿಂದ 'ಕಾವೇರಿ'ಗೆ ತೆರಳಿದ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಬಳಿ ಮಾತುಕತೆ ನಡೆಸಿದರು. ಆಗ ಯಡಿಯೂರಪ್ಪ ಭೇಟಿ ಮಾಡಲು ಎಂ. ಪಿ. .ರೇಣುಕಾಚಾರ್ಯ ಸಹ ಆಗಮಿಸಿದರು.
ಖಾತೆಗಳ ಬಗ್ಗೆ ಅಸಮಾಧಾನಗೊಂಡಿರುವ ಸಚಿವರ ಕುರಿತು ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. "ಬದಲಾವಣೆ ತರುವ ಉದ್ದೇಶದಿಂದ ಹೊಸಬರಿಗೆ ಪ್ರಮುಖ ಖಾತೆ ನೀಡಿದ್ದೇನೆ" ಎಂದು ಹೇಳಿದ್ದರು.
ಖಾತೆ ಹಂಚಿಕೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಹಜ್ಜೆ ಇಟ್ಟಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹಲವರ ಖಾತೆಗಳನ್ನು ಬದಲಾವಣೆ ಮಾಡಿಲ್ಲ.
ಆದರೆ ಭ್ರಷ್ಟಾಚಾರದ ಆರೋಪವನ್ನು ಸಹಿಸೋಲ್ಲ ಎಂಬ ಸಂದೇಶ ನೀಡಿರುವ ಬೊಮ್ಮಾಯಿ ಶಶಿಕಲಾ ಜೊಲ್ಲೆ ಖಾತೆ ಬದಲಾಯಿಸಿದ್ದರು.
ಇನ್ನು ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ವಲಸಿಗರಿಗೂ ಈ ಹಿಂದೆ ನೀಡಿದ್ದ ಖಾತೆಯನ್ನೇ ಮುಂದುವರವೆಸಲಾಗಿದೆ. ಹೊಸದಾಗಿ ಸಂಪುಟ ಸೇರಿದ ಆರಗ ಜ್ಞಾನೇಂದ್ರಗೆ ಗೃಹ, ಸುನೀಲ್ ಕುಮಾರ್ಗೆ ಇಂಧನ ಖಾತೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಸುರೇಶ್ ಕುಮಾರ್ ಬಳಿ ಇದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಬಿ. ಸಿ. ನಾಗೇಶ್ಗೆ ನೀಡಲಾಗಿದೆ.












Click it and Unblock the Notifications