ಕಾಂಗ್ರೆಸ್ ಸೇರಿದ ಆನಂದ್ ಸಿಂಗ್, ವಿಜಯನಗರದ ರಾಜಕೀಯ ಚಿತ್ರಣ ಬದಲು!
ಬಳ್ಳಾರಿ, ಮಾರ್ಚ್ 12 : ಹಲವು ಮಹತ್ತರ ಬದಲಾವಣೆಗಳ ಬಳಿಕ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬಳ್ಳಾರಿಯ ವಿಜಯನಗರ. ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದು ಹೊಸ ರಾಜಕೀಯ ಲೆಕ್ಕಾಚಾರವನ್ನು ಹುಟ್ಟುಹಾಕಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾರ್ಶೀವಾದ ಯಾತ್ರೆ ಆರಂಭವಾಗಿದ್ದು ಹೊಸಪೇಟೆಯಿಂದ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಗೆ ಸ್ವತಃ ಶಾಸಕರೇ ಗೈರು ಹಾಜರಾಗಿದ್ದು ಸಹ ಈ ಕ್ಷೇತ್ರದಲ್ಲಿಯೇ.
ಬಳ್ಳಾರಿ ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. 2013ರ ಚುನಾವಣೆಯಲ್ಲಿ ವಿಜಯನಗರ (ಹೊಸಪೇಟೆ), ಹಗರಿಬೊಮ್ಮನಹಳ್ಳಿ, ಕೂಡ್ಲಗಿ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ಆದರೆ, ಈ ಮೂರು ಕ್ಷೇತ್ರದವರು ಕಾಂಗ್ರೆಸ್ ಸೇರಿದ್ದು ಪಕ್ಷದ ಬಲವನ್ನು ಹೆಚ್ಚಿಸಿದೆ.
ಆನಂದ್ ಸಿಂಗ್ ಬಿಜೆಪಿ ಬಿಟ್ಟು ಹೋಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಆರ್.ಗವಿಯಪ್ಪ ಬಿಜೆಪಿ ಸೇರಿದ್ದಾರೆ. ಆನಂದ್ ಸಿಂಗ್ ಮತ್ತು ಗವಿಯಪ್ಪ ಚುನಾವಣೆಯಲ್ಲಿ ಮುಖಾಮುಖಿಯಾಗಲಿದ್ದು, 2018ರ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಆನಂದ್ ಸಿಂಗ್ ಬಿಜೆಪಿ ಬಿಟ್ಟಿದ್ದೇಕೆ?
ಕರ್ನಾಟಕ ಬಿಜೆಪಿ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿದೆ. ಆದರೆ, ವಿಜಯನಗರದ ಶಾಸಕರಾಗಿದ್ದ ಆನಂದ್ ಸಿಂಗ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಬಿಜೆಪಿ ನಾಯಕರು ಅವರ ವಿರುದ್ಧ ಅಸಮಾಧಾನಗೊಂಡಿದ್ದರು. ಮುಂದಿನ ಚುನಾವಣೆಯಲ್ಲಿ ಆನಂದ್ ಸಿಂಗ್ಗೆ ಟಿಕೆಟ್ ಸಿಗುವುದು ಕಷ್ಟ ಎಂಬ ಸುದ್ದಿ ಹಬ್ಬಿತ್ತು.
ಜನವರಿಯಲ್ಲಿ ಹೊಸಪೇಟೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯಿತು. ಹಾಲಿ ಶಾಸಕರಾಗಿದ್ದ ಆನಂದ್ ಸಿಂಗ್ ಸಮಾವೇಶಕ್ಕೆ ಗೈರು ಹಾಜರಾದರು. ಪಕ್ಷದ ಜಿಲ್ಲಾ ಘಟಕದ ಅಸಮಾಧಾನದಿಂದ ಬೇಸತ್ತು, ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.
ಆನಂದ್ ಸಿಂಗ್ ಎರಡು ಬಾರಿ ವಿಜಯನ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಯಾವ ತಂತ್ರ ಹೂಡಲಿದೆ ಎಂದು ಕಾದು ನೋಡಬೇಕು.
Recommended Video


ರಾಜಕೀಯ ಚಿತ್ರಣ ಬದಲು
ಆನಂದ್ ಸಿಂಗ್ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಶ್ರೀರಾಮುಲು ಅವರು ಪಕ್ಷ ತೊರೆದಾಗ ಬಿಜೆಪಿ ಬಿಟ್ಟಿರಲಿಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಆನಂದ್ ಸಿಂಗ್ ಸಚಿವರಾಗಿದ್ದರು.
ಗಣಿ ಉದ್ಯಮಿ ಪತ್ತಿಕೊಂಡ ಕಿಶೋರ್ 2018ರ ಚುನಾವಣೆಯಲ್ಲಿ ನಾನೇ ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಆನಂದ್ ಸಿಂಗ್ ಆರೋಪಿಸಿದ್ದರು. ಜಿಲ್ಲಾ ಘಟಕದ ಪದಾಧಿಕಾರಿಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂಬುದು ಆನಂದ್ ಸಿಂಗ್ ದೂರಿದ್ದರು.
ಈ ವಿಚಾರದ ಬಗ್ಗೆ ರಾಜ್ಯದ ನಾಯಕರ ಗಮನ ಸೆಳೆದರೂ ಯಾರೂ ಕರೆದು ಮಾತನಾಡಲಿಲ್ಲ ಎಂದು ಸಿಂಗ್ ದೂರಿದ್ದರು. ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ವಾತಾವರಣವಿದೆ. ಎರಡು ಚುನಾವಣೆಯಲ್ಲಿ ಗೆದ್ದಿರುವ ಆನಂದ್ ಸಿಂಗ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್, ಬಿಜೆಪಿ ಅದಲು ಬದಲು
ಅತ್ತ ಕಡೆ ಆನಂದ್ ಸಿಂಗ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು. ಇತ್ತ ಕಡೆ ಕಾಂಗ್ರೆಸ್ ನಾಯಕ, ಹೊಸಪೇಟೆ ಕ್ಷೇತ್ರದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಬಿಜೆಪಿ ಸೇರಿದರು. ಇದರಿಂದ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಗವಿಯಪ್ಪ, ಆನಂದ್ ಸಿಂಗ್ ಮುಖಾಮುಖಿಯಾಗಲಿದ್ದಾರೆ.
ಗಣಿ ಉದ್ಯಮಿಯಾದ ಗವಿಯಪ್ಪ ಅವರು ಮೃದು ಸ್ವಭಾವದ ವ್ಯಕ್ತಿ. ಅವರನ್ನು ಗೆಲ್ಲಿಸಿದರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಚಟುವಟಿಕೆಯನ್ನು ವಿಸ್ತರಣೆ ಮಾಡಲು ಅನುಕೂಲವಾಗಲಿದೆ. ಗವಿಯಪ್ಪ ಅವರು ಸ್ಪರ್ಧಿಸಿದರೆ ಆನಂದ್ ಸಿಂಗ್ ಅವರ ಗೆಲುವಿನ ಓಟವನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ

69 ಸಾವಿರ ಮತ ಪಡೆದಿದ್ದರು
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮುನ್ನ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2013ರ ಚುನಾವಣೆಯಲ್ಲಿ ಅವರು 69,995 ಮತಗಳನ್ನು ಪಡೆದಿದ್ದರು. 2008 ರ ಚುನಾವಣೆಯಲ್ಲಿ 52,418 ಮತಳನ್ನು ಪಡೆದಿದ್ದರು. ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿದ್ದರು.
2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಎಚ್.ಅಬ್ದುಲ್ ವಾಹಬ್ 39,358 ಮತ, ಜೆಡಿಎಸ್ನ ಕೆ.ಬಸವರಾಜ ಅವರು 611 ಮತಗಳನ್ನು ಪಡೆದಿದ್ದರು. ಈಗ ಆನಂದ್ ಸಿಂಗ್ ಕಾಂಗ್ರೆಸ್ ಸೇರಿದ್ದಾರೆ. ಆದ್ದರಿಂದ, ಕ್ಷೇತ್ರದ ಚುನಾವಣಾ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.
ಬಿಜೆಪಿ ಸೇರುವ ಮುನ್ನ ಆನಂದ್ ಸಿಂಗ್ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.












Click it and Unblock the Notifications