ಕರ್ನಾಟಕ ರಾಜಕೀಯ ಗುದ್ದಾಟದಲ್ಲಿ ಬಡವಾಗುವ ಕೂಸು ಯಾರು?
Recommended Video
ಬೆಂಗಳೂರು, ಜುಲೈ 17: ಯಾವ ಥ್ರಿಲ್ಲರ್ ಕಾದಂಬರಿಯನ್ನೂ ಮೀರಿಸುವ ಮಟ್ಟಿಗೆ ಕರ್ನಾಟಕದ ರಾಜಕೀಯ ಕ್ಷಣ ಕ್ಷಣವೂ ರೋಚಕ ತಿರುವು ಪಡೆಯುತ್ತಿದೆ. ಯಾವ ಕ್ಷಣದಲ್ಲಿ ಯಾರು, ಯಾವ ರೀತಿಯ ದಾಳ ಹೂಡುತ್ತಾರೋ, ಪಗಡೆಯಾಟದಲ್ಲಿ ಗೆಲುವು ಯಾರಿಗೋ, ಸೋಲು ಯಾರಿಗೋ ಎಂಬುದನ್ನು ಊಹಿಸಲೂ ಆಗದ ಮಟ್ಟಿಗೆ ಬೆಳವಣಿಗೆಗಳು ನಡೆಯುತ್ತಿವೆ.
ಆದರೆ ಕರ್ನಾಟಕದ ಈ ಎಲ್ಲಾ ರಾಜಕೀಯ ಪ್ರಹಸನದಲ್ಲಿ ಅತೀ ಹೆಚ್ಚು ನಷ್ಟವಾಗುವುದು ಯಾರಿಗೆ? 'ಜನರಿಗೆ' ಅನ್ನೋದು ವಾಸ್ತವ! ಆದ್ರೆ ರಾಜಕೀಯವಾಗಿ ಯೋಚಿಸುವುದಕ್ಕೆ ಹೋದರೆ ಈ ಬೆಳವಣಿಗೆಯಿಂದ ಅತೀ ಹೆಚ್ಚು ನಷ್ಟ ಅನುಭವಿಸುವುದು ಕಾಂಗ್ರೆಸ್ ಪಕ್ಷವೇ ಎನ್ನುತ್ತಾರೆ ರಾಜಕೀಯ ಪಂಡಿತರಾದ ಡಾ. ಸಂದೀಪ್ ಶಾಸ್ತ್ರಿ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?
ಕರ್ನಾಟಕದ ಸಮ್ಮಿಶ್ರ ಸರ್ಕಾರದ ಹಾವು ಏಣಿ ಆಟ ಅಂತಿಮ ಘಟ್ಟ ತಲುಪಿರುವ ಸಮಯದಲ್ಲಿ ಈ ಬೆಳವಣಿಗೆಯ ಪರಿಣಾಮಗಳ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿದ ಡಾ. ಶಾಸ್ತ್ರಿ ಅವರು ಇದಕ್ಕಾಗಿ ಕಾಂಗ್ರೆಸ್ ಭಾರೀ ಬೆಲೆ ತೆರಬೇಕಾಗಬಹುದು ಎಂದಿದ್ದಾರೆ.
ಕಾಂಗ್ರೆಸ್ ಗೇ ಹೆಚ್ಚಿನ ನಷ್ಟ ಯಾಕೆ?
ಈ ಬೆಳವಣಿಗೆಯಿಂದ ಕಾಂಗ್ರೆಸ್ಸಿಗೇ ಹೆಚ್ಚಿನ ನಷ್ಟವಾಗಲಿದೆ. ಏಕೆಂದರೆ ರಾಜಿನಾಮೆ ನೀಡಿದ ಹೆಚ್ಚಿನ ಶಾಸಕರು ಕಾಂಗ್ರೆಸ್ಸಿನವರು. ಮಾತ್ರವಲ್ಲ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಪಡೆಯಲು ಯಶಸ್ವಿಯಾಗದೆ ಹೋದಲ್ಲಿ, ಕಾಂಗ್ರೆಸ್ ಮತ್ತಷ್ಟು ಶಾಸಕರನ್ನು ಕಳೆದುಕೊಳ್ಳಬಹುದು. ಅದೂ ಅಲ್ಲದೆ, ಈ ಎಲ್ಲ ಬೆಳವಣಿಗೆಯಿಂದ ಕರ್ನಾಟಕದ ಜನರಿಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಬಗ್ಗೆ ಸಿಂಪತಿ ಹುಟ್ಟಬಹುದು ಎಂಬ ನಿರೀಕ್ಷೆಯೇನಾದರೂ ಇದ್ದರೆ ಅದು ಶುದ್ಧ ಸುಳ್ಳು. ಅಧಿಕಾರಕ್ಕೆ ಬಂದ ಲಾಗಾಯ್ತೂ ರಾಜ್ಯದ ಅಭಿವೃದ್ಧಿಗಿಂತ ಸರ್ಕಾರ ಉಳಿಸಿಕೊಳ್ಳುವ ಹೋರಅಟದಲ್ಲೇ ಸಮ್ಮಿಶ್ರ ಸರ್ಕಾರ ಹೆಣಗಾಡುತ್ತಿರುವುದನ್ನು ಜನ ನೋಡಿದ್ದಾರೆ, ರೋಸಿ ಹೋಗಿದ್ದಾರೆ!
ಪಕ್ಷದಲ್ಲಿ ಮತ್ತಷ್ಟು ಬಿರುಕು
ಸರ್ಕಾರ ಉರುಳಿದರೆ ಕಾಂಗ್ರೆಸ್ ನಲ್ಲಿ ಮತ್ತಷ್ಟು ಬಿರುಕು ಮೂಡುವುದು ಸಹಜ. ಈಗಾಗಲೇ ಶಾಸಕರ ಸ್ಥಾನ ತೊರೆದಿರುವ ಅತೃಪ್ತರ ಹೊರತಾಗಿಯೂ, ಶಾಸಕರಾಗಿದ್ದುಕೊಂಡೇ ಪಕ್ಷದ ಬಗ್ಗೆ ಅತೃಪ್ತಿ ಹೊಂದಿದವರಿದ್ದಾರೆ. ಅವರೆಲ್ಲರೂ ಸಿಡಿದೇಳಬಹುದು. ನಾಲ್ಕಾರು ಬಣಗಳಾಗಿ ಪಕ್ಷದಲ್ಲಿ ಒಗ್ಗಟ್ಟಿಲ್ಲದಂತಾಗಬಹುದು.
ಕನಿಕರ ಹುಟ್ಟಿಸುವಂಥ ಭಾಷಣ ಮಾಡಿ ನಿರ್ಗಮನಕ್ಕೆ ಸಿದ್ಧರಾಗ್ತಾರಾ ಕುಮಾರಸ್ವಾಮಿ?
ಜನರ ವಿಶ್ವಾಸವನ್ನೂ ಕಳೆದುಕೊಳ್ಳಬೇಕಾಗಬಹುದು
ಹಾಗೆ ನೋಡುವುದಕ್ಕೆ ಹೋದರೆ ಕರ್ನಾಟಕದಲ್ಲಿ ಈಗಿರುವ ಸರ್ಕಾರ ಜನಾದೇಶದ ಸರ್ಕಾರವಲ್ಲ. ವಿಧಾನಸಬೆ ಚುನಾವಣೆಯ ನಂತರ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಬಿಜೆಪಿ. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕ ನಾಟಕೀಯ ತಿರುವಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಗೆ ಬೇಷರತ್ ಬೆಂಬಲ ಘೋಷಿಸಿಬಿಟ್ಟರು. 'ಯಾವ ಕಾರಣಕ್ಕೂ ಜೆಡಿಎಸ್ ಜೊತೆ ಕೈಜೋಡಿಸುವುದಿಲ್ಲ' ಎಂದಿದ್ದ ಆಣೆ ಪ್ರಮಾಣಗಳು ಮರೆತಿದ್ದವು. ಆದರೆ ಅವನ್ನೆಲ್ಲ ಜನರು ಮರೆತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜೆಡಿಎಸ್ ಜೊತೆ ಕಾಂಗ್ರೆಸ್ ಕೈಜೋಡಿಸಿದ್ದು, ಅದರಲ್ಲೂ ಸಿದ್ದರಾಮಯ್ಯ ಮತ್ತು ದೇವೇಗೌಡರು ಒಂದಾಗಿದ್ದನ್ನು ಅವಕಾಶವಾದಿ ರಾಜಕಾರಣದ ನಿದರ್ಶನ ಎಂದೇ ಜನ ವ್ಯಾಖ್ಯಾನಿಸಿದರು. ಮೈತ್ರಿ ಸರ್ಕಾರದಲ್ಲಿ ತಾನು ಮೂಲೆಗುಂಪಾಗುತ್ತಿರುವುದು ಗಮನಕ್ಕೆ ಬರುತ್ತದ್ದಂತೆಯೇ ಸಿದ್ದರಾಮಯ್ಯ ಅವರೂ ಸಿಡಿದೆದ್ದರು. ಆದರೆ ಅದನ್ನು ನೇರವಾಗಿ ತೋರಿಸಲಿಲ್ಲ. ಮೂಲ ಕಾಂಗ್ರೆಸ್ಸಿಗರ ಕಡೆಗಣನೆ, ಜೆಡಿಎಸ್ ಶಾಸಕರಿಗೆ ಹೆಚ್ಚಿನ ಮಣೆ, ಮೈತ್ರಿ ಪಕ್ಷದ ಕುರಿತು ಪರಸ್ಪರ ದೋಶಾರೋಪ, ಅದೂ ಬಹಿರಂಗವಾಗಿ... ಈ ಎಲ್ಲವೂ ಸೇರಿ ಜೆಡಿಎಸ್ ಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ಬಗ್ಗೆ ಜನರಲ್ಲಿ ಬೇಸರ ಮೂಡುವುದಕ್ಕೆ ನೆರವಾಯಿತು!
ಲೋಕಸಸಭೆ ಚುನಾವಣೆ
ಲೋಕಸಭೆ ಚುನಾವಣೆ ಮುಗಿಯುವುದನ್ನೇ ಕಾದಿದ್ದ ಬಿಜೆಪಿ ಇದೀಗ ತನ್ನ ಆಟ ಆರಂಭಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರನ್ನು ನಿಯಂತ್ರಿಸಲು, ಬುದ್ಧಿ ಹೇಳಲು ಕಾಂಗ್ರೆಸ್ ಹೈಕಮಾಂಡ್ ಈಗ ಮೊದಲಿನಷ್ಟು ಶಕ್ತಿಶಾಲಿಯಾಗಿಲ್ಲ. ಲೋಕಸಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡ ಪಕ್ಷದ ಹೈಕಮಾಂಡ್ ನಾಯಕರಿಗೆ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಬುದ್ಧಿವಾದ ಹೇಳುವಷ್ಟು ನೈತಿಕತೆ ಇದೆಯೇ ಎಂಬ ಪ್ರಶ್ನೆ ಎದುರಾದರೆ ಉತ್ತರಿಸುವವರು ಯಾರು? ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಮೈತ್ರ ಮಾಡಿಕೊಂಡಾದರೂ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಭವಿಷ್ಯ ಚಿಂತಾಜನಕವಾಗಿದೆ.
ಸ್ಪೀಕರ್ ಜತೆ ಸಿದ್ದರಾಮಯ್ಯ, ಕುಮಾರಸ್ವಾಮಿ ಬಿಸಿ ಬಿಸಿ ಚರ್ಚೆ
ಹಾಗಂತ ಬಿಜೆಪಿಗೂ ಲಾಭವೇನಿಲ್ಲ
ಈ ಎಲ್ಲ ಬೆಳವಣಿಗೆಯ ನಂತರ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಅದು ಎಷ್ಟು ದಿನ? ಈ ಬೆಳವಣಿಗೆಯಿಂದ ಬಿಜೆಪಿಗೆ ಅಧಿಕಾರ ಸಿಕ್ಕೀತೆ ವಿನಃ, ಸುಭದ್ರ ಸರ್ಕಾರ ರಚಿಸುವ ಅದರ ಕನಸು ಕನಸಾಗಿಯೇ ಉಳಿಯಬಹುದು. ಕಾಂಗ್ರೆಸ್ ನಿಂದ ಬಂಡಾಯ ಎದ್ದು ಬಂದ ಶಾಸಕರಿಗೆ ನ್ಯಾಯ ಒದಗಿಸಲು ಮುಂದಾದರೆ ಬಿಜೆಪಿ ನಾಯಕರ ನಿಷ್ಠುರ ಕಟ್ಟಿಕೊಳ್ಳಬೇಕಾಗಬಹುದು. ಅತೃಪ್ತರ ಅಹವಾಲು ಆಲಿಸದೆ ಇದ್ದಲ್ಲಿ ಈಗ ಸಮ್ಮಿಶ್ರ ಸರ್ಕಾರಕ್ಕೆ ಬಂದ ಗತಿಯೇ ಬರಬಹುದು!