ಶಿರಾಡಿ ಘಾಟ್ ನಲ್ಲಿ ಕಾಸಿದ್ದವನೇ ಬಾಸ್, ಡಿಸಿ ಅಲ್ಲ ಅವ್ನ ಅಪ್ಪನಿಗೆ ಹೇಳು
ಹಾಸನ/ಮಂಗಳೂರು, ಸೆ 1: ಗುಡ್ಡ ಕುಸಿತದ ಕಾರಣದಿಂದ ಬಂದ್ ಆಗಿರುವ, ಹಾಸನ ಮತ್ತು ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಲ್ಲಿ ಅಧಿಕಾರಿಗಳ ಕೈಬಿಸಿ ಮಾಡಿದರೆ, ಏನೂ ತೊಂದರೆಯಿಲ್ಲದೆ ಘಾಟ್ ನಲ್ಲಿ ಸಂಚರಿಸಬಹುದು ಎನ್ನುವ ಸುದ್ದಿ ಈಗ ನಿಜವಾಗಿದೆ.
ಭಾರೀ ವಾಹನಗಳಿಗೆ ಅಲ್ಲದಿದ್ದರೂ, ಬಸ್ ಮತ್ತು ಇತರ ವಾಹನಗಳಿಗೆ ಈಗಿಂದೀಗಲೇ ಸಂಚಾರಕ್ಕೆ ಮುಕ್ತ ಮಾಡಿಕೊಡಬಹುದು ಎನ್ನುವ ಕೂಲಂಕುಷ ವರದಿಯ ನಂತರವೂ, ಹೆದ್ದಾರಿಯನ್ನು ಸಾರ್ವಜನಿಕ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತ ಮಾಡಿಕೊಡಿ ಎಂದು ಸೂಚನೆ ನೀಡಿದ್ದರು.
ಆದರೆ, ಮುಂದಿನ ಆರು ತಿಂಗಳುಗಳ ಕಾಲ ಶಿರಾಡಿ ಘಾಟ್ ನಲ್ಲಿ ಸಂಚಾರಕ್ಕೆ ಅವಕಾಶವಿಲ್ಲ ಎಂದು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಎಚ್ ಡಿ ರೇವಣ್ಣ ಹೇಳಿಕೆಯನ್ನು ನೀಡಿದ್ದರು. ಆದರೆ, ಸರಕಾರದ ಈ ಕಣ್ಣುಕಟ್ಟಿನ ಆದೇಶವನ್ನು ಅಧಿಕಾರಿಗಳು ಪಾಲಿಸದೇ, ದುಡ್ಡು ಕೊಟ್ಟವರಿಗೆ ಮತ್ತು ವಿಐಪಿಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ವಿಷಯ ಸುದ್ದಿಯಲ್ಲಿತ್ತು.

ಈ ಸುದ್ದಿಗೆ ಪುಷ್ಟಿ ನೀಡುವಂತೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಾಹನಗಳಿಗೆ ತಲಾ ಐನೂರು ರೂಪಾಯಿ ಲಂಚ ಪಡೆದುಕೊಂಡು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ದೃಶ್ಯವಿರುವ ವಿಡಿಯೋ ಬಹಿರಂಗವಾಗಿದೆ. ಸಕಲೇಶಪುರ ಕಡೆಯಿಂದ ವಾಹನಗಳು ನಿರಂತರವಾಗಿ ಗುಂಡ್ಯ ಕಡೆಗೆ ಬರುತ್ತಿದ್ದು, ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಗುಂಡ್ಯದಲ್ಲೇ ಬೀಡು ಬಿಟ್ಟಿರುವ ಭಾರೀ ಗಾತ್ರದ ವಾಹನ ಚಾಲಕರೇ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಹಿಂದಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸುವ ಈ ವಿಡಿಯೋದಲ್ಲಿ, ಲಾರಿ ಚಾಲಕ ನೀವು ಹಣ ತೆಗೆದುಕೊಳ್ಳುತ್ತಿರುವ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದಾಗ, ಆ ಅಧಿಕಾರಿ 'ಡಿಸಿಗೆ ಅಲ್ಲ.. ಅವರ ಅಪ್ಪನಿಗೆ ಹೇಳು' ಎನ್ನುವ ಉದ್ದಟತನದ ಹೇಳಿಕೆ ವಿಡಿಯೋದಲ್ಲಿ ಸೆರೆಯಾಗಿದೆ.

ರಾತ್ರಿ ಹೊತ್ತು ಘನವಾಹನಗಳೂ ಇಲ್ಲಿ ಸಂಚರಿಸುತ್ತಿವೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿತ್ತು. ಶಿರಾಡಿಡ್ ಘಾಟ್ 'ಸತ್ಯ ಶೋಧನೆ' ಮಾಡಲು ಹೊರಟ ಸ್ಥಳೀಯರ ತಂಡವನ್ನು ಪೊಲೀಸರು ತಡೆದಿದ್ದರು. ಜಿಲ್ಲಾಡಳಿತದ ಕಟ್ಟಾಜ್ಞೆಯನ್ನು ಅಧಿಕಾರಿಗಳು ಕ್ಯಾರೇ ಮಾಡುತ್ತಿಲ್ಲ. ಒಟ್ಟಿನಲ್ಲಿ, ಕಾಸು ಮತ್ತು ಅಧಿಕಾರವಿದ್ದರೆ, ಶಿರಾಡಿ ಘಾಟ್ ನಲ್ಲಿ ಯಾರು ಬೇಕಾದರೂ ಸಂಚರಿಸಬಹುದಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ
ಕಡಲತಡಿಯ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಳೆದ 20 ದಿನಗಳಿಂದ ಬಂದ್ ಆಗಿದೆ. ಈ ಪ್ರಮುಖ ಸಂಪರ್ಕ ಕೊಂಡಿ ಯಾವಾಗ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಬಕ ಪಕ್ಷಿಗಳಂತೆ ಜನರು ಕಾದು ಕುಳಿತಿದ್ದಾರೆ. ಗುಡ್ಡ ಕುಸಿತದ ಸರಣಿ ಘಟನೆಗಳು ಸಂಭವಿಸಿದ ಪರಿಣಾಮ ಅಪಾಯದ ಆತಂಕದ ನಡುವೆ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಆದರೆ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಈಗ ಸದ್ಯದಲ್ಲೇ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತಗೊಳ್ಳುವ ಎಲ್ಲಾ ಸೂಚನೆಗಳು ಗೋಚರಿಸತೊಡಗಿದೆ.

ಅಡ್ಡಹೊಳೆಯಿಂದ ಕೆಂಪುಹೊಳೆಯವರೆಗಿನ 13 ಕಿಲೋ ಮೀಟರ್ ರಸ್ತೆ
ಭಾರೀ ಮಳೆಯ ಕಾರಣ ಒಂದೆಡೆ ರಸ್ತೆಯ ಕೆಳ ಭಾಗದಿಂದ ಮಣ್ಣು ಕುಸಿಯುತ್ತಿದ್ದರೆ, ಇನ್ನೊಂದೆಡೆ ಗುಡ್ಡ ಕುಸಿದು ರಸ್ತೆಯ ಮೇಲೆ ಬೀಳುತ್ತಿತ್ತು. ಘಾಟ್ ರಸ್ತೆಯಲ್ಲಿ ಸರಣಿ ಗುಡ್ಡ ಕುಸಿತ ಘಟನೆ ನಡೆದು, ಇನ್ನು ಕೆಲವು ಕಡೆಗಳಲ್ಲಿ ಗುಡ್ಡಗಳು ಕುಸಿಯುವ ಅಪಾಯ ಎದುರಾಗಿತ್ತು. ಮತ್ತೊಂದೆಡೆ ರಸ್ತೆಯ ತಡೆಗೋಡೆ ಕುಸಿದು ಬಿದ್ದವು. ಅಡ್ಡಹೊಳೆಯಿಂದ ಕೆಂಪುಹೊಳೆಯವರೆಗಿನ 13 ಕಿಲೋ ಮೀಟರ್ ರಸ್ತೆಯ ಸಂಪೂರ್ಣ ಕಾಂಕ್ರೀಕರಣ ಕಾಮಗಾರಿಯೂ ಮುಗಿದಿತ್ತು. ಆದರೆ ಈ ರಸ್ತೆಯ ಮೂರು ತಿರುವುಗಳಲ್ಲಿ ಕಾಂಕ್ರೀಟ್ ರಸ್ತೆಗೆ ನಿರ್ಮಿಸಿದ ತಡೆಗೋಡೆ ಜಾರಿ ಕೆಂಪುಹೊಳೆ ಸೇರಿತ್ತು. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.

ಕುಸಿದಿದ್ದ ರಸ್ತೆ ತಿರುವುಗಳ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ
ಕಳೆದ 20 ದಿನಗಳಿಂದ ಶಿರಾಡಿ ರಸ್ತೆ ಬಂದ್ ಮಾಡಿ ರಸ್ತೆ ಮೇಲೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣು ಹಾಗು ಕಲ್ಲು ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. 6 ಜೆಸಿಬಿ ಯಂತ್ರಗಳ ಸಹಾಯದಿಂದ ಈಗಾಗಲೇ ರಸ್ತೆ ಮೇಲೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣನ್ನು ತೆರವುಗೊಳಿಸಲಾಗಿದೆ. ರಸ್ತೆಗಳ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕುಸಿದಿದ್ದ ರಸ್ತೆ ತಿರುವುಗಳ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಈ ಅಪಾಯಕಾರಿ ತಿರುವುಗಳಲ್ಲಿ ರಿಫ್ಲೆಕ್ಟರ್ಸ್ ಗಳನ್ನು ಅಳವಡಿಸುವ ಕಾರ್ಯ ನಡೆಯಬೇಕಿದೆ. ಅಲ್ಲದೆ ಗುಂಡ್ಯಾ ಗಡಿಭಾಗದಿಂದ ಮಾರನಹಳ್ಳಿವರೆಗೆ ಕುಸಿದಿದ್ದ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.

ಟ್ರಕ್ ಚಾಲಕರು ಶಿರಾಡಿ ಘಾಟ್ ನಲ್ಲಿ ಸಿಲುಕಿ ಕೊಂಡಿದ್ದಾರೆ
ಕಳೆದ 20 ದಿನಗಳಿಂದ ಟ್ರಕ್ ಚಾಲಕರು ಶಿರಾಡಿ ಘಾಟ್ ನಲ್ಲಿ ಸಿಲುಕಿ ಕೊಂಡಿದ್ದು ಇತ್ತ ಚಾರ್ಮಾಡಿ ಘಾಟ್ ನಲ್ಲೂ ಹೋಗಲಾರದೆ ಗಾಳಿ-ಮಳೆಗೆ ರಸ್ತೆಯಲ್ಲೇ ದಿನದೂಡುತ್ತಿದ್ದಾರೆ. ಪಂಜಾಬ್ ಮೂಲದ 7 ಟ್ರಕ್ ಚಾಲಕರು ಶಿರಾಡಿ ಘಾಟ್ ಚೆಕ್ ಪೋಸ್ಟ್ ಗುಂಡ್ಯಾ ಬಳಿ ರಸ್ತೆಯಲ್ಲೇ ಪ್ಲಾಸ್ಟಿಕ್ ಟೆಂಟ್ ನಿರ್ಮಿಸಿದ್ದು, ರಸ್ತೆಯಲ್ಲಿಯೇ ಊಟ, ನಿದ್ದೆ ಮಾಡುತ್ತಿದ್ದಾರೆ. ಇತ್ತ ಕೈಯಲ್ಲಿ ಹಣವೂ ಖಾಲಿಯಾಗಿದ್ದು, ಮಳೆಗೆ ಮಲಗೋಕೂ ಆಗದೆ ಒದ್ದಾಡುತ್ತಿದ್ದು ಘಾಟ್ ರಸ್ತೆ ತೆರವುಗೊಳ್ಳುವ ದಿನವನ್ನು ಕಾಯುತ್ತಿದ್ದಾರೆ.

ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ
ಶಿರಾಡಿ ಘಾಟ್ ಬಂದ್ ಆದಂಗಿನಿಂದ ಅವಳಿ ಜಿಲ್ಲೆಯ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಧಾರ್ಮಿಕ ಕೇಂದ್ರಗಳು, ಪ್ರವಾಸೀ ತಾಣಗಳ ಮೇಲೂ ಇದರ ಪರಿಣಾಮ ಬೀರಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹದಿಮೂರು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಗೆದ್ದದ್ದು ಒಂದೇ ಸ್ಥಾನ, ಜೆಡಿಎಸ್ ಇಲ್ಲಿ ಠೇವಣಿಯೂ ಸಂಪಾದಿಸಿಲ್ಲ, ಮಿಕ್ಕೆಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಿತ್ತು. ಸರಕಾರದ ಅಸಡ್ದೆಗೆ ಇದೂ ಒಂದು ಕಾರಣ ಯಾಕಿರಬಾರದು ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications